ಅತ್ಯಾಚಾರ ವಿರೋಧಿಸಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ; ಮೂವರು ಬಲಿ

ಡಾಕಾ: ಬುಡಕಟ್ಟು ಹುಡುಗಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪದ ಮೇಲೆ ಆದಿವಾಸಿ ಬುಡಕಟ್ಟು ಜನರು ಮತ್ತು ಬಂಗಾಳಿ ಸಮುದಾಯದ ನಡುವೆ ಆಗ್ನೇಯ ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಕಾರಣದಿಂದಾಗಿ 3 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಪೊಲೀಸರು ಈಗಾಗಲೇ ಮೂವರು ಪುರುಷರ ಸಾವನ್ನು ದೃಢಪಡಿಸಿದ್ದಾರೆ. ಆದರೆ ಅವರು ಯಾರೆಂಬುದರ ಗುರುರು ಬಿಟ್ಟುಕೊಟ್ಟಿಲ್ಲ.

“ಖಗ್ರಾಛರಿ ಜಿಲ್ಲೆಯ ಗುಯಿಮಾರಾ ಉಪಜಿಲ್ಲಾದಲ್ಲಿ ದುಷ್ಕರ್ಮಿಗಳು ನಡೆಸಿದ ದಾಳಿಯಲ್ಲಿ ಮೂವರು ಬೆಟ್ಟದ ಜನರು ಸಾವನ್ನಪ್ಪಿದ್ದಾರೆ. ಮೇಜರ್ ಸೇರಿದಂತೆ 13 ಸೇನಾ ಸಿಬ್ಬಂದಿ, ಗುಯಿಮಾರಾ ಪೊಲೀಸ್ ಠಾಣೆಯ ಒಸಿ ಸೇರಿದಂತೆ ಮೂವರು ಪೊಲೀಸರು ಮತ್ತು ಇತರ ಅನೇಕರು ಗಾಯಗೊಂಡ ಘಟನೆಯ ಬಗ್ಗೆ ಗೃಹ ಸಚಿವಾಲಯ ತೀವ್ರ ದುಃಖ ವ್ಯಕ್ತಪಡಿಸಿದೆ” ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಕುರಿತಾದ ತನಿಖೆಯ ನಂತರ ಈ ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ಭರವಸೆ ನೀಡಿದೆ. ಯಾವುದೇ ಅಪರಾಧಿಯನ್ನು ಬಿಡುವ ಮಾತೇ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಭಾರತ ಮತ್ತು ಮ್ಯಾನ್ಮಾರ್ ಗಡಿಯಲ್ಲಿರುವ ಚಿತ್ತಗಾಂಗ್ ಬೆಟ್ಟದ ಪ್ರದೇಶದ ಮೂರು ಬೆಟ್ಟದ ಜಿಲ್ಲೆಗಳಲ್ಲಿ ಒಂದಾದ ಖಗ್ರಾಛರಿ ಜಿಲ್ಲೆಯಲ್ಲಿ 8ನೇ ತರಗತಿಯ ಶಾಲಾ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ನಂತರ ಹಿಂಸಾಚಾರ ಭುಗಿಲೆದ್ದಿತು. ಢಾಕಾದಲ್ಲಿರುವ ಬಂಗಾಳದ ಗೃಹ ಸಚಿವಾಲಯವು ಹಿಂಸಾಚಾರದಲ್ಲಿ 13 ಸೇನಾ ಸಿಬ್ಬಂದಿ ಮತ್ತು ಮೂವರು ಪೊಲೀಸರು ಗಾಯಗೊಂಡಿದ್ದಾರೆ.
ಖಾಸಗಿ ಟ್ಯೂಷನ್ನಿಂದ ಬರುತ್ತಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಆಕೆಯ ಪೋಷಕರು ಮತ್ತು ನೆರೆಹೊರೆಯವರು ಹುಡುಕಿದಾಗ ಮಧ್ಯರಾತ್ರಿಯ ಸುಮಾರಿಗೆ ಪಟ್ಟಣದ ದೂರದ ಪ್ರದೇಶದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆ ಪತ್ತೆಯಾಗಿದ್ದಳು. ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಪೊಲೀಸರು ಮಿಲಿಟರಿ ಸಹಾಯದಿಂದ ಬಂಗಾಳಿ ಯುವಕನನ್ನು ಬಂಧಿಸಿದರು. ಅವನು ಅತ್ಯಾಚಾರಿಗಳಲ್ಲಿ ಒಬ್ಬನೆಂದು ಶಂಕಿಸಲಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ 6 ದಿನಗಳ ಬಂಧನದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದೆ.
