ಏಕಾಂಗಿ ಹೋರಾಟಕ್ಕೆ ನಿರ್ಧಾರ: ಮುಂದಿನ ಚುನಾವಣೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್ ಚಿಂತನೆ; ರಾಜ್ಯಮಟ್ಟದಲ್ಲಿ ಮಾತ್ರ ಅಗತ್ಯವಿದ್ದರೆ ಮೈತ್ರಿ

ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ (Bihar Assembly Elections) ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ಗೆ (Congress) ಮುಂದೇನು ಅಂತ ದಿಕ್ಕು ತೋಚದಂತಾಗಿದೆ.

ನಿತೀಶ್-ಮೋದಿ (Nitish – Modi) ಬಿರುಗಾಳಿಗೆ ಮಹಾಘಟಬಂಧನ್ ಮಣ್ಣು ಮುಕ್ಕಿದೆ. ಈ ನಡುವೆ ʻಇಂಡಿʼ ಒಕ್ಕೂಟ ಮೈತ್ರಿ ಇತಿಹಾಸದ ಪುಟ ಸೇರುತ್ತಾ ಅನ್ನೋ ಚರ್ಚೆ ಶುರುವಾಗಿದೆ
ಹೌದು. ಇಂಡಿ ಮೈತ್ರಿ ಮುಂದುರಿಸದಿರಲು ಕಾಂಗ್ರೆಸ್ ಮುಂದಾಗಿದೆ. ಈ ಬಗ್ಗೆ ಸುದ್ದಿ ಹರಿದಾಡ್ತಿದ್ದು, ರಾಹುಲ್ ಗಾಂಧಿ ಕೂಡ ಇಂಡಿ ಮೈತ್ರಿಕೂಟಕ್ಕೆ ಅಂತ್ಯ ಹಾಡಲು ಒಪ್ಪಿಗೆ ಸೂಚಿಸಿದ್ದಾರೆ ಅಂತ ಹೇಳಲಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಇಂಡಿ ಒಕ್ಕೂಟ ಅಗತ್ಯ ಇಲ್ಲ. ಅಗತ್ಯ ಇದ್ರೆ ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳೋಣ. ಮುಂದಿನ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧೆಗೆ ಕಾಂಗ್ರೆಸ್ ಮುಂದಾಗಿದೆ ಅಂತ ಹೇಳಲಾಗ್ತಿದೆ.

ಬಿಹಾರದಲ್ಲಿ ಹೀನಾಯ ಸೋಲು
ಇತ್ತೀಚೆಗೆ ಮುಕ್ತಾಯಗೊಂಡ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ಜೆಡಿ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಆರ್ಜೆಡಿ 26 ಸ್ಥಾನ ಗಳಿಸಿದ್ರೆ, ಕಾಂಗ್ರೆಸ್ 6 ಸ್ಥಾನ ಗೆದ್ದು ಮುಖಭಂಗ ಅನುಭವಿಸಿತು. ರಾಹುಲ್ ಗಾಂಧಿ ಅವರು ಫಲ ಕೊಡಬಹುದೆಂದು ನಿರೀಕ್ಷಿಸಿದ್ದ ಮತ ಅಧಿಕಾರ ಯಾತ್ರೆ ಹಾಗೂ ವೋಟ್ ಚೋರಿ ಆರೋಪ ಕೈಕೊಟ್ಟಿತು. ಹೀಗಾಗಿ ಇನ್ಮುಂದೆ ʻಇಂಡಿʼ ಕೂಟದಿಂದ ಹೊರಬಂದು ರಾಷ್ಟ್ರಮಟ್ಟದಲ್ಲಿ ಏಕಾಂಗಿ ಹೋರಾಟ ನಡೆಸಲು ನಿರ್ಧಾರ ಕೈಗೊಂಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.