ಇನ್ಮುಂದೆ ಬಸ್ನಲ್ಲಿ ಪುರುಷರಿಗೂ ಮೀಸಲು ಸೀಟು – ಹೊಸ ಆದೇಶ

ಮಂಗಳೂರು : ಸರ್ಕಾರಿ ಬಸ್ನಲ್ಲಿ ಪ್ರಯಾಣಿಸುವ ಪುರುಷ ಪ್ರಯಾಣಿಕರಿಗೆ ಸೀಟು ಮೀಸಲಿಡಬೇಕು ಎಂಬ ಬೇಡಿಕೆಯನ್ನು ಕೆ ಎಸ್ ಆರ್ ಟಿ ಸಿ ಗೆ ಸಲ್ಲಿಸಲಾಗಿದೆ. ಅದಕ್ಕೆ ಸ್ಪಂದಿಸಿರುವ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಬಸ್ನಲ್ಲಿ ಪುರುಷರಿಗೆ ಸೀಟು ಮೀಸಲಿಡುವಂತೆ ಸೂಚನೆ ಹೊರಡಿಸಿದ್ದಾರೆ. ಇದೀಗ ಕೆ ಎಸ್ ಆರ್ ಟಿ ಸಿ ಮೈಸೂರು ವಿಭಾಗ ಹೊರಡಿಸಿರುವ ಈ ಆದೇಶ ವೈರಲ್ ಆಗಿದ್ದು, ಮುಂದೆ ಬಸ್ನಲ್ಲಿ ಪುರುಷರು ಮತ್ತು ಮಹಿಳೆಯರ ನಡುವೆ ಸಂಘರ್ಷ ನಡೆಯುವ ಎಲ್ಲಾ ಲಕ್ಷಣ ಗೋಚರಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಮಹಿಳೆಯರಿಗೆ ಫ್ರೀ ಬಸ್ ಘೋಷಣೆ ಮಾಡಿ ಅದರಂತೆ ಸರ್ಕಾರ ನಡೆದುಕೊಂಡಿದೆ. ಶಕ್ತಿ ಯೋಜನೆಯ ಮೂಲಕ ಕೋಟ್ಯಂತರ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡ್ತಾ ಇದ್ದಾರೆ. ಆದ್ರೆ, ಇದು ಪುರುಷ ಪ್ರಯಾಣಿಕರ ಸಂಕಷ್ಟಕ್ಕೆ ಕಾರಣವಾಗಿದ್ದು, ಬಸ್ನಲ್ಲಿ ಸೀಟು ಸಿಗದೆ ಪರದಾಡುವಂತಾಗಿದೆ. ಶಕ್ತಿ ಯೋಜನೆಯ ಜಾರಿಗೂ ಮೊದಲು ಚಾಲಕನ ಹಿಂಭಾಗದ ನಾಲ್ಕು ಸೀಟುಗಳು ಮಹಿಳೆಯರಿಗೆ ಮೀಸಲಾಗಿಡಲಾಗುತ್ತಿತ್ತು. ಅದರಲ್ಲಿ ಯಾರೇ ಪುರುಷ ಪ್ರಯಾಣಿಕ ಕುಳಿತರೂ ಆತನನ್ನು ಎಬ್ಬಿಸಿ ಮಹಿಳೆಯರಿಗೆ ಸೀಟು ನೀಡಲಾಗುತ್ತಿತ್ತು. ಈಗ ಅದೇ ತರ ನಮಗೂ ಮಾಡಿ ಅಂತ ಕೆಎಸ್ ಆರ್ ಟಿಸಿ ಮೈಸೂರು ಕೇಂದ್ರ ವಲಯಕ್ಕೆ ವಿಷ್ಣುವರ್ಧನ್ ಎಂಬವರು ಪತ್ರ ಬರೆದಿದ್ದಾರೆ.
ಈ ಪತ್ರಕ್ಕೆ ಸ್ಪಂದಿಸಿದ ಇಲಾಖೆ ತನ್ನ ಅಧೀನದಲ್ಲಿ ಬರುವ ಎಲ್ಲಾ ಘಟಕಗಳ ವ್ಯವಸ್ಥಾಪಕರಿಗೆ ಸೂಚನೆ ನೀಡಿದೆ. ಸರ್ಕಾರಿ ಬಸ್ನಲ್ಲಿ ಪುರುಷ ಪ್ರಯಾಣಿಕರಿಗೆ ಮೀಸಲಿರುವ ಸೀಟಿನಲ್ಲಿ ಕುಳಿತು ಪ್ರಯಾಣಿಸಲು ಅವಕಾಶ ಮಾಡಲು ಸೂಚನೆ ನೀಡಲಾಗಿದೆ.
ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಕರು ಹೊರಡಿಸಿರುವ ಈ ನೋಟಿಸ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪುರುಷರಿಗೆ ಮೀಸಲು ಸೀಟು ಎಲ್ಲಿದೆ ಎಂಬುದನ್ನು ಅಧಿಕಾರಿಗಳು ತೋರಿಸಿಕೊಡಬೇಕು ಎಂದು ಪುರುಷ ಪ್ರಯಾಣಿಕರು ಆಗ್ರಹಿಸಿದ್ದಾರೆ.