ಚಿಕ್ಕಮಗಳೂರು: ಯುವತಿಗೆ ನಡು ರಸ್ತೆಯಲ್ಲಿ ಚಾಕು ಇರಿದ ಪಾಗಲ್ ಪ್ರೇಮಿ

ಚಿಕ್ಕಮಗಳೂರು: ಪ್ರಿಯತಮೆಗೆ ಪಾಗಲ್ ಪ್ರೇಮಿಯೊಬ್ಬ ನಡು ರಸ್ತೆಯಲ್ಲಿ ಚಾಕು ಇರಿದಿರುವ ಘಟನೆ ಕಳಸ ಪಟ್ಟಣದ ಮಹಾವೀರ ಸರ್ಕಲ್ನಲ್ಲಿ ನಡೆದಿದೆ.

ಪಟ್ಟಣದ ಖಾಸಗಿ ಕ್ಲಿನಿಕ್ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಯುವತಿಗೆ ಕೊಪ್ಪ ತಾಲೂಕಿನ ಗುಡ್ಡೆ ತೋಟದ ಗ್ರಾಮದ ಯುವಕನ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಇಂದು (ಸೆ.5) ಮಧ್ಯಾಹ್ನ ಕಳಸ ಪಟ್ಟಣದ ಮಹಾವೀರ ವೃತ್ತದ ಬಳಿ ಇಬ್ಬರಿಗೂ ಜಗಳವಾಗಿದೆ. ಆದರೆ, ಜಗಳ ಯಾವ ಕಾರಣಕ್ಕೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಜಗಳವಾಗುತ್ತಿದ್ದಂತೆ ಯುವಕ ಯುವತಿಗೆ ಕಲ್ಲು ಹಾಗೂ ಚಾಕುವಿನಿಂದ ಹೊಡೆದಿದ್ದಾನೆ.
ಹಲ್ಲೆಯಿಂದ ಯುವತಿಯ ತಲೆ ಹಾಗೂ ಬೆನ್ನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಕಳಸದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
ಕಳಸ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಹಲ್ಲೆ ನಡೆಸಿದ ಯುವಕ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ
