Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಸ್ ನಿಲುಗಡೆಗೆ ನಿರಾಕರಣೆ: ಕೆಎಸ್‌ಆರ್‌ಟಿಸಿ ಸಿಬ್ಬಂದಿ ವಿರುದ್ಧ ರಾಮನಗರದಲ್ಲಿ ವಿದ್ಯಾರ್ಥಿನಿಯರ ಪ್ರತಿಭಟನೆ

Spread the love

ರಾಮನಗರ: ಕಾಲೇಜು ಬಳಿ ಕೋರಿಕೆ ನಿಲುಗಡೆ ಕೇಳಿದ್ದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರು ನಿಂದಿಸಿದ್ದನ್ನು ಖಂಡಿಸಿ, ನಗರದ ಮಾಗಡಿ ರಸ್ತೆಯ ರಾಯರದೊಡ್ಡಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಬುಧವಾರ ತರಗತಿ ಬಹಿಷ್ಕರಿಸಿ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಯತ್ನಿಸಿದರು. ಜಗ್ಗದ ವಿದ್ಯಾರ್ಥಿಗಳು ಬಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಯಿಸುವಂತೆ ಪಟ್ಟು ಹಿಡಿದು ‘ಬೇಕೇ ಬೇಕೇ ನ್ಯಾಯ ಬೇಕು’ ಎಂದು ಘೊಷಣೆಗಳನ್ನು ಕೂಗಿದರು.

ಪ್ರಾಂಶುಪಾಲ ಹಾಗೂ ಉಪನ್ಯಾಸಕರು ಪ್ರತಿಭಟನೆಗೆ ಸಾಥ್ ನೀಡಿದರು. ಕಡೆಗೆ ಪೊಲೀಸರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕರೆಯಿಸಿ ಕ್ಷಮೆ ಕೇಳಿಸಿದ ಬಳಿಕ, ಪ್ರತಿಭಟನೆ ನಿಲ್ಲಿಸಿದರು.

ಜಡೆ ಎಳೆದರು: ‘ರಾಮನಗರದ ಡಿಪೊದ ಮಾಗಡಿ-ರಾಮನಗರ ಬಸ್‌ ಅನ್ನು ಬೆಳಿಗ್ಗೆ ಹತ್ತಿಕೊಂಡಿದ್ದ ನಾವು, ಕಾಲೇಜಿನ ಬಳಿ ಎಂದಿನಂತೆ ಬಸ್ ನಿಲ್ಲಿಸುವಂತೆ ನಿರ್ವಾಹಕಿಯನ್ನು ಕೇಳಿದೆವು. ಅದಕ್ಕೆ ನಿರ್ವಾಹಕಿ, ಎಲ್ಲೆಂದರಲ್ಲಿ ಬಸ್ ನಿಲ್ಲಿಸುವುದಿಲ್ಲ ಎಂದು ವಾಗ್ವಾದ ನಡೆಸಿ, ವಿದ್ಯಾರ್ಥಿನಿಯೊಬ್ಬರ ಜಡೆ ಎಳೆದರು. ಬಸ್ ನಿಲ್ಲಿಸಿದ ಬಳಿಕ ಚಾಲಕ ಸಹ ಇಲ್ಲಿ ಬಸ್ ನಿಲ್ಲಿಸಲು ಯಾರು ಹೇಳಿದ್ದಾರೆಂದು ನಿಂದಿಸಿದರು’ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಆರೋಪಿಸಿದರು.

‘ಬಸ್‌ನಿಂದ ಕೆಳಕ್ಕಿಳಿದ ನಾವು ಸಿಬ್ಬಂದಿಯ ನಡೆ ಖಂಡಿಸಿ ಪ್ರಶ್ನಿಸಿದೆವು. ಆಗ ಚಾಲಕ, ಬಸ್ ನಿಲ್ಲಸದೆ ಮಾಗಡಿ ಕಡೆಗೆ ಹೋದರು. ಸ್ಥಳೀಯ ಶಾಸಕರ ಸೂಚನೆ ಮೇರೆಗೆ ಕೋರಿಕೆ ನಿಲುಗಡೆ ಇದ್ದರೂ, ಬಸ್‌ಗಳಲ್ಲೂ ನಿತ್ಯ ಇದೇ ಸ್ಥಿತಿ ಅನುಭವಿಸುತ್ತಿದ್ದೇವೆ. ಅದಕ್ಕೆ ಇಂದು ಪತಿಭಟನೆ ನಡೆಸಿದ್ದೇವೆ. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವ ಜೊತೆಗೆ ಬಸ್‌ ಚಾಲಕರು ಚಕಾರ ಎತ್ತದೆ ಕಾಲೇಜು ಬಳಿ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ಸ್ಥಳಕ್ಕೆ ಬಂದ ರಾಮನಗರ ವೃತ್ತದ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣ, ಐಜೂರು ಠಾಣೆ ಎಸ್‌ಐ ಜಾರ್ಜ್ ಪ್ರಕಾಶ್ ಹಾಗೂ ಸಿಬ್ಬಂದಿ, ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಬಳಿಕ ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕರು ಮತ್ತು ವಿಭಾಗೀಯ ನಿಯಂತ್ರಣಾಧಿಕಾರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅವರ ಪರವಾಗಿ ಸ್ಥಳಕ್ಕೆ ಎಟಿಎಸ್ ಸುಜಾತ ಅವರು ಸ್ಥಳಕ್ಕೆ ಬಂದರು.

ಕೆಲ ಹೊತ್ತಿನ ಬಳಿಕ, ಬಸ್ ಚಾಲಕ ಮತ್ತು ನಿರ್ವಾಹಕಿಯನ್ನು ಸ್ಥಳಕ್ಕೆ ಕರೆಯಿಸಿದರು. ಈ ವೇಳೆ, ನಡೆದ ಸಭೆಯಲ್ಲಿ ಇಬ್ಬರೂ ಕ್ಷಮೆ ಕೇಳಿದರು. ವಿದ್ಯಾರ್ಥಿಗಳ ಬೇಡಿಕೆಯಂತೆ ಕಾಲೇಜು ಬಳಿ ಕೋರಿಕೆ ನಿಲುಗಡೆ ಬೋರ್ಡ್ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಸುಜಾತ ಭರವಸೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

ಸಿಬ್ಬಂದಿ ವಿರುದ್ಧ ಕ್ರಮ ಕುರಿತು ಪ್ರಸ್ತಾಪವಾದಾಗ ಪ್ರಾಂಶುಪಾಲ ಜಿ. ಶಿವಣ್ಣ ಅವರು, ‘ಕರ್ತವ್ಯದ ಸಂದರ್ಭದಲ್ಲಿ ತಪ್ಪಾಗುವುದು ಸಹಜ. ಅದನ್ನು ಪ್ರತಿಷ್ಠೆಯಾಗಿ ಪರಿಗಣಿಸದೆ ತಪ್ಪು ತಿದ್ದಿಕೊಂಡು ನಡೆದರೆ ಸಾಕು’ ಎನ್ನುವ ಮೂಲಕ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದರು. ಸಹ ಪ್ರಾಧ್ಯಾಪಕರಾದ ಡಾ. ಟಿ. ದೀಪಕ್ ಕುಮಾರ್, ರಾಧಾ ಜಿ.ಆರ್, ಶ್ರೀನಿವಾಸ್ ಗೌಡ, ಮಹೇಶ್ವರ್, ವಿಶ್ವನಾಥಯ್ಯ ಸೇರಿದಂತೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ರೈತ ಸಂಘಟನೆಯೊಂದರ ಮುಖಂಡರು ಇದ್ದರು.

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಸಿಪಿಐ ಕೃಷ್ಣ ಅವರು ಕಾಲೇಜು ಪ್ರಾಂಶುಪಾಲ ಜಿ. ಶಿವಣ್ಣ ಅವರಿಂದ ಘಟನೆ ಕುರಿತು ಮಾಹಿತಿ ಪಡೆದರು. ಐಜೂರು ಎಸ್‌ಐ ಜಾರ್ಜ್ ಪ್ರಕಾಶ್ ಇದ್ದಾರೆ
ಕಣ್ಣೀರಿಟ್ಟ ಬಸ್ ನಿರ್ವಾಹಕಿ; ನಿಂದಿಸಿಲ್ಲ ಎಂದ ಚಾಲಕ

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಬಂದ ಬಸ್‌ ಚಾಲಕ ಮತ್ತು ನಿರ್ವಾಹಕಿಯನ್ನು ಕೆಎಸ್‌ಆರ್‌ಟಿಸಿ ಅಧಿಕಾರಿ ಸ್ಥಳಕ್ಕೆ ಕರೆಯಿಸಿದರು. ಪ್ರಾಂಶುಪಾಲರು ಮತ್ತು ಪೊಲೀಸರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಇಬ್ಬರೂ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು. ‘ಬಸ್ ನಿಲ್ಲಿಸಲು ಬ್ರೇಕ್ ಹಾಕಿದಾಗ ಬ್ಯಾಲೆನ್ಸ್ ತಪ್ಪಿ ವಿದ್ಯಾರ್ಥಿನಿಯ ಜಡೆ ಹಿಡಿದೆ. ಈ ಕುರಿತು ತಪ್ಪು ತಿಳಿಯಬೇಡಮ್ಮ ಎಂದು ಹೇಳುವಷ್ಟರಲ್ಲಿ ವಿದ್ಯಾರ್ಥಿನಿ ಬಸ್ ಇಳಿದು ಹೋದರು. ಆ ಹುಡುಗಿ ನನ್ನ ಮಗಳಂತಿದ್ದು ಉದ್ದೇಶಪೂರ್ವಕಾಗಿ ಆ ರೀತಿ ವರ್ತಿಸಿಲ್ಲ’ ಎಂದು ನಿರ್ವಾಹಕಿ ಕಣ್ಣೀರು ಹಾಕಿದರು. ಚಾಲಕ ಸಹ ‘ನಾನು ಯಾರನ್ನೂ ಕೆಟ್ಟದಾಗಿ ನಿಂದಿಸಿಲ್ಲ. ಬಸ್‌ ಒಳಗಿದ್ದ ವ್ಯಕ್ತಿಯೊಬ್ಬರು ಆ ರೀತಿ ಮಾತನಾಡಿದರು’ ಎಂದು ಸಮಜಾಯಿಷಿ ನೀಡಿದರು. ಕಡೆಗೆ ಇಬ್ಬರೂ ಕ್ಷಮೆ ಕೋರಿದರು.


Spread the love
Share:

administrator

Leave a Reply

Your email address will not be published. Required fields are marked *