ದರ್ಶನ್ ಕ್ಷಮೆ ಕೇಳಿದ್ರೆ ಒಪ್ಪಿಕೊಳ್ಳುವಿರಾ?-ರೇಣುಕಾಸ್ವಾಮಿ ತಂದೆಯ ಪ್ರತಿಕ್ರಿಯೆ

ತಮ್ಮ ಮಗನಿಗೆ ಚಿತ್ರಹಿಂಸೆ ಕೊಟ್ಟು ಕೊ*ಲೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ರೇಣುಕಾಸ್ವಾಮಿ ಕುಟುಂಬಸ್ಥರು ಮೊದಲಿನಿಂದ ಹೇಳುತ್ತಲೇ ಬಂದಿದ್ದಾರೆ.ಮಾಡಿದ ತಪ್ಪಿನ ಅರಿವಾಗಿ ಮುಂದಿನ ದಿನಗಳಲ್ಲಿ ದರ್ಶನ್ ಆಗಲಿ ಅಥವಾ ಅವರ ಕುಟುಂಬಸ್ಥರು ಬಂದು ಕ್ಷಮೆ ಕೇಳಿದ್ರೆ ಅದನ್ನು ಒಪ್ಪಿಕೊಳ್ತೀರಾ?

ಎನ್ನುವ ಪ್ರಶ್ನೆಗೆ ರೇಣುಕಾಸ್ವಾಮಿ ಅವರ ತಂದೆ ಉತ್ತರ ನೀಡಿದ್ದಾರೆ.
ಸಂದರ್ಶನದಲ್ಲಿ ರೇಣುಕಾಸ್ವಾಮಿ ಪೋಷಕರು ಈ ಬಗ್ಗೆ ಮಾತನಾಡಿದ್ದಾರೆ.
“ನಾನು ಯಾರನ್ನು ದೂಷಣೆ ಮಾಡುವ ವ್ಯಕ್ತಿಯಲ್ಲ. ತಪ್ಪು ಯಾರೇ ಮಾಡಿದ್ರೂ ಅದಕ್ಕವರು ಪಶ್ಚಾತಾಪ ಪಟ್ಟುಕೊಳ್ಳಬೇಕು. ಅವರಿಗೆ ತಪ್ಪು ಅನ್ನುವ ಮನವರಿಕೆ ಬರಬೇಕು. ಅವರಿಗೆ ಏನಾಗುತ್ತದೋ ಇಲ್ವೋ ಗೊತ್ತಿಲ್ಲ. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಯಾರು ತಪ್ಪು ಮಾಡಿದ್ದಾರೆ ಎನ್ನುವುದನ್ನು ಕೋರ್ಟ್ ತೀರ್ಮಾನ ಮಾಡಬೇಕು ನಾನೇನು ಹೇಳಲ್ಲ. ತಪ್ಪಿಸ್ಥರಿಗೆ ಶಿಕ್ಷೆ ಆದರೆ ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನುವುದು ನನ್ನ ಭಾವನೆ” ಎಂದು ರೇಣುಕಾಸ್ವಾಮಿ ತಂದೆ ಹೇಳಿದ್ದಾರೆ.
“ಅವರು (ದರ್ಶನ್) ಯಾಕೆ ಹಾಗೆ ಮಾಡಿದ್ರು ಅಂತ ಗೊತ್ತಿಲ್ಲ. ಅಷ್ಟು ದೊಡ್ಡ ನಟರು ಅವರು. ಸಿನಿಮಾದ ಮೂಲಕ ದೇಶಕ್ಕೆ, ಸಮಾಜಕ್ಕೆ ನೀತಿ ಪಾಠ ಹೇಳಬೇಕು. ಪಾಠ ಹೇಳುವವರೇ ಈ ರೀತಿ ಮಾಡಿದ್ದಾರೆ ಅಂದರೆ ನನಗೆ ತುಂಬಾ ನೋವಾಗುತ್ತದೆ” ಎಂದಿದ್ದಾರೆ.
“ಮುಂದೆ ಇಂತಹ ಅಪರಾಧವನ್ನು ಯಾರೂ ಮಾಡಬಾರದು. ಇದು ಎಲ್ಲರಿಗೆ ಪಾಠವಾಗಬೇಕು. ಇದು ಯಾರಿಗೂ ಮುಂದೆ ಆಗಬಾರದು ಇದೇ ನನ್ನ ಆಶಯ. ಮನುಷ್ಯನಲ್ಲಿ ಮನುಷ್ಯತ್ವ ಇರಬೇಕು. ಮನುಷ್ಯನ ಸ್ವಭಾವದಲ್ಲಿ ತಪ್ಪಿರುತ್ತದೆ. ಆ ತಪ್ಪಿಗೆ ಯಾವ ರೀತಿ ಶಿಕ್ಷೆ ಇರುತ್ತದೋ ಹಾಗೆ ನೀಡಬೇಕು. ತಪ್ಪು ಎಲ್ಲರೂ ಮಾಡುತ್ತಾರೆ. ಎಲ್ಲಾ ತಪ್ಪಿಗೂ ಕೊಲೆಯೇ ಅಸ್ತ್ರವಲ್ಲ, ಪರಿಹಾರವಲ್ಲ. ಅದಕ್ಕೆ ಬೇರೆ ರೀತಿ ಮಾರ್ಗಗಳಿವೆ” ಎಂದು ಹೇಳುತ್ತಾ ಪೋಷಕರು ಭಾವುಕರಾಗಿದ್ದಾರೆ.