ಬಿಐಎಮ್ಎಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೃತದೇಹಗಳ ಕೊರತೆ – ಶಿಕ್ಷಣಕ್ಕೆ ತೊಡಕು

ಬಳ್ಳಾರಿ : ಇಲ್ಲಿನ ಬಿಐಎಮ್ಎಸ್ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರ ಬೋಧಿಸಲು ಮೃತದೇಹಗಳ ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೃತದೇಹಗಳು ಸಿಗದೇ ಇರುವುದು ತೊಂದರೆಯಾಗಿದೆ.”ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಗಳ ಪ್ರಕಾರ, ಎಂಬಿಬಿಎಸ್ನ 10 ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧನೆ ಉದ್ದೇಶಕ್ಕೆ ಕನಿಷ್ಠ ಒಂದು ಮೃತದೇಹ ಬೇಕು. ಆದರೆ, ವಿಮ್ಸ್ನಲ್ಲಿ ಲಭ್ಯವಿರುವ ಮೃತದೇಹಗಳ ಸಂಖ್ಯೆ ಕೇವಲ 6 ಮಾತ್ರ. ವಿಮ್ಸ್ನಲ್ಲಿ ಪ್ರತಿ ವರ್ಷ 200 ವಿದ್ಯಾರ್ಥಿಗಳು ಎಂಬಿಬಿಎಸ್ಗೆ ಪ್ರವೇಶ ಪಡೆದುಕೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ ಕನಿಷ್ಠ 20 ಮೃತದೇಹಗಳು ಅಧ್ಯಯನಕ್ಕೆ ಇರಬೇಕಾಗಿತ್ತು. ಆದರೆ, ಸದ್ಯ ಆರು ಮೃತದೇಹಗಳಷ್ಟೇ ಇವೆ. ಇನ್ನೂ 14 ಮೃತದೇಹಗಳು ಬೇಕಾಗಿವೆ. ಇದರಿಂದ ಆಳ ಅಧ್ಯಯನ, ಸಂಶೋಧನೆಗೆ ತೊಡಕಾಗುತ್ತಿದೆ” ಎಂದು ವೈದ್ಯರು ತಿಳಿಸಿದ್ದಾರೆ.”ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಅಧ್ಯಯನ ಬಹಳ ಮಹತ್ವದ್ದು. ಮನುಷ್ಯನ ದೇಹದ ಪ್ರತಿಯೊಂದು ಅಂಗದ ಬಗ್ಗೆ ವಿವರಿಸಿ, ತರಬೇತಿ ನೀಡಲಾಗುತ್ತದೆ. ಮೃತದೇಹಗಳ ಕೊರತೆ ಉಂಟಾದರೆ ವಿದ್ಯಾರ್ಥಿಗಳ ಓದಿನ ಮೇಲೆ ಪರಿಣಾಮ ಉಂಟಾಗುತ್ತದೆ. ಸರ್ಕಾರಗಳೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದಾನಿಗಳು ಮುಂದೆ ಬಂದು ದೇಹದಾನದ ವಾಗ್ದಾನ ನೀಡಬೇಕು” ಎಂದಿದ್ದಾರೆ.ವಿಮ್ಸ್ಗೆ 2022ರಲ್ಲಿ ಒಂದು, 2023ರಲ್ಲಿ ಎರಡು, 2024ರಲ್ಲಿ ಎರಡು ಸೇರಿ ಈ ಮೂರು ವರ್ಷಗಳಲ್ಲಿ ಒಟ್ಟು 5 ಮೃತದೇಹಗಳು ಬಂದಿವೆ ಎಂದು ಸರ್ಕಾರವೇ ನೀಡಿರುವ ದಾಖಲೆಗಳಿಂದ ಗೊತ್ತಾಗಿದೆ. ರಾಜ್ಯದಲ್ಲಿ ಮೃತದೇಹಗಳ ತೀವ್ರ ಕೊರತೆ ಎದುರಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಪೈಕಿ ವಿಮ್ಸ್ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಕೊಡಗಿನ ವೈದ್ಯಕೀಯ ಸಂಸ್ಥೆ ಇದೆ. ಅಲ್ಲಿ 15 ಮೃತದೇಹಗಳ ಕೊರತೆ ಇದೆ ಎಂದು ತಿಳಿದುಬಂದಿದೆ. ಗದಗ್ನಲ್ಲಿ 10, ಬೀದರ್, ಚಿಕ್ಕಬಳ್ಳಾಪುರ, ಹಾವೇರಿಯಲ್ಲಿ ತಲಾ 9, ಹಾಸನ, ಚಿಕ್ಕಮಗಳೂರಿನಲ್ಲಿ 7 ಹಾಗೂ ಕೊಪ್ಪಳದ ವೈದ್ಯಕೀಯ ಸಂಸ್ಥೆಯಲ್ಲಿ 6 ಮೃತದೇಹಗಳ ಕೊರತೆ ಇದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.ಅಂಗಾಂಗ ದಾನದಲ್ಲಿ ಬಳ್ಳಾರಿ ಮುಂದು : ಅಂಗಾಂಗ ದಾನದಲ್ಲಿ ಬಳ್ಳಾರಿ ದೇಶದಲ್ಲೇ ಮುಂಚೂಣಿಯಲ್ಲಿರುವ ಜಿಲ್ಲೆಯಾಗಿದೆ. ಸುಮಾರು 7,839 ವಿವಿಧ ರೀತಿಯ ಅಂಗಾಂಗ ದಾನಕ್ಕೆ ಬಳ್ಳಾರಿಯ ನಾಗರಿಕರು ಪ್ರತಿಜ್ಞೆ ಮಾಡಿದ್ದಾರೆ. ಅದೇ ಕಾಳಜಿಯನ್ನು ದೇಹದಾನದ ವಿಚಾರದಲ್ಲೂ ಪ್ರದರ್ಶಿಸಬೇಕಾದ ಅಗತ್ಯವಿದೆ ಎನ್ನುತ್ತಾರೆ ವಿಮ್ಸ್ ವೈದ್ಯರು. ದೇಹರಚನೆ ಬಗ್ಗೆ ಅರಿಯಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಮೃತದೇಹಗಳು ಅತ್ಯಗತ್ಯ. ಸಮಾಜದಲ್ಲಿ ದೇಹ ದಾನದ ಕುರಿತು ಅರಿವು ಮೂಡಿಸುವ ಕಾರ್ಯ ಆಗಬೇಕಿದೆ.
