ಕಾಂಗ್ರೆಸ್ನಲ್ಲಿ ಆಂತರಿಕ ಗಲಾಟೆ – ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಭವಿಷ್ಯವಾಣಿ ಮಾಡಿದ ರೇಣುಕಾಚಾರ್ಯ

ದಾವಣಗೆರೆ : ಕುರ್ಚಿಗಾಗಿ, ಅಧಿಕಾರಕ್ಕಾಗಿ ನಿರಂತರ ಗಲಾಟೆಯಾಗುವ, ಒಡೆದ ಮನೆಯಾದ ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ. ರಾಜ್ಯದಲ್ಲೂ ಮಹಾರಾಷ್ಟ್ರದಂತೆ ಕ್ಷಿಪ್ರ ಕ್ರಾಂತಿಯಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಡಾ.ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದಾಗ ಕಪ್ಪು, ಸಾಸರ್ಗಳಿಂದ ಪರಸ್ಪರ ಹೊಡೆದಾಡಿಕೊಂಡ ಇತಿಹಾಸ, ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕಿದೆ. ಇಂತಹ ಪಕ್ಷದಲ್ಲಿ ಡಿ.ಕೆ.ಶಿವಕುಮಾರ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಆಗುವುದಿಲ್ಲ ಎಂದರು.
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವೆನ್ನುವ ಕಾಂಗ್ರೆಸ್ಸಿನವರೇ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನಗೊಳ್ಳಲಿದೆ. ಕಾಂಗ್ರೆಸ್ ಒಡೆದು ಹೋಗಲಿದೆ. ಕೆಲವರು ಮುಖ್ಯಮಂತ್ರಿ ಅಂತಾರೆ, ಕೆಲವರು ಇಲ್ಲವೆನ್ನುತ್ತಾರೆ. ಇದೇ ಮುಖ್ಯಮಂತ್ರಿ ಕುರ್ಚಿ ವಿಚಾರಕ್ಕೆ ಕಾಂಗ್ರೆಸ್ಸಿನಲ್ಲಿ ಮತ್ತೆ ಗಲಾಟೆಯಾಗಲಿದೆ ಎಂದರು.
ಡಿ.ಕೆ.ಶಿವಕುಮಾರ ಮುಂಚೆ ಅಲ್ಪಸಂಖ್ಯಾತರು ತಮ್ಮ ಬ್ರದರ್ಸ್ ಅಂತಿದ್ದವರು, ಈಗ ತಾವು ಹುಟ್ಟಿದ್ದು ಹಿಂದೂವಾಗಿ, ಸಾಯುವುದೂ ಹಿಂದುವಾಗಿ ಎನ್ನುತ್ತಿದ್ದಾರೆ. ಇದು ಬೇರೆಯದ್ದೇ ಅರ್ಥವನ್ನು ಕೊಡುತ್ತಿದೆ. ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಮಾಡುವ ಮುನ್ನ ಪವರ್ ಶೇರಿಂಗ್ ಬಗ್ಗೆ ಮಾತುಕತೆಯಾಗಿದೆ ಎಂದು ಕೆಲ ಸಚಿವರು ಹೇಳುತ್ತಾರೆ. ಆದರೆ, ಮತ್ತೆ ಕೆಲವರು ಇಲ್ಲ ಎನ್ನುತ್ತಾರೆ. ಆದರೆ, ಡಿ.ಕೆ.ಶಿವಕುಮಾರ ಮಾತ್ರ ಮೌನವಾಗಿದ್ದಾರೆ. ಎಲ್ಲ ಸೇರಿ, ಒಡೆದ ಮನೆಯಾದ ಕಾಂಗ್ರೆಸ್ ಸರ್ಕಾರ ಶೀಘ್ರವೇ ಪತನವಾಗುತ್ತದೆ ಎಂದು ರೇಣುಕಾಚಾರ್ಯ ಹೇಳಿದರು.
ಕೋಟ್ ಚಿತ್ರರಂಗದವರ ನಟ್ಟು-ಬೋಲ್ಟ್ ಸರಿ ಮಾಡುತ್ತೇನೆಂಬುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಆದರೆ, ಡಿ.ಕೆ.ಶಿವಕುಮಾರ ನೀಡಿರುವ ಇಂತಹ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹೇಳಿಕೆಯನ್ನು ನೀಡುವುದು ಖಂಡನೀಯ.- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ