‘ಸರ್ಕಾರಿ ಹಣದಿಂದ ಬಾಬರಿ ಮಸೀದಿ ನಿರ್ಮಿಸಲು ನೆಹರೂ ಮುಂದಾಗಿದ್ದರು’: ಕಾಂಗ್ರೆಸ್ ವಿರುದ್ಧ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಂಭೀರ ಆರೋಪ!

ನವದೆಹಲಿ: ಸರ್ಕಾರಿ ಖಜಾನೆಯ ಹಣದಿಂದ ನೆಹರು (Jawaharlal Nehru) ಬಾಬರಿ ಮಸೀದಿ ನಿರ್ಮಿಸಲು ಮುಂದಾಗಿದ್ದರು ಅಂತ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಆರೋಪಿಸಿದ್ದಾರೆ.


ಸರ್ದಾರ್ ವಲ್ಲಭಭಾಯಿ ಪಟೇಲ್ರ (Sardar Patel) 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ವಡೋದರಾದಲ್ಲಿ ನಡೆದ ‘ಏಕತಾ ಮೆರವಣಿಗೆ’ಯನ್ನುದ್ದೇಶಿಸಿ ಮಾತನಾಡಿದ ಅವರು, ನೆಹರೂ ಅವರು ಸರ್ಕಾರಿ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಮುಂದಾಗಿದ್ದರು. ಆಗ ನೆಹರೂ ನಡೆಯನ್ನ ವಿರೋಧಿಸಿದ್ದ ಪಟೇಲರು ಆ ಸಮಯದಲ್ಲಿ ಸರ್ಕಾರಿ ಹಣದಿಂದ ಬಾಬರಿ ಮಸೀದಿ (Babri Masjid) ನಿರ್ಮಾಣವಾಗದಂತೆ ತಡೆದರು ಎಂದಿದ್ದಾರೆ.

ಸರ್ದಾರ್ ವಲ್ಲಭಭಾಯಿ ಪಟೇಲ್ ನಿಜವಾದ ಜಾತ್ಯತೀತವಾದಿ. ಅಪ್ರಯೋಜಕ ರಾಜಕೀಯವನ್ನ ನಂಬದವರು. ದೇಶದ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದರು. ಸೋಮನಾಥ ದೇವಾಲಯದ ಪುನರ್ ನಿರ್ಮಾಣ ವಿಚಾರದಲ್ಲಿ ನೆಹರು ವಿರೋಧ ವ್ಯಕ್ತಪಡಿಸಿದಾಗ ಪಟೇಲರು ಖಂಡಿಸಿದ್ದರು. ದೇವಾಲಯದ ನಿರ್ಮಾಣಕ್ಕೆ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ದೇಣಿಗೆ ಬಂದಿದ್ದು, ಟ್ರಸ್ಟ್ ರಚಿಸಲಾಗಿದೆ. ಸರ್ಕಾರಿ ಖಜಾನೆಯಿಂದ ಒಂದು ಪೈಸೆಯೂ ಖರ್ಚಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಪಟೇಲರ ಸ್ಮಾರಕವನ್ನೂ ನೆಹರು ವಿರೋಧಿಸಿದ್ದರು. ನೆಹರು ತಮಗೆ ತಾವೇ ಭಾರತರತ್ನ ಕೊಟ್ಟುಕೊಂಡರು ಅಂತ ರಾಜನಾಥ್ ಹೇಳಿದ್ದಾರೆ. ನೆಹರು ಬಗೆಗಿನ ರಾಜನಾಥ್ ಸಿಂಗ್ ಹೇಳಿಕೆಯನ್ನ ಕಾಂಗ್ರೆಸ್ ಖಂಡಿಸಿದ್ದು, ಇದಕ್ಕಿಂತ ಸುಳ್ಳು ಮತ್ತೊಂದಿಲ್ಲ ಅಂದಿದೆ
ಇದು ಪ್ರಮುಖ ವಿಷಯಗಳ ದಾರಿತಪ್ಪಿಸುವ ಯತ್ನ ಅಂತ ಪ್ರಿಯಾಂಕಾ ಗಾಂಧಿ ಟೀಕಿಸಿದ್ರೆ, ಇಂಥಹ ಮಾತಿಗೆ ಪ್ರತಿಕ್ರಿಯಿಸೋದೇ ವೇಸ್ಟ್ ಆಫ್ ಟೈಮ್ ಅಂತ ರಾಹುಲ್ ಗಾಂಧಿ ಹೇಳಿದ್ದಾರೆ.