ತಾಲ್ಲೂಕು ಕ್ರೀಡಾಂಗಣ ಗುತ್ತಿಗೆದಾರ ಆನಂದ್ ಹೆಗಡೆ ಸೂಸೈಡ್,

ವಿಜಯನಗರ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ದಾಕ್ಷಾಯಿಣಿ ಲಾಡ್ಜ್ನಲ್ಲಿ ಹುಬ್ಬಳ್ಳಿ ಮೂಲದ ಗುತ್ತಿಗೆದಾರ ಹಾಗೂ ಹೋಟೆಲ್ ಉದ್ಯಮಿ ಆನಂದ ಉಮೇಶ್ ಹೆಗಡೆ (40) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆ
ಪೊಲೀಸ್ ಮೂಲಗಳ ಪ್ರಕಾರ, ಭಾನುವಾರ ಬೆಳಗ್ಗೆ ಆನಂದ ಹೆಗಡೆ ಅವರು ಟೆಂಡರ್ ಸಂಬಂಧಿತ ಕೆಲಸಕ್ಕಾಗಿ ಹುಬ್ಬಳ್ಳಿಯಿಂದ ಹೂವಿನಹಡಗಲಿ ಪಟ್ಟಣಕ್ಕೆ ಆಗಮಿಸಿದ್ದರು. ದಾಕ್ಷಾಯಿಣಿ ಲಾಡ್ಜ್ನ 17ನೇ ಕೊಠಡಿಯ ತಂಗಿದ್ದ ಅವರು, ರಾತ್ರಿ ವೇಳೆ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸೋಮವಾರ ಬೆಳಿಗ್ಗೆ ಆನಂದನ ಕುಟುಂಬದವರು ಸಾಕಷ್ಟು ಬಾರಿ ಅವರಿಗೆ ಕರೆ ಮಾಡಿದ್ದರು. ಕರೆ ಸ್ವೀಕರಿಸದ ಕಾರಣ ಲಾಡ್ಜ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಪರಿಶೀಲನೆಗೆಂದು ಕೊಠಡಿ ಬಾಗಿಲು ತೆರೆದಾಗ, ಕಿಟಕಿಯಲ್ಲಿ ನೇಣು ಬಿಗಿದುಕೊಂಡ ಸ್ಥಿಯಲ್ಲಿ ಶವ ಸಿಕ್ಕಿದೆ. ಸ್ಥಳಕ್ಕೆ ಹೂವಿನಹಡಗಲಿ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸ್ನೇಹಿತರ ಪಾಲುದಾರಿಕೆಯೊಂದಿಗೆ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ಉದ್ಯಮಿ
ಆನಂದ ಹೆಗಡೆ ಅವರು ಹೂವಿನಹಡಗಲಿಯ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ ಮತ್ತು ನವೀಕರಣ ಕಾಮಗಾರಿಯ ಗುತ್ತಿಗೆ ಪಡೆದಿದ್ದರು. ಅವರು ತಮ್ಮ ಸ್ನೇಹಿತರಾದ ಸುಧೀಂದ್ರ ಹಾಗೂ ಗೌರೀಶ ಅವರೊಂದಿಗೆ ಪಾಲುದಾರಿಕೆಯಲ್ಲಿ ಕಂಪನಿಯೊಂದನ್ನು ಸ್ಥಾಪಿಸಿ ವಿವಿಧ ಟೆಂಡರ್ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೃತ ಆನಂದ ಹುಬ್ಬಳ್ಳಿಯ ಭವಾನಿ ನಗರದ ನಿವಾಸಿಯಾಗಿದ್ದು, ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಹೊಂದಿದ್ದರು ಎನ್ನಲಾಗಿದೆ.