ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕಲು ಬಿಜೆಪಿ ಮಾಸ್ಟರ್ಪ್ಲಾನ್

ರಾಜ್ಯದಲ್ಲಿ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಕಟ್ಟಿ ಹಾಕುವ ಕುರಿತಂತೆ, ವಿಪಕ್ಷ ಬಿಜೆಪಿ ಮಾಸ್ಟರ್ಪ್ಲಾನ್ ರೂಪಿಸಲು ಸಭೆ ಸೇರಿತ್ತು. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರ ನೇತೃತ್ವದಲ್ಲಿ ಸೇರಿದ್ದ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಹಾಗಾದ್ರೆ, ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಡೆದಿದ್ದಾದ್ರೂ ಏನು.
ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಹಾಗೂ ಆಗಲಿದ ಗಣ್ಯರಿಗೆ ಸಂತಾಪ ಸೂಚನೆ ಮುಕ್ತಾಯವಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಬಳಿಕ ಸಿಎಂ ಸಿದ್ಧರಾಮಯ್ಯ ದಾಖಲೆಯ 16ನೇ ಬಜೆಟ್ ಮಂಡಿಸಲಿದ್ದಾರೆ. ಆದ್ರೆ, ಇದೆಲ್ಲದರ ಮಧ್ಯೆ ಬಜೆಟ್ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕೇಸರಿ ಪಡೆ ಭರ್ಜರಿ ಚಕ್ರವ್ಯೂಹವನ್ನೇ ರಚಿಸಲು ಪ್ಲಾನ್ ಮಾಡಿದೆ.
ಕಳೆದ ರಾತ್ರಿ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ಸಭೆಯಲ್ಲಿ ಸರ್ಕಾರವನ್ನು ಕಟ್ಟಿಹಾಕಲು ಹಲವು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಸರ್ಕಾರದ ವಿರುದ್ಧ ಎರಡು ಸದನದಲ್ಲೂ ಮುಗಿಬೀಳಲು ಬಿಜೆಪಿ ಪ್ಲಾನ್. ಮೈಕ್ರೋ ಫೈನಾನ್ಸ್ ವಿಚಾರವೇ ಬ್ರಹ್ಮಾಸ್ತ್ರ ಮಾಡಿಕೊಂಡಿದೆ. ಇನ್ನು ಗ್ಯಾರೆಂಟಿ ಘೋಷಣೆಗಳಿಂದ ಆಗಿರುವ ಎಡವಟ್ಟುಗಳನ್ನು ಬಿಂಬಿಸುವುದು, ದರ ಏರಿಕೆ ಪ್ರಸ್ತಾಪ, ಎಸ್ಸಿಪಿ, ಟಿಎಸ್ಪಿ ಅನುದಾನ ದುರ್ಬಳಕೆಯನ್ನು ಖಂಡಿಸುವುದು. ಬಿಜೆಪಿ ಅವಧಿಯ ನೂತನ ವಿವಿ ಮುಚ್ಚಲು ಹುನ್ನಾರ ಮಾಡ್ತಿರುವ ಸರ್ಕಾರಕ್ಕೆ ಚಾಟಿಬೀಸುವುದು. ಬಡವರಿಗೆ ಸಾಲದ ಹೊರೆ ಹೊರೆಸುತ್ತಿರುವ ಸರ್ಕಾರಕ್ಕೆ ಪಾಠ ಕಲಿಸುವುದು. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರವೇ ಕಾರಣ ಎಂದು ಮನವರಿಕೆ ಮಾಡಿಕೊಡಬೇಕು. ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿಗೆ ಸರ್ಕಾರ ಉತ್ತರಿಸಬೇಕು. ದಲಿತರ ಹೆಸರಿನಲ್ಲಿ ಲೂಟಿ ಹೊಡೆಯುತ್ತಿರುವ ಸರ್ಕಾರಕ್ಕೆ ಕಿವಿ ಹಿಂಡಬೇಕು. ಗ್ಯಾರೆಂಟಿಯಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದ್ದು ಇದಕ್ಕೆ ಸರ್ಕಾರದಿಂದ ಸಮರ್ಪಕ ಉತ್ತರ ಪಡೆಯುವ ಬಗ್ಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಇನ್ನು ಬಿಜೆಪಿ ಶಾಸಕಾಂಗ ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಉಭಯ ಸದನಗಳಲ್ಲೂ ನಾವು ಸರ್ಕಾರವನ್ನು ಕಟ್ಟಿ ಹಾಕುತ್ತೇವೆ. ಎಲ್ಲಾ ಶಾಸಕರುಗಳು ಸದನದಲ್ಲಿ ಮಾತನಾಡಬೇಕು ಎಂಬ ನಿಲುವು ಪ್ರಕಟಿಸಿದ್ದೇವೆ ಎಂದಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಇದು ನುಡಿದಂತೆ ನಡೆದ ಸರ್ಕಾರ ಅಲ್ಲ. ಎಡವಿರುವ ಸರ್ಕಾರ ಎಂದು ತರಾಟೆ ತೆಗೆದುಕೊಂಡ್ರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಸಾಲು ಸಾಲು ಎಡವಟ್ಟುಗಳನ್ನು ಮಾಡಿಕೊಂಡಿದೆ. ಸರ್ಕಾರದ ಎಡವಟ್ಟುಗಳನ್ನೇ ಅಸ್ತ್ರ ಮಾಡಿಕೊಳ್ಳಲು ಬಿಜೆಪಿಯೂ ಸಿದ್ಧವಾಗಿದೆ. ಆದ್ರೆ ಇದೆಲ್ಲಾ ಎಷ್ಟರಮಟ್ಟಿಗೆ ಯಶಸ್ಸು ಪಡೆಯಲಿದೆ ಎಂಬುದು ಅಧಿವೇಶನದ ಬಳಿಕವೇ ತಿಳಿಯಲಿದೆ.