ನಿಗೂಢ ಕಾಯಿಲೆಯ ಕಹಿ ಪ್ರಭಾವ :ಒಂದೇ ತಿಂಗಳಲ್ಲಿ 13 ಸಾವು, ಭೀತಿಯಲ್ಲಿರುವ ಗ್ರಾಮ!

ಛತ್ತೀಸ್ಗಢ : ಇಲ್ಲಿನ ಗ್ರಾಮವೊಂದರಲ್ಲಿ ಅಚ್ಚರಿಯ ರೀತಿಯಲ್ಲಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿಗೂಢ ಕಾಯಿಲೆಗೆ ಜನರು ಸಾಲು ಸಾಲಾಗಿ ಸಾವನ್ನಪ್ಪುತ್ತಿದ್ದಾರೆ. ಒಂದೇ ತಿಂಗಳಲ್ಲಿ 13 ಜನರು ಪ್ರಾಣ ಬಿಟ್ಟಿದ್ದಾರೆ. ಒಂದರ ನಂತರ ಒಂದು ಸಾವು ಸಂಭವಿಸುತ್ತಿರುವುದು ಗ್ರಾಮಸ್ಥರಲ್ಲಿ ತೀವ್ರ ಭೀತಿ ಉಂಟು ಮಾಡಿದೆ.ಈ ‘ಸಾವಿನ ಹಳ್ಳಿ’ಯಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಲು ಆರೋಗ್ಯ ಇಲಾಖೆ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಊರಿನ ಎಲ್ಲರ ರಕ್ತಪರೀಕ್ಷೆ ನಡೆಸುತ್ತಿದ್ದಾರೆ. ಆದರೆ, ಸಾವಿಗೆ ನಿಖರ ಕಾರಣ ಮಾತ್ರ ಇನ್ನೂ ಪತ್ತೆಯಾಗಿಲ್ಲ.ಛತ್ತೀಸ್ಗಢ ಮತ್ತು ಒಡಿಶಾ ಗಡಿ ಭಾಗದಲ್ಲಿರುವ ಧನಿಕೊರ್ತಾ ಸಾವಿನ ಸೂತಕಕ್ಕೆ ತುತ್ತಾದ ಗ್ರಾಮ. ಸುಕ್ಮಾ ಜಿಲ್ಲಾ ಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮದ ಜನಸಂಖ್ಯೆ 620. ಕಳೆದ ಒಂದು ತಿಂಗಳಿನಿಂದ ಇಲ್ಲಿ ನಿರಂತರವಾಗಿ ಸಾವುಗಳು ಸಂಭವಿಸುತ್ತಿವೆ. ದೇಹದಲ್ಲಿ ಊತ ಕಾಣಿಸಿಕೊಂಡು, ಕೈ, ಕಾಲು, ಹೊಟ್ಟೆ ಮತ್ತು ಸೊಂಟದಲ್ಲಿ ವಿಪರೀತ ನೋವು ಉಂಟಾಗುತ್ತದೆ. ಇದರಿಂದ ಬಳಲುತ್ತಿರುವವರು ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಹಳ್ಳಿಯಲ್ಲಿ ವೈದ್ಯಕೀಯ ಶಿಬಿರ ಆರಂಭ: ಗ್ರಾಮದಲ್ಲಿನ ಸಾವಿನ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಆರೋಗ್ಯ ತಂಡವನ್ನು ಗ್ರಾಮಕ್ಕೆ ರವಾನಿಸಲಾಗಿದ್ದು, ಇಲ್ಲಿ ವೈದ್ಯಕೀಯ ಶಿಬಿರ ಆರಂಭಿಸಲಾಗಿದೆ. ಊರಿನ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.ಸಾವಿಗೆ ಕಾರಣ ಹೇಳಿದ ಜಿಲ್ಲಾ ಆರೋಗ್ಯಾಧಿಕಾರಿ: ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಕಪಿಲ್ ಕಶ್ಯಪ್, ಗ್ರಾಮಸ್ಥರು ದೇಹದಲ್ಲಿ ನೋವಾಗುತ್ತಿರುವ ಬಗ್ಗೆ ಹೇಳುತ್ತಿದ್ದರೆ, ಆರೋಗ್ಯ ಇಲಾಖೆ ಸಿಬ್ಬಂದಿ ಶೀತ, ಕೆಮ್ಮು ಮತ್ತು ಜ್ವರದ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ. ಅರಿವಿನ ಕೊರತೆಯಿಂದಾಗಿ, ಗ್ರಾಮಸ್ಥರು ಆಸ್ಪತ್ರೆಗಳಿಗೆ ಹೋಗುವುದಿಲ್ಲ. ತಾವೇ ಗಿಡಮೂಲಿಕೆಗಳಿಂದ ಚಿಕಿತ್ಸೆ ಪಡೆಯುವುದು, ಮಾಟಮಂತ್ರವನ್ನು ಅವಲಂಬಿಸುತ್ತಿದ್ದಾರೆ. ಇದು ಜೀವಕ್ಕೆ ಅಪಾಯ ತರುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ.ಗ್ರಾಮದಲ್ಲಿ ಎಲ್ಲರ ಆರೋಗ್ಯ ತಪಾಸಣೆ: ಗ್ರಾಮದಲ್ಲಿ ಆಗುತ್ತಿರುವ ಸಾವಿನ ಬಗ್ಗೆ ಮಾಹಿತಿ ತಿಳಿದ ನಂತರ ಎಲ್ಲ ಗ್ರಾಮಸ್ಥರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ರೋಗ ಲಕ್ಷಣಗಳು ಕಂಡುಬಂದವರನ್ನು ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. 3 ದಿನಗಳ ಶಿಬಿರದಲ್ಲಿ 80 ಗ್ರಾಮಸ್ಥರನ್ನು ಪರೀಕ್ಷಿಸಲಾಗಿದೆ. ಈ ವೇಳೆ 9 ಮಂದಿಯಲ್ಲಿ ಮಲೇರಿಯಾ ಇರುವುದು ದೃಢಪಟ್ಟಿದೆ. ಸಿಡುಬು ಮತ್ತು ಕಾಮಾಲೆಯ ಲಕ್ಷಣಗಳಿವೆ ಎಂದು ಅವರು ತಿಳಿಸಿದ್ದಾರೆ.