ನಟ ಹರೀಶ್ ರಾಯ್ಗೆ ಕ್ಯಾನ್ಸರ್: ‘ಕೆಜಿಎಫ್ ಚಾಚಾ’ ನೆರವು ಯಾಚನೆ

ಕೆಜಿಎಫ್’ ಸಿನಿಮಾ ಮೂಲಕ ‘ಕೆಜಿಎಫ್ ಚಾಚಾ’ ಎಂದೇ ಫೇಮಸ್ ಆದವರು ಹರೀಶ್ ರಾಯ್ (Harish Roy) . ಅವರು ಸಿನಿಮಾದಲ್ಲಿ ರಾಕಿ ಭಾಯ್ನ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈ ಮೊದಲು ಹಲವು ಸಿನಿಮಾಗಳಲ್ಲಿ ವಿಲನ್ ಪಾತ್ರಗಳ ಮೂಲಕ ಹರೀಶ್ ಗಮನ ಸೆಳೆದಿದ್ದರು. ಈಗ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ.

ಅವರು ಸಾವು-ಬದುಕಿನ ನಡುವೆ ಹೋರಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಅವರು ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಅವರ ಸ್ಥಿತಿ ನೋಡಿ ಅನೇಕರಿಗೆ ಬೇಸರ ಆಗಿದೆ.
ಹರೀಶ್ ರಾಯ್ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಕಾಣಿಸಿಕೊಂಡಿದೆ. ಅದು ಈಗ ಹೊಟ್ಟೆಗೂ ಪಸಿರಿಸಿದ್ದು, ಹೊಟ್ಟೆ ಊದುಕೊಂಡಿದೆ. ಅವರು ಸಾಕಷ್ಟು ತೆಳ್ಳಗಾಗಿದ್ದಾರೆ. ಅವರನ್ನು ನೋಡಿ ಅನೇಕರು ಬೇಸರ ಹೊರಹಾಕಿದ್ದಾರೆ. ಕೆಜಿಎಫ್ ಚಾಚಾನ ಸ್ಥಿತಿ ನೋಡಿ ಅನೇಕರು ಕಣ್ಣೀರು ಹಾಕಿದ್ದಾರೆ. ಯಶ್ ಬಳಿ ಸಹಾಯ ಮಾಡುವಂತೆ ಫ್ಯಾನ್ಸ್ ಒತ್ತಾಯಿಸಿದ್ದಾರೆ.
ಗೋಪಿ ಗೌಡ ಹೆಸರಿನ ವ್ಯಕ್ತಿ ಈ ಬಗ್ಗೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಕ್ಯಾನ್ಸರ್ ಹೊಟ್ಟೆಗೆ ಸ್ಪ್ರೆಡ್ ಆಗಿ, ಹೊಟ್ಟೆಯಲ್ಲಿ ನೀರು ತುಂಬಿಕೊಂಡಿದೆ. ಅವರಿಗೆ ಸಹಾಯ ಮಾಡಿ’ ಎಂದು ಗೋಪಿ ಅವರು ಹೇಳಿದ್ದಾರೆ. ಈ ವೇಳೆ ಹರೀಶ್ ರಾಯ್ ಅವರು ಭಾವುಕರಾಗಿದ್ದರು. ನನ್ನನ್ನು ಉಳಿಸಿಕೊಡಿ ಎಂದು ಸಹಾಯ ಬೇಡಿದ್ದಾರೆ.
ಹರೀಶ್ ರಾಯ್ ಅವರು ಅನಾರೋಗ್ಯ ಕಾರಣದಿಂದ ನಟನೆಯಿಂದ ದೂರವೇ ಉಳಿದಿದ್ದಾರೆ. ಹೀಗಾಗಿ, ಅವರಿಗೆ ಆಸ್ಪತ್ರೆ ಖರ್ಚು ನೋಡಿಕೊಳ್ಳುವಷ್ಟು ಹಣ ಇಲ್ಲದಂತೆ ಆಗಿದೆ. ‘ನನನ್ನು ಉಳಿಸಿ’ ಎಂದು ಅವರು ಫಿಲ್ಮ್ ಚೇಂಬರ್, ನಿರ್ಮಾಪಕರು, ನಿರ್ದೇಶಕರು, ಸಹ ಕಲಾವಿದರಿಗೆ ವಿಡಿಯೋ ಮೂಲಕ ಸಹಾಯ ಕೇಳಿದ್ದಾರೆ.