ದಲಿತ ಸಿಎಂ ಆಗಲೇಬೇಕು – ಜ್ಞಾನಪ್ರಕಾಶ ಸ್ವಾಮೀಜಿ ಆಗ್ರಹ.

ಬೆಂಗಳೂರು: ಕಾಂಗ್ರೆಸ್ನಲ್ಲಿ ದಲಿತ ಸಿಎಂ ಚರ್ಚೆ ಬೆನ್ನಲ್ಲೇ, ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು ದಲಿತ ಸಿಎಂ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಈ ವೇಳೆ, ಖಂಡಿತವಾಗಿಯೂ ದಲಿತ ಸಿಎಂ ಆಗಲೇಬೇಕು. ಪ್ರಜಾಪ್ರಭುತ್ವದಲ್ಲಿ ಶೋಷಿತ ಸಮುದಾಯದವರು ಮುಖ್ಯಮಂತ್ರಿ ಸ್ಥಾನಕ್ಕೆ ಹೋಗದೇ ಇದ್ದರೆ ಇದಕ್ಕಿಂತ ಹೀನಾಯ ಸ್ಥಿತಿ ಮತ್ತೊಂದಿಲ್ಲ. ಸಾಮಾಜಿಕ ನ್ಯಾಯ ಸಿಗಲಿ ಅನ್ನೋದೇ ನಮ್ಮ ಉದ್ದೇಶ. ಶೋಷಿತ ಸಮುದಾಯದವರು ಯಾರೇ ಆದರೂ ಸಿಎಂ ಆಗಲಿ ಎಂದಿದ್ದಾರೆ.
ಇದೇ ವೇಳೆ ಜಾತಿಗಣತಿ ಬಿಡುಗಡೆ ಆಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸಾಮಾಜಿಕ ನ್ಯಾಯ ಸಿಗಬೇಕಲ್ಲವಾ? ಹಾಗಾದರೆ ಜಾತಿಗಣತಿ ವರದಿ ಬಿಡುಗಡೆ ಆಗಬೇಕು. ಗ್ರಾಮಪಂಚಾಯಿತಿ ಸದಸ್ಯರಾಗದಿರುವ ಸಮುದಾಯವೂ ಇದೆ. ಉಳ್ಳವರು ಬಲಿಷ್ಠರ ಕೈಯಲ್ಲಿ ಆಡಳಿತ ಸಿಕ್ಕಿಹಾಕಿಕೊಂಡ್ರೆ ಕಷ್ಟ. ಹಾಗಾಗಿ ಜಾತಿಗಣತಿ ಜಾರಿಯಾಗಲೇ ಬೇಕು. ಸಿಎಂಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಅತ್ಯಂತ ಕಟ್ಟಕಡೆಯ ವ್ಯಕ್ತಿಗೂ ಕೂಡ ರಾಜಕೀಯ ಹಕ್ಕು, ಅಧಿಕಾರ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
