ದೆಹಲಿ ಕಾರ್ ಬಾಂಬ್ ಸ್ಫೋಟ: ಎನ್ಐಎ ತನಿಖೆಗೆ ದೊಡ್ಡ ಯಶಸ್ಸು; ಉಗ್ರ ಉಮರ್ ಉನ್ ನಬಿಯ ಮತ್ತೊಬ್ಬ ಪ್ರಮುಖ ಸಹಚರ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಬಂಧನ!

ನವದೆಹಲಿ: ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ (Delhi Car Blast) ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಸ್ಫೋಟದಲ್ಲಿ ಭಾಗಿಯಾಗಿರುವ ಭಯೋತ್ಪಾದಕನ ಮತ್ತೊಬ್ಬ ಪ್ರಮುಖ ಸಹಚರನನ್ನು ಬಂಧಿಸಿದೆ.

RC-21/2025/NIA/DLI ಪ್ರಕರಣದಲ್ಲಿ ಕಣಿವೆಯಲ್ಲಿದ್ದ NIA ತಂಡವು ಕಾಶ್ಮೀರಿ ನಿವಾಸಿಯೂ ಆಗಿರುವ ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಎಂಬಾತನನ್ನು ಅರೆಸ್ಟ್ ಮಾಡಿದೆ.
ಮಾರಕ ಕಾರ್ ಬಾಂಬ್ ಸ್ಫೋಟಕ್ಕೆ ಭಯೋತ್ಪಾದಕರಿಗೆ ಜಾಸಿರ್ ತಾಂತ್ರಿಕ ಸಹಾರ ನೀಡಿದ್ದಾನೆ ಎಂದು NIA ತನಿಖೆಗಳು ಬಹಿರಂಗಪಡಿಸಿವೆ. ಈತ ಸ್ಫೋಟಕ್ಕೆ ಮುಂಚಿತವಾಗಿ ಡ್ರೋನ್ಗಳನ್ನು ಮಾರ್ಪಡಿಸುವ ಮತ್ತು ರಾಕೆಟ್ಗಳನ್ನು ತಯಾರಿಸಲು ಪ್ರಯತ್ನಿಸುವ ಮೂಲಕ ಭಯೋತ್ಪಾದಕ ದಾಳಿ ನಡೆಸಲು ನೆರವಾಗಿದ್ದ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಖಾಜಿಗುಂಡ್ ನಿವಾಸಿಯಾಗಿರುವ ಆರೋಪಿ, ದಾಳಿಯ ಹಿಂದಿನ ಸಕ್ರಿಯ ಸಹ-ಸಂಚುಕೋರನಾಗಿದ್ದಾನೆ. ಭಯೋತ್ಪಾದಕ ಹತ್ಯಾಕಾಂಡವನ್ನು ಯೋಜಿಸಲು ಉಗ್ರ ಉಮರ್ ಉನ್ ನಬಿಯೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ.
ಬಾಂಬ್ ಸ್ಫೋಟದ ಹಿಂದಿನ ಪಿತೂರಿಯನ್ನು ಬಯಲು ಮಾಡಲು NIA ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಹಲವಾರು ತಂಡಗಳು ಹಲವಾರು ಸುಳಿವುಗಳನ್ನು ಅನುಸರಿಸುತ್ತಿವೆ. ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಲು ದೇಶಾದ್ಯಂತ ಶೋಧ ನಡೆಸುತ್ತಿವೆ.