Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳ್ತಂಗಡಿಯಲ್ಲಿ ಮಿತಿಮೀರಿದ ಕಾಡುಪ್ರಾಣಿಗಳ ಹಾವಳಿ: ಗ್ರಾಮಸ್ಥರಲ್ಲಿ ಆತಂಕ

Spread the love

ಬೆಳ್ತಂಗಡಿ: ಈ ವರ್ಷ ವಿಪರೀತ ಮಳೆಯಿಂದ ಸಾಕಷ್ಟು ಫಸಲು ನಷ್ಟ ಅನುಭವಿಸಿರುವ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಗ್ರಾಮಗಳಲ್ಲಿ ಮಂಗಗಳ ಹಾವಳಿ ವಿಪರೀತವಾಗಿದ್ದು, ಕೃಷಿಕರಿಗೆ ಸಂಕಷ್ಟ ಉಂಟಾಗಿದೆ. ಮಂಗಗಳ ಹಿಂಡು ತೋಟಗಳಿಗೆ ಲಗ್ಗೆ ಇಡುತ್ತಿದ್ದು, ತೆಂಗಿನ ಮರಹತ್ತಿ ಸೀಯಾಳಗಳನ್ನು ಕಿತ್ತೆಸೆಯುತ್ತಿವೆ. ಹಿಂಡು ಹಿಂಡಾಗಿ ದಾಳಿ ಇಡುವ ಮಂಗಗಳು ಎಗ್ಗಿಲ್ಲದೆ ತೆಂಗಿನ ಫಸಲನ್ನು ನಾಶ ಮಾಡುತ್ತಿವೆ.

ಈ ಬಾರಿ ತೆಂಗಿಗೆ ಉತ್ತಮ ಬೆಲೆ ಇದೆ. ಆದರೆ ಬೆಳೆ ಮಂಗಗಳ ಪಾಲಾಗುತ್ತಿದ್ದು, ಕೃಷಿಕರು ಕಂಗಲಾಗಿದ್ದಾರೆ. ಮಂಗಗಳನ್ನು ಓಡಿಸುವ ಯಾವುದೇ ಉಪಾಯಗಳು ಫಲ ನೀಡುತ್ತಿಲ್ಲ. ಪಟಾಕಿ ಸಿಡಿಸಿದರೂ ಹೆದರುವುದಿಲ್ಲ. ಮನೆಯ ಅಂಗಳದವರೆಗೂ ಕಾಲಿಡುವ ಮಂಗಗಳು ಕೆಲವು ಕಡೆಗಳಲ್ಲಿ ಮನೆಗಳ ಒಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ತಿನ್ನುವಷ್ಟು ಮುಂದುವರಿದಿವೆ.

ಅಡಕೆ ತೋಟಗಳಲ್ಲಿ ಅಡಕೆ ಕಿತ್ತು ಹಾಕುವ ಜತೆ ನಳ್ಳಿ, ಹಿಂಗಾರವನ್ನು ಹಾಳು ಮಾಡುತ್ತಿವೆ. ತರಕಾರಿ ಬೆಳೆಯೂ ಮಂಗಗಳ ಪಾಲಾಗುತ್ತಿದೆ. ಪ್ರಸ್ತುತ ಹಲಸಿನ ಹಣ್ಣು ಋುತು ಮುಗಿದಿದ್ದು, ಇದರಿಂದ ಮಂಗಗಳಿಗೆ ಆಹಾರವಿಲ್ಲವಾಗಿದ್ದು ಕೃಷಿ ತೋಟಗಳತ್ತ ಬರುತ್ತಿರುವುದು ಹೆಚ್ಚಿದೆ.

ಎಣೇಲು ಭತ್ತದ ಗದ್ದೆಗಳು ಬೆಳೆಯುವ ಹಂತದಲ್ಲಿದ್ದು ಇಲ್ಲೂ ಕೂಡ ಮಂಗಗಳ ಹಾವಳಿ ಕಂಡುಬರುತ್ತಿದೆ. ಮಂಗಗಳ ಜತೆ ಕಾಡುಹಂದಿ, ನವಿಲು, ಕೆಂಚಳಿಲು ಕೂಡ ಅಲ್ಲಲ್ಲಿ ಕೃಷಿ ಹಾನಿ ಮಾಡುತ್ತಿರುವುದು ಕಂಡು ಬರುತ್ತಿದೆ. ತಾಲೂಕಿನಲ್ಲಿ ಕಾಡಾನೆಗಳ ಉಪಟಳವೂ ಹೆಚ್ಚಿದ್ದು ಕಾಡಿನಿಂದ ನಾಡಿಗೆ ಇಳಿಯುತ್ತಿರುವ ಇವು ಜನನಿಬಿಡ ಪ್ರದೇಶದವರೆಗೂ ಬರುತ್ತಿದ್ದು, ಕೃಷಿ ಹಾನಿಯ ಜತೆ ಜನರಲ್ಲಿ ಜೀವಭಯವನ್ನು ಸೃಷ್ಟಿಸಿವೆ.

ಗ್ರಾಮ ಸಭೆಗಳಲ್ಲಿ ಚರ್ಚೆ:

ಕಾಡು ಪ್ರಾಣಿಗಳ ಹಾವಳಿ ಇರುವ ಗ್ರಾಮಗಳ ಗ್ರಾಮ ಸಭೆಗಳಲ್ಲಿಇದರ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ ಗ್ರಾಮ ಸಭೆಗಳಿಗೆ ಹಿರಿಯ ಅಧಿಕಾರಿಗಳು ಬಾರದ ಕಾರಣ ಇದು ನಿರ್ಣಯಕ್ಕೆ ಮಾತ್ರ ಸೀಮಿತಗೊಳ್ಳುತ್ತದೆ. ಪ್ರತಿ ಗ್ರಾಮ ಸಭೆಗಳಲ್ಲಿ ಈ ವಿಚಾರ ಚರ್ಚೆಯಾಗುತ್ತಿದೆ ಹೊರತು ಯಾವುದೇ ರೀತಿಯ ಪರಿಹಾರ ಮಾರ್ಗ ಸಿಗುತ್ತಿಲ್ಲ. ಕಾಡಾನೆ ಹಾವಳಿಯಿಂದ ಉಂಟಾಗುವ ಕೃಷಿ ನಷ್ಟಕ್ಕೆ ಸರಕಾರ ಒಂದಿಷ್ಟು ಪರಿಹಾರ ನೀಡುತ್ತದೆ. ಆದರೆ ಉಳಿದ ವನ್ಯಜೀವಿಗಳಿಂದ ಉಂಟಾಗುವ ಹಾನಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಇದರಿಂದ ಕೃಷಿಕರು ಅನುಭವಿಸುವ ನಷ್ಟಕ್ಕೆ ಅವರೇ ಹೊಣೆಗಾರರಾಗುತ್ತಿರುವುದು ವಿಪರ್ಯಾಸ.

ನಮ್ಮ ತೋಟದಲ್ಲಿ 50ಕ್ಕಿಂತ ಅಧಿಕ ತೆಂಗಿನ ಮರಗಳಿವೆ. ಆದರೆ ಸೀಯಾಳ, ತೆಂಗಿನಕಾಯಿ ನಮಗೆ ಸಿಗುತ್ತಿಲ್ಲ. ನಾವು ಬೇರೆ ಕಡೆಯಿಂದ ತೆಂಗಿನಕಾಯಿ ಖರೀದಿಸಿ ತರಬೇಕಾದ ಸ್ಥಿತಿ ಇದೆ ಎಂದಿದ್ದಾರೆ ವಿಜಯ ಗೌಡ, ಕೃಷಿಕ, ಇಂದಬೆಟ್ಟು

ಕೃಷಿ ಉತ್ಪನ್ನಗಳನ್ನು ವನ್ಯಜೀವಿಗಳಿಂದ ರಕ್ಷಿಸಿಕೊಳ್ಳುವುದು ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ. ಹವಾಮಾನ ವೈಪರೀತ್ಯದ ಜತೆ ವನ್ಯಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದಿದ್ದಾರೆ ಜಾರಪ್ಪ ಪೂಜಾರಿ, ಕೃಷಿಕ, ಬೆಳಾಲು

ಕಾಡಾನೆ ಹಾವಳಿಗೆ ಪರಿಹಾರ ಸಿಗುವಂತೆ ಇತರ ಪ್ರಾಣಿಗಳಿಂದ ಉಂಟಾಗುವ ಕೃಷಿ ನಷ್ಟಕ್ಕೆ ಸರಕಾರ ಪರಿಹಾರ ನೀಡುವ ಕುರಿತು ಯೋಜನೆ ರೂಪಿಸಬೇಕಾದ ಅಗತ್ಯವಿದೆ ಎಂದಿದ್ದಾರೆ ರಾಮಚಂದ್ರ, ಕೃಷಿಕ, ಸವಣಾಲು


Spread the love
Share:

administrator

Leave a Reply

Your email address will not be published. Required fields are marked *