ಆತ್ಮಹತ್ಯೆಗೂ ಮುನ್ನ ಎಎಸ್ಐ ಬಿಡುಗಡೆ ಮಾಡಿದ ವಿಡಿಯೋ: ಐಪಿಎಸ್ ಪತ್ನಿ, ಎಎಪಿ ಶಾಸಕರ ವಿರುದ್ಧ ಕೇಸು ದಾಖಲು

ಚಂಡೀಗಡ್: ಐಪಿಎಸ್ ಅಧಿಕಾರಿ ವೈ ಪೂರಣ್ ಕುಮಾರ್ ಮತ್ತು ಎಎಸ್ಐ ಸಂದೀಪ್ ಕುಮಾರ್ ಲಾದರ್ (Sandeep Kumar Lather) ಅವರಿಬ್ಬರ ಆತ್ಮಹತ್ಯೆ ಪ್ರಕರಣಗಳು ಹರ್ಯಾಣ ಪೊಲೀಸ್ ಇಲಾಖೆಯನ್ನು ಗರಬಡಿದಂತೆ ಮಾಡಿವೆ. ಭ್ರಷ್ಟಾಚಾರ, ಜಾತಿ ನಿಂದನೆ ಇತ್ಯಾದಿ ಆರೋಪ ಪ್ರತ್ಯಾರೋಪಗಳು ಈ ಪ್ರಕರಣದಲ್ಲಿ ತಳುಕು ಹಾಕಿಕೊಂಡಿವೆ. ಇದೇ ವೇಳೆ, ಎಎಸ್ಐ ಸಂದೀಪ್ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾಡಲಾಗಿರುವ ಆರೋಪಗಳ ಆಧಾರದ ಮೇಲೆ ನಾಲ್ವರ ವಿರುದ್ಧ ರೋಹ್ಟಕ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅವರ ಪತ್ನಿಯ ಹೆಸರೂ ಇದೆ.

ಪೂರಣ್ ಕುಮಾರ್ ಅವರ ಪತ್ನಿ, 2001ರ ಬ್ಯಾಚ್ನ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ್, ಆಕೆಯ ಸಹೋದರ ಅಮಿತ್ ರತ್ತನ್, ಹೆಡ್ ಕಾನ್ಸ್ಟಬಲ್ ಸುಶೀಲ್ ಕುಮಾರ್ ಅವರ ಹೆಸರು ಎಫ್ಐಆರ್ನಲ್ಲಿ ಇದೆ. ಹರ್ಯಾಣದ ರೋಹ್ಟಕ್ನ ಸಾದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಮತ್ತು ಅಪರಾಧ ಪಿತೂರಿ ಮಾಡಿದ ಆರೋಪಗಳಿರುವ ಬಿಎನ್ಎಸ್ ಸೆಕ್ಷನ್ 108 ಮತ್ತು 61ರ ಅಡಿಯಲ್ಲಿ ಎಫ್ಐಆರ್ ರಿಜಿಸ್ಟರ್ ಆಗಿದೆ.
ಅಮ್ನೀತ್ ಕುಮಾರ್ ಅವರ ಸಹೋದರ ಅಮಿತ್ ರತ್ತನ್ ಅವರು ಪಂಜಾಬ್ನ ಎಎಪಿ ಪಕ್ಷದ ಶಾಸಕರಾಗಿದ್ದಾರೆ. ಇನ್ನು ಸುಶೀಲ್ ಕುಮಾರ್ ಅವರು ಪೂರನ್ ಕುಮಾರ್ ಅವರ ಪಿಎಸ್ಒ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿನಲ್ಲಿ ರಿಮ್ಯಾಂಡ್ನಲ್ಲಿದ್ದಾರೆ.
ಹರ್ಯಾಣವನ್ನು ಬೆಚ್ಚಿಬೀಳಿಸಿರುವ ಪೊಲೀಸ್ ಅಧಿಕಾರಿಗಳ ಸರಣಿ ಆತ್ಮಹತ್ಯೆ ಘಟನೆಗಳೇನು?
ರೋಹ್ಟಕ್ನ ಐಜಿಯಾಗಿದ್ದ ಪೂರಣ್ ಕುಮಾರ್ ವಿರುದ್ಧ ಹಲವು ಭ್ರಷ್ಟಾಚಾರ ಆರೋಪಗಳಿದ್ದುವು. ಅವರ ವಿರುದ್ಧ ಪೊಲೀಸರ ತಂಡವೊಂದು ತನಿಖೆ ನಡೆಸುತ್ತಿತ್ತು. ಸಂದೀಪ್ ಕುಮಾರ್ ಲಾದರ್ ಅವರು ಆ ತನಿಖಾ ತಂಡದ ಒಬ್ಬ ಸದಸ್ಯರಾಗಿದ್ದರು. ತನಿಖೆಯ ಭಾಗವಾಗಿ ಪೂರಣ್ ಕುಮಾರ್ ಅವರ ಮಾಜಿ ಪಿಎಸ್ಒ ಅವರನ್ನು ಅಕ್ಟೋಬರ್ 5ರಂದು ಬಂಧಿಸಲಾಯಿತು. ಅಕ್ಟೋಬರ್ 6ರಂದು ಎಫ್ಐಆರ್ ದಾಖಲು ಮಾಡಲಾಯಿತು. ಪೂರಣ್ ಮೊದಲಾದವರ ಹೆಸರು ಎಫ್ಐಆರ್ನಲ್ಲಿ ಕಾಣಿಸಿತು.
ಈ ಎಫ್ಐಆರ್ ದಾಖಲಾದ ಬಳಿಕ ಪೂರಣ್ ಕುಮಾರ್ ಅವರೇ ಖುದ್ದಾಗಿ ಆತ್ಮಹತ್ಯೆ ಮಾಡಿಕೊಂಡರು. ಡಿಜಿಪಿ ಶತ್ರುಜೀತ್ ಕಪೂರ್ ಮತ್ತು ರೋಹ್ಟಕ್ ಎಸ್ಪಿ ನರೇಂದ್ರ ಬಿಜಾರ್ನಿಯಾ ಮೊದಲಾದವರ ವಿರುದ್ಧ ತಮ್ಮ ಸೂಸೈಡ್ ನೋಟ್ನಲ್ಲಿ ಪೂರಣ್ ಕುಮಾರ್ ಆರೋಪ ಮಾಡಿದ್ದರು. ಪೂರಣ್ ಕುಮಾರ್ ಅವರ ಕುಟುಂಬ ಸದಸ್ಯರ ಒತ್ತಾಯದ ಮೇರೆಗೆ ಶತ್ರುಜೀತ್ ಕಪೂರ್ ಅವರನ್ನು ರಜೆಯ ಮೇಲೆ ಕಳುಹಿಸಲಾಯಿತು. ನರೇಂದ್ರ ಬಿಜಾರ್ನಿಯಾ ಅವರನ್ನು ಟ್ರಾನ್ಸ್ಫರ್ ಮಾಡಲಾಯಿತು.
ಇದಾದ ಬಳಿಕ ಪೂರಣ್ ಕುಮಾರ್ ವಿರುದ್ಧ ತನಿಖೆ ನಡೆಸುತ್ತಿದ್ದ ಸಂದೀಪ್ ಕುಮಾರ್ ಲಾಥರ್ ಅವರೂ ಕೂಡ ಗನ್ನಿಂದ ಶೂಟ್ ಮಾಡಿಕೊಂಡು ಸತ್ತಿದ್ದಾರೆ. ಅದಕ್ಕೆ ಮುನ್ನ ವಿಡಿಯೋ ರೆಕಾರ್ಡ್ ಮಾಡಿರುವ ಅವರು ಪೂರಣ್ ಕುಮಾರ್ ಅವರನ್ನು ಭ್ರಷ್ಟ ಎಂದು ಕರೆದಿದ್ದಾರೆ.
ಡಿಜಿಪಿ ಶತ್ರುಜೀತ್ ಕಪೂರ್ ಅವರ ತಪ್ಪೇನಿಲ್ಲ. ಪೂರಣ್ ಕುಮಾರ್ ಪೂರ್ಣ ಭ್ರಷ್ಟರಾಗಿದ್ದರು. ತಮ್ಮ ಕುಕೃತ್ಯಗಳು ಬೆಳಕಿಗೆ ಬಂದು ಅವಮಾನ ಆಗುತ್ತದೆಂಬ ಸತ್ಯ ಜೀರ್ಣಿಸಿಕೊಳ್ಳಲಾಗದೆ ಪೂರಣ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸಂದೀಪ್ ತಮ್ಮ ಡೆತ್ ವಿಡಿಯೋ ಮೆಸೇಜ್ನಲ್ಲಿ ಹೇಳಿಕೊಂಡಿದ್ದಾರೆ.