ಗುರುನಾನಕ್ ಜಯಂತಿ: ‘ನೀವು ಸಿಖ್ಖರಲ್ಲ, ಹಿಂದೂಗಳು’; ಪಾಕಿಸ್ತಾನದಿಂದ 14 ಭಾರತೀಯ ಯಾತ್ರಿಕರಿಗೆ ಪ್ರವೇಶ ನಿರಾಕರಣೆ

ನವದೆಹಲಿ: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ 556ನೇ ಜನ್ಮದಿನ ಆಚರಿಸಲು ತೆರಳಿದ್ದ 14 ಭಾರತೀಯರಿಗೆ ಪ್ರವೇಶ ನಿರಾಕರಿಸಿ ಪಾಕಿಸ್ತಾನ (Pakistan) ವಾಪಸ್ ಕಳುಹಿಸಿದೆ.

ಗುರುನಾನಕ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್ಗೆ ಪ್ರಯಾಣಿಸುತ್ತಿದ್ದ ಯಾತ್ರಿಕರ ಗುಂಪಿನಲ್ಲಿ 14 ಮಂದಿ ಭಾರತೀಯರೂ ಇದ್ದರು. ಆರಂಭದಲ್ಲಿ ಅವರಿಗೆ ಪಾಕ್ ಪ್ರವೇಶಕ್ಕೆ ಅನುಮತಿಸಲಾಯಿತು. ನಂತರದಲ್ಲಿ, ‘ನೀವು ಸಿಖ್ಖರಲ್ಲ.. ಹಿಂದೂಗಳು’ ಎಂದು ಪ್ರವೇಶ ನಿರಾಕರಿಸಿ ವಾಪಸ್ ಕಳುಹಿಸಲಾಗಿದೆ.
ಕೇಂದ್ರ ಗೃಹ ಸಚಿವಾಲಯ ಪಾಕಿಸ್ತಾನಕ್ಕೆ ಭೇಟಿ ನೀಡಲು ಅನುಮತಿ ನೀಡಿದ್ದ ಸುಮಾರು 2,100 ಜನರಲ್ಲಿ ಈ 14 ಮಂದಿಯೂ ಸೇರಿದ್ದರು. ಇಸ್ಲಾಮಾಬಾದ್ ಸರಿಸುಮಾರು ಅದೇ ಸಂಖ್ಯೆಯ ಪ್ರಯಾಣ ದಾಖಲೆಗಳನ್ನು ನೀಡಿತ್ತು.
ಮಂಗಳವಾರ 1,900 ಜನರು ವಾಘಾ ಗಡಿ ದಾಟಿ ಪಾಕ್ಗೆ ಪ್ರವೇಶಿಸಿದ್ದರು. ಆದರೆ, ಅವರಲ್ಲಿ 14 ಮಂದಿ ಹಿಂದೂ ಯಾತ್ರಿಕರು. ಇವರೆಲ್ಲರೂ ಪಾಕಿಸ್ತಾನದಲ್ಲಿ ಜನಿಸಿದ ಸಿಂಧಿಗಳಾಗಿದ್ದು, ಅಲ್ಲಿನ ಸಂಬಂಧಿಕರನ್ನು ಭೇಟಿಯಾಗಲು ಭಾರತೀಯ ಪೌರತ್ವ ಪಡೆದಿದ್ದಾರೆ. ಅವರನ್ನು ವಾಪಸ್ ಕಳುಹಿಸಲಾಗಿದೆ.
‘ನೀವು ಹಿಂದೂಗಳು… ನೀವು ಸಿಖ್ ಭಕ್ತರೊಂದಿಗೆ ಹೋಗಲು ಸಾಧ್ಯವಿಲ್ಲ’ ಎಂದು 14 ಮಂದಿಯನ್ನು ಪಾಕ್ ಅಧಿಕಾರಿಗಳು ತಡೆದು ವಾಪಸ್ ಕಳುಹಿಸಿದ್ದಾರೆ. 14 ಮಂದಿಯಲ್ಲಿ ದೆಹಲಿ ಮತ್ತು ಲಕ್ನೋದ ಜನರು ಸೇರಿದ್ದಾರೆ. ತಮ್ಮ ದಾಖಲೆಗಳಲ್ಲಿ ಸಿಖ್ ಎಂದು ಟ್ಯಾಗ್ ಮಾಡಲಾದ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ 14 ಮಂದಿ ಅವಮಾನದಿಂದ ಹಿಂದಿರುಗಿದ್ದಾರೆ