ಹಂಪಿ ವಿರೂಪಾಕ್ಷ ದೇಗುಲಕ್ಕೆ ಮಳೆ ಸಂಕಟ: ಆವರಣದಲ್ಲಿ ಮೊಣಕಾಲುದ್ದ ನಿಂತ ನೀರು; ಪ್ರವಾಸಿಗರ ಪರದಾಟ

ಬಳ್ಳಾರಿ: ವಿಜಯನಗರ (Vijayanagar) ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಹಂಪಿಯ (Hampi) ವಿರೂಪಾಕ್ಷ ದೇವಾಲಯದ (Virupaksha Temple) ಆವರಣದಲ್ಲಿ ಮಳೆ ನೀರು ನಿಂತಿದ್ದು, ಜನರು ಹೈರಾಣಾಗುತ್ತಿದ್ದಾರೆ.

ಐತಿಹಾಸಿಕ ಹಂಪಿಯ ಶ್ರೀ ವಿರೂಪಾಕ್ಷ ದೇಗುಲದ ಆವರಣದಲ್ಲಿ ಮಳೆಯಿಂದಾಗಿ ಮೊಣಕಾಲುದ್ಧ ನೀರು ನಿಂತಿದೆ. ಪರಿಣಾಮ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರಿಗೆ ಸಮಸ್ಯೆ ಎದುರಾಗಿದೆ. ಬೇರೆ ದಾರಿಯಿಲ್ಲದೇ ಪ್ರವಾಸಿಗರು ನಿಂತ ನೀರಿನಲ್ಲಿಯೇ ನಡೆದುಕೊಂಡು ಹೋಗಿ, ವಿರೂಪಾಕ್ಷೇಶ್ವರನ ದರ್ಶನ ಪಡೆದಿದ್ದಾರೆ.
ಮಳೆ ಬಂದಾಗ ನೀರು ಹೊರಹೋಗುವ ವ್ಯವಸ್ಥೆ ಮಾಡಬೇಕಿದ್ದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ.