ಭ್ರಷ್ಟಾಚಾರ ವಿರುದ್ಧ ಕಠಿಣ ಕ್ರಮ: ಅಸ್ಸಾಂನಲ್ಲಿ ಎಸಿಎಸ್ ಅಧಿಕಾರಿ, ಕೊಪ್ಪಳದಲ್ಲಿ ಲೋಕಾಯುಕ್ತ ದಾಳಿ

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪದ ಮೇಲೆ ಅಸ್ಸಾಂ ನಾಗರಿಕ ಸೇವೆಯ (ಎಸಿಎಸ್) ಅಧಿಕಾರಿಯೊಬ್ಬರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಮುಖ್ಯಮಂತ್ರಿಯವರ ವಿಶೇಷ ಜಾಗೃತ ದಳದ ಅಧಿಕಾರಿಗಳ ತಂಡವು ಅಧಿಕಾರಿ ನೂಪುರ್ ಬೋರಾ ಅವರ ಗುವಾಹಟಿ ನಿವಾಸದ ಮೇಲೆ ದಾಳಿ ನಡೆಸಿ 90 ಲಕ್ಷ ರೂ.

ನಗದು ಮತ್ತು 1 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ತಂಡ ಬಾರ್ಪೇಟಾದಲ್ಲಿರುವ ಆಕೆಯ ಬಾಡಿಗೆ ಮನೆಯ ಮೇಲೆ ದಾಳಿ ನಡೆಸಿತು.
2019 ರಲ್ಲಿ ಅಸ್ಸಾಂ ನಾಗರಿಕ ಸೇವೆಗೆ ಸೇರಿದ ಗೋಲಾಘಾಟ್ ನಿವಾಸಿ ಬೋರಾ ಅವರು ಪ್ರಸ್ತುತ ಕಾಮರೂಪ ಜಿಲ್ಲೆಯ ಗೊರೊಯಿಮರಿಯಲ್ಲಿ ವೃತ್ತ ಅಧಿಕಾರಿಯಾಗಿ ನೇಮಕಗೊಂಡಿದ್ದರು. ವಿವಾದಾತ್ಮಕ ಭೂ ಸಂಬಂಧಿತ ವಿಷಯಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ತಮ್ಮ ಮೇಲೆ ನಿಗಾ ಇಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
“ಈ ಅಧಿಕಾರಿಯನ್ನು ಬಾರ್ಪೇಟಾ ಕಂದಾಯ ವೃತ್ತದಲ್ಲಿ ನಿಯೋಜಿಸಿದಾಗ ಹಣಕ್ಕಾಗಿ ಹಿಂದೂ ಭೂಮಿಯನ್ನು ಅನುಮಾನಾಸ್ಪದ ವ್ಯಕ್ತಿಗಳಿಗೆ ವರ್ಗಾಯಿಸಿದ್ದರು. ನಾವು ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ” ಎಂದು ಖುದ್ದು ಮುಖ್ಯಮಂತ್ರಿ ಹೇಳಿದ್ದಾರೆ. ಬಾರ್ಪೇಟಾದ ಕಂದಾಯ ವೃತ್ತ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಅವರ ಸಹಾಯಕ ಲತ್ ಮಂಡಲ್ ಸೂರಜಿತ್ ದೇಕಾ ಅವರ ನಿವಾಸದ ಮೇಲೂ ವಿಶೇಷ ಜಾಗೃತ ದಳ ದಾಳಿ ನಡೆಸಿತು. ಬೋರಾ ಅವರು ಅಲ್ಲಿ ವೃತ್ತ ಅಧಿಕಾರಿಯಾಗಿದ್ದಾಗ ಅವರ ಜೊತೆ ಸೇರಿ ಬಾರ್ಪೇಟಾದಾದ್ಯಂತ ಹಲವಾರು ಭೂ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಆರೋಪ ಅವರ ಮೇಲಿದೆ.
ಕೊಪ್ಪಳದಲ್ಲಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಶಾಕ್ ನೀಡಿದ್ದು, (Koppala news) ನಗರದ 5 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳ ನಗರಸಭೆ ಕಚೇರಿ ಸಿಬ್ಬಂದಿ ಹಾಗೂ ಗುತ್ತಿಗೆದಾರರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಕೊಪ್ಪಳ ನಗರಸಭೆ ಅಧ್ಯಕ್ಷ ಅಹಮದ್ ಪಟೇಲ್ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.