ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಮಗುವನ್ನೇ ಕೊಂದ ತಾಯಿ ಹಾಗೂ ಪ್ರಿಯಕರ

ಹಾವೇರಿ : ವ್ಯಕ್ತಿಯೊಬ್ಬನೊಡನೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ವಿವಾಹಿತ ಮಹಿಳೆಯೊಬ್ಬಳು ತನ್ನ ಸಂಬಂಧಕ್ಕೆ ಅಡ್ಡಿಯಾದೀತೆಂದು ಪ್ರಿಯಕರನೊಡನೆ ಸೇರಿ ಮಗುವನ್ನೇ ಹತ್ಯೆಗೈದಿರುವ ಭೀಕರ ಘಟನೆ ರಾಣೆಬೆನ್ನೂರಿನ (Haveri Crime) ಎಜಕೆಜಿ ಕಾಲನಿಯಲ್ಲಿ ನಡೆದಿದೆ.

ಪ್ರಿಯಾಂಕಾ(4) ಉಸಿರು ಚೆಲ್ಲಿ ಹೋದ ಕಂದಮ್ಮನಾಗಿದ್ದು, ತಾಯಿ ಗಂಗಮ್ಮ ಗುತ್ತಲ (36) ಹಾಗೂ ಆಕೆಯ ಪ್ರಿಯಕರ ಅಣ್ಣಪ್ಪ ಮಡಿವಾಳರ (40) ಹತ್ಯೆಗೈದ ಆರೋಪಿಗಳಾಗಿದ್ದಾರೆ.
ಎರಡು ತಿಂಗಳ ಹಿಂದೆ ಗಂಗಮ್ಮ ತನ್ನ ಪತಿಯನ್ನು ತೊರೆದು ಅಣ್ಣಪ್ಪನ ಜೊತೆ ಅನ್ವೇರಿ ಗ್ರಾಮದಲ್ಲಿ ವಾಸವಾಗಿದ್ದಳು. ಈ ನಡುವೆ ತಮ್ಮ ಅಕ್ರಮ ಸಂಬಂಧಕ್ಕೆ ಮಗು ಅಡ್ಡಿಯಾಗುತ್ತಿದೆ ಎಂದು ಆಕೆಯ ಕೊಲೆಗೆ ಪಿತೂರಿ ನಡೆಸಿದ್ದರು. ಅದರಂತೆ ಅಣ್ಣಪ್ಪನ ಜೊತೆಗೂಡಿ ಆ.5 ರಂದು ಮಗುವನ್ನು ಉಸಿರುಗಟ್ಟಿಸಿ ಹತ್ಯೆಗೈದಿದ್ದರು. ಬಳಿಕ ಮೃತದೇಹವನ್ನು ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆಯ ಬಳಿ ಕೊಂಡೊಯ್ದು ಸುಟ್ಟು ಹಾಕಲು ಯತ್ನಿಸಿದ್ದರು.
ಸ್ಥಳದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿದ್ದ ಮೃತದೇಹವನ್ನು ಕಂಡು ಸಾರ್ವಜನಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗುತ್ತಲ ಠಾಣೆಯ ಪೊಲೀಸರು ಅನಾಥ ಶವವೆಂದು ಪರಿಗಣಿಸಿ ಸಂಸ್ಕಾರ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇತ್ತೀಚಿಗೆ ಗಂಗಮ್ಮಳ ಪತಿ ಮಂಜುನಾಥ ತನ್ನ ಮಗುವನ್ನು ಹಿಂದಿರಿಗಿಸುವಂತೆ ಒತ್ತಾಯಿಸಿ ಹಲವು ಬಾರಿ ಮನೆಗೆ ಬಂದಿದ್ದ. ಆದರೆ ಮಗುವಿಗೆ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಳ್ಳು ಗಂಗಮ್ಮ ಒಂದು ತಿಂಗಳು ದೂಡಿದ್ದಳು. ಅನುಮಾನಗೊಂಡ ಮಂಜುನಾಥ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪೊಲೀಸರು ಗಂಗಮ್ಮ ಹಾಗೂ ಆಕೆಯ ಪ್ರಿಯಕರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿದೆ.
ಆರೋಪಿಗಳನ್ನು ವಶಕ್ಕೆ ಪಡೆದಿರುವ ಹಾವೇರಿ ಗ್ರಾಮೀಣ ಠಾಣೆಯ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಪ್ರತ್ಯೇಕ ಘಟನೆಯಲ್ಲಿ ನಿತ್ಯ ಜೊತೆಗೆ ಕೂತು ವ್ಯಾಪಾರ ಮಾಡುತ್ತಿದ್ದ ಸ್ನೇಹಿತರ ನಡುವೆ ಯಾವುದೋ ವಿಚಾರಕ್ಕೆ ಸಂಬಂಧಪಟ್ಟಂತೆ ತಮಾಷೆಯಲ್ಲೇ ಮಾತಿಗೆ ಮಾತು ಬೆಳೆದು (Crime) ಗಲಾಟೆ ಶುರುವಾಗಿದ್ದು, ಪರಿಣಾಮ ವಿಕೋಪಕ್ಕೆ ತೆರಳಿ ಸ್ನೇಹಿತನೇ ಚುಚ್ಚಿ ಚುಚ್ಚಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದ (Chikkaballapur) ಚಿಂತಾಮಣಿಯಲ್ಲಿ ನಡೆದಿದೆ.
ಮೃತನನ್ನು ಅರ್ನಾಬ್ ಎಂದು ಗುರುತಿಸಲಾಗಿದೆ. ಕಳೆದ ಕೆಲ ತಿಂಗಳಿಂದ ಮೃತ ಅರ್ಬಾಜ್ ಹಾಗೂ ಆತನ ಸ್ನೇಹಿತ ಫರ್ಹಾದ್ ಚಿಂತಾಮಣಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಅವರಿಬ್ಬರೂ ಆತ್ಮೀಯ ಸ್ನೇಹಿತರು ಕೂಡ ಆಗಿದ್ದರು.
ದಿನನಿತ್ಯ ಒಟ್ಟಿಗೆ ಕೂತು ಹಣ್ಣನು ಮಾರಾಟ ಮಾಡುತ್ತಾ ಒಬ್ಬರಿಗೊಬ್ಬರ ಕಾಲನ್ನು ಎಳೆದುಕೊಳ್ಳುತ್ತಿದ್ದರು. ಎಂದಿನಂತೆ ನಿನ್ನೆ ಕೂಡ ಹಣ್ಣಿನ ಮಾರಾಟಕ್ಕೆ ಬಂದ ಅರ್ಬಾಜ್ ಹಾಗೂ ಫರ್ಹಾದ್ ಅಂಗಡಿಯನ್ನು ಓಪನ್ ಮಾಡಿಕೊಂಡು ಹಣ್ಣು ಮಾರಾಟ ಮಾಡುತ್ತಾ ಕುಳಿತ್ತಿದ್ದರು.
ಬಳಿಕ ಹೀಗೆ ಏನೋ ತಮಾಷೆ ಒಬ್ಬರ ಕಾಲನ್ನು ಒಬ್ಬರು ಎಳೆಯಲು ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆಯುತ್ತಾ ಹೋದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ತಮಾಷೆಗೆ ಆರಂಭವಾದ ಗಲಾಟೆ ಹೋಗ್ತಾ ಹೋಗ್ತಾ ವಿಕೋಪಕ್ಕೆ ತೆರಳಿದೆ.
ಇತ್ತ ಅರ್ಬಾಜ್ ಮಾತನ್ನು ಕೇಳಿದ ಫರ್ಹಾದ್ ಸಿಟ್ಟಿನಲ್ಲಿ ಅಲ್ಲೇ ಪಕ್ಕದಲ್ಲಿದ್ದ ಕತ್ತರಿಯಿಂದ ಆತನ ಕುತ್ತಿಗೆಗೆ ಚುಚ್ಚಿದ್ದಾನೆ. ಈ ವೇಳೆ ಅರ್ಬಾಜ್ ತೀವ್ರ ರಕ್ತಸ್ರಾವ ಉಂಟಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವೇಳೆ ಪ್ರಾಥಮಿಕ ಚಿಕಿತ್ಸೆ ಮಾಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೋಲಾರಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಅದರಂತೆ ಕೋಲಾರಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಚಿಂತಾಮಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಫರ್ಹಾದ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.