ದೀಪಾವಳಿ ಮತ್ತು ಹುಲಿಜಂತಿ ಜಾತ್ರೆ: KKRTC ನಿಂದ ಹೆಚ್ಚುವರಿ ಬಸ್ ಸೇವೆ

ಕಲಬುರಗಿ: ದೀಪಾವಳಿ ಹಬ್ಬ ಹಾಗೂ ಹುಲಿಜಂತಿ ಶ್ರೀ ಮಾಳಿಂಗರಾಯ ಜಾತ್ರಾ ಮಹೋತ್ಸವ ಪ್ರಯುಕ್ತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು, ಹುಲಿಜಂತಿ ಹಾಗೂ ಇತರೆ ಸ್ಥಳಗಳಿಗೆ ಸಂಚರಿಸಲು 600 ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ನಡೆಸಲಿವೆ. ಈ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರಯಾಣಿಕರು ಇದರ ಸೌಲಭ್ಯ ಪಡೆದುಕೊಳ್ಳುವಂತೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಬಿ.ಸುಶೀಲಾ ತಿಳಿಸಿದ್ದಾರೆ.

ಯಾವೆಲ್ಲಾ ದಿನ ಹೆಚ್ಚುವರಿ ಬಸ್ಗಳ ಸಂಚಾರ
ಈ ಕುರಿತು ಡಾ.ಬಿ.ಸುಶೀಲಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಅಕ್ಟೋಬರ್ 16, 17 ಮತ್ತು 18 ರಂದು ಸಂಸ್ಥೆ ವ್ಯಾಪ್ತಿಯ ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ ಬೆಂಗಳೂರು ಮತ್ತು ಇತರೆ ಪ್ರಮುಖ ಸ್ಥಳಗಳಿಗೆ ಹಾಗೂ ಅಕ್ಟೋಬರ್ 17, 18, ಮತ್ತು 19 ರಂದು ಬೆಂಗಳೂರಿನಿಂದ ಇತರೆ ಸ್ಥಳಗಳಿಗೆ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆ ಮಾಡುತ್ತಿವೆ.
ಹುಲಿಜಂತಿ ಶ್ರೀ ಮಾಳಿಂಗರಾಯ ಜಾತ್ರಾ ಪ್ರಮುಖ ದಿನದಂದು ಅಂದರೆ ಅಕ್ಟೋಬರ್ 20, 21 ಮತ್ತು 22 ರಂದು ಜಾತ್ರಾ ಸಾರಿಗೆಗಳ ಭಕ್ತಾದಿಗಳು ಪ್ರಯೋಜನ ಪಡೆಯಬಹುದಾಗಿದೆ. ಇನ್ನು ಹಬ್ಬ ಮತ್ತು ರಜೆ ಮುಗಿದ ನಂತರ ಅಕ್ಟೋಬರ್ 22 ರಿಂದ 26ರವರೆಗೆ ಸಹ ಸಂಚಾರ ದಟ್ಟಣೆಗನುಗುಣವಾಗಿ ಬಸ್ಗಳು ರಸ್ತೆಗಿಳಿಯಲಿವೆ.
ಸಾರ್ವಜನಿಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ನಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅವಕಾಶವಿದ್ದು, ಪ್ರಯಾಣಿಕರು ಕರ್ನಾಟಕ ಹಾಗೂ ಅಂತರ ರಾಜ್ಯದಲ್ಲಿರುವ 18 ಗಣಕೀಕೃತ ಬುಕ್ಕಿಂಗ್ ಕೌಂಟರ್ಗಳ ಮುಖಾಂತರ ಆಸನ ಕಾಯ್ದಿರಿಸಬಹುದಾಗಿದೆ.
ಮುಂಗಡ ಟಿಕೆಟ್ ಕಾಯ್ದಿರಿಸುವವರಿಗೆ ರಿಯಾತಿಯಿ
4 ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇ.5ರಷ್ಟು ಹಾಗೂ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ನ್ನು ಒಟ್ಟಿಗೆ ಕಾಯ್ದಿರಿಸಿದಲ್ಲಿ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಟಿಕೆಟ್ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ, ಪಿಕ್ ಅಪ್ ಪಾಯಿಂಟ್ ಸ್ಥಳ ಮತ್ತು ಹೆಸರು ಗಮನಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.