ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ಗರ್ಭಗುಡಿ ಬಾಗಿಲು ಬಂದ್: 15 ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ; ಮತ್ತೆ ಒಂದು ವರ್ಷ ಮರೆಗೆ ಸರಿದ ಶಕ್ತಿದೇವತೆ

ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸುವ ಶಕ್ತಿದೇವತೆ, ಹಾಸನದ ಅಧಿದೇವತೆ ಹಾಸನಾಂಬೆ ದೇವಿ (Hasanamba Devi) ಗರ್ಭಗುಡಿ ಬಾಗಿಲು ಶಾಸ್ತ್ರೋಕ್ತವಾಗಿ ಬಂದ್ ಆಗಿದೆ.

ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದಲ್ಲಿ ಅಂತಿಮ ಪೂಜೆ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಸಮ್ಮುಖದಲ್ಲಿ ಗರ್ಭಗುಡಿಗೆ ಅರ್ಚಕರು ಬೀಗ ಹಾಕಿದರು. ಈ ಮೂಲಕ 15 ದಿನಗಳ ಕಾಲ ನಡೆದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿದೆ.
ಅ.9ರಿಂದ ಆರಂಭವಾಗಿ ಅ.23ರವರೆಗೆ ದರ್ಶನ ಭಾಗ್ಯ ಕರುಣಿಸಿದ ಹಾಸನಾಂಬೆ ಮತ್ತೆ ಒಂದು ವರ್ಷಗಳ ಕಾಲ ಮರೆಗೆ ಸರಿದಳು. ಇಂದು ಮಧ್ಯಾಹ್ನ 1:06ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲನ್ನು ಮುಚ್ಚಲಾಯಿತು. ಈ ವೇಳೆ ಪಂಜಿನ ಪೂಜೆ, ಮಂಗಳವಾದ್ಯ ಮೊಳಗಿತು.
ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ಸಚಿವರು, ಶಾಸಕರು, ನಟ, ನಟಿಯರು ವಿವಿಧ ಕ್ಷೇತ್ರದ ಗಣ್ಯರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಬಾರಿಯ 13 ದಿನಗಳ ಸಾರ್ವಜನಿಕ ದರ್ಶನದಲ್ಲಿ ವಿವಿಐಪಿ ಪಾಸ್ಗಳ ರದ್ದು ಮಾಡಿ ಗೋಲ್ಡ್ ಪಾಸ್, ಪ್ರೋಟೋಕಾಲ್ಗೆ ಸಮಯ ನಿಗದಿ ಮಾಡಿದ್ದರಿಂದ ಸಾರ್ವಜನಿಕರಿಗೆ ಸುಗಮವಾಗಿ ಹಾಸನಾಂಬ ದೇವಿಯ ದರ್ಶನ ಆಗಿದೆ. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ದರ್ಶನ ಸಮಯ ವಿಳಂಬ ಬಿಟ್ಟರೆ ಉಳಿದಂತೆ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ.
ಕಳೆದ ಬಾರಿ ಜಾತ್ರೆ ವೇಳೆ ಅವ್ಯವಸ್ಥೆ ಆಗಿತ್ತು. ಇದನ್ನು ಸರಿಪಡಿಸಿ ಶಾಂತಿಯುತವಾಗಿ ದರ್ಶನ ಆಗಲು ಜಿಲ್ಲಾಡಳಿತ, ಸಚಿವರ ಜಾಣ್ಮೆ ಕಾರ್ಯವೈಖರಿಯಿಂದ ಎಲ್ಲವನ್ನೂ ಕಾಲಕಾಲಕ್ಕೆ ಸರಿಪಡಿಸಿ ಯಶಸ್ವಿಯಾದ ಜಾತ್ರೆ ನಡೆಸಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪೌರಕಾರ್ಮಿಕರು, ವಿದ್ಯುತ್ ಇಲಾಖೆ, ಅಗ್ನಿಶಾಮಕದಳ, ಡಿಎಫ್ಓ ಸೇರಿ ಎಲ್ಲಾ ಇಲಾಖೆಯವರು ಪ್ರಮಾಣಿಕವಾಗಿ ಕೆಲಸ ಮಾಡಿದ್ದಾರೆ. ಹಗಲು ರಾತ್ರಿ ದುಡಿದಿದ್ದಾರೆ
ಈ ಬಾರಿಯ ಉತ್ಸವದ ವೇಳೆ ಒಂದು ವಾರಗಳ ಕಾಲ ಪ್ರತಿನಿತ್ಯ ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ದೇವಿ ದರ್ಶನ ಪಡೆದಿದ್ದಾರೆ. ಬುಧವಾರ ಸಂಜೆಯವರೆಗೂ 26.13 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶೀಘ್ರ ದರ್ಶನದ ಟಿಕೆಟ್ ಮಾರಾಟದಿಂದ 21.82 ಕೋಟಿ ರೂ. ಹಣ ಸಂಗ್ರಹವಾಗಿದೆ. ಉಳಿದಂತೆ ಹುಂಡಿ ಎಣಿಕೆ ಕಾರ್ಯ ಬಾಕಿಯಿದ್ದು, 25 ಕೋಟಿ ತಲುಪಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಮುಂದಿನ ವರ್ಷದ ಹಾಸನಾಂಬೆ ಉತ್ಸವಕ್ಕೆ ದಿನಾಂಕ ನಿಗದಿ:
ಈ ಬಾರಿಯ ಹಾಸನಾಂಬೆ ದರ್ಶನೋತ್ಸವ ಇತಿಹಾಸ ನಿರ್ಮಸಿ, ದಾಖಲೆ ಬರೆಯುವ ಜೊತೆಗೆ ಅತ್ಯಂತ ಯಶಸ್ವಿ ಮತ್ತು ಅಚ್ಚುಕಟ್ಟಾಗಿ ನಡೆಯಿತು. ಮುಂದಿನ ವರ್ಷದ ಹಾಸನಾಂಬೆ ಉತ್ಸವ ದಿನಾಂಕವನ್ನು ಪಂಚಾಂಗದ ಪ್ರಕಾರ, ನಿಗದಿ ಮಾಡಲಾಗಿದೆ. 2026ರ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ನಡೆಯಲಿದೆ. ಒಟ್ಟು 14 ದಿನ ಗರ್ಭಗುಡಿ ತೆರೆದಿರಲಿದ್ದು, ಈ ಪೈಕಿ 12 ದಿನ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಒಟ್ಟಿನಲ್ಲಿ ಹಾಸನಾಂಬೆಯ ಈ ಬಾರಿಯ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. 13 ದಿನಗಳ ಕಾಲ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಹಾಸನಾಂಬೆ ದೇಗುಲ ಆವರಣ ಈಗ ಭಣಗುಡುತ್ತಿದೆ