ಸಹಕಾರ ಸಚಿವ ಕೆ.ಎನ್. ರಾಜಣ್ಣ ವಜಾ: ಮಧುಗಿರಿಯಲ್ಲಿ ಅಭಿಮಾನಿಗಳ ಪ್ರತಿಭಟನೆ

ಸಹಕಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣ (K N Rajanna) ಅವರನ್ನ ಸಂಪುಟದಿಂದ ವಜಾ ಮಾಡಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಣ್ಣನವರನ್ನ ವಜಾಗೊಳಿಸಿದರು. ತುಂಬ ದಿನಗಳಿಂದಲೂ ಕೆ.ಎನ್.ರಾಜಣ್ಣ ಪಕ್ಷ ವಿರೋಧಿಯಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಮಹದೇವಪುರದಲ್ಲಿ ಬಿಜೆಪಿ ಮತಕಳ್ಳತನ ಮಾಡಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಜಣ್ಣ ʼಲೋಕಸಭೆ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಇತ್ತು. ವೋಟರ್ ಲಿಸ್ಟ್ ಮಾಡಿದ್ದು ಯಾರು; ಆಗ ಅವರಿಗೆ ಎಚ್ಚೆತ್ತುಕೊಳ್ಳೋಕೆ ಆಗಿರ್ಲಿಲ್ಲವಾʼ ಎಂದು ಪ್ರಶ್ನಿಸಿದ್ದರು. ಈ ಮೂಲಕ ತಮ್ಮದೇ ಸರ್ಕಾರದ ವಿರುದ್ಧವೇ ಹೇಳಿಕೆ ನೀಡಿದ್ದರು. ಅದಾದ ಮೇಲೆ ಅವರ ತಲೆದಂಡವಾಗಿದೆ..
ಮಧುಗಿರಿಯಲ್ಲಿ ಕೋಲಾಹಲ..!
ಕೆ.ಎನ್.ರಾಜಣ್ಣ ವಜಾಗೊಂಡ ಬೆನ್ನಲ್ಲೇ ಅವರ ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಂದು ತುಮಕೂರಿನ ಮಧುಗಿರಿ ಪಟ್ಟಣದಲ್ಲಿ ಬೃಹತ್ ಹೋರಾಟ ನಡೆಸಿದ್ದಾರೆ. ಬೀದಿಬೀದಿಗಲ್ಲಿ ಮೆರವಣಿಗೆ ನಡೆಸಿದರು. ರಾಜಣ್ಣನವರನ್ನ ವಜಾ ಮಾಡಿದ್ದನ್ನ ಖಂಡಿಸಿದರು. ಒಬ್ಬಾತ ಪೆಟ್ರೋಲ್ ಸುರಿದುಕೊಂಡ, ಮತ್ತೆ ಒಂದಷ್ಟು ಮಂದಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದರು. ಇನ್ನೊಬ್ಬನಂತೂ ಬಸ್ ಕೆಳಗೆ ಹೋಗಿ ಮಲಗಿದ್ದ. ಪರಿಸ್ಥಿತಿಯನ್ನ ನಿಯಂತ್ರಣ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಮಧುಗಿರಿಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದುಹೋಗಿದೆ. ರಾಜಣ್ಣನಿಗೆ ಅನ್ಯಾವಾಯಿತು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂದು ರಾಜಣ್ಣ ಅಭಿಮಾನಿಗಳು ಏಕಾಏಕಿ ಬಂದ್ ಕರೆ ನೀಡಿದರು. ಅನೇಕ ವರ್ತಕರು ಒಪ್ಪಲಿಲ್ಲ. ಆಗ ರಾಜಣ್ಣ ಫಾಲೋವರ್ಸ್ ಬಲವಂತವಾಗಿ ಅಂಗಡಿಗಳನ್ನ ಮುಚ್ಚಿಸಿದ್ದಾರೆ. ಧ್ವಂಸಕ್ಕೂ ಮುಂದಾಗಿದ್ದಾರೆ.
ಕಾಂಗ್ರೆಸ್ನಲ್ಲಿ ಕೆ.ಎನ್.ರಾಜಣ್ಣ ಮತ್ತು ಡಿ.ಕೆ.ಶಿವಕುಮಾರ್ ನಡುವೆ ತುಂಬ ತಿಂಗಳುಗಳಿಂದಲೇ ತಿಕ್ಕಾಟ ನಡೆಯುತ್ತಿತ್ತು. ರಾಜಣ್ಣ ಅವರು ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಾಯಕರು. ಆದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗೆ ಏರುವಲ್ಲಿ ಅಡ್ಡಗಾಲು ಹಾಕುತ್ತಲೇ ಬಂದಿದ್ದರು. ಇತ್ತೀಚೆಗೆ ಸುರ್ಜೇವಾಲಾ ಸಭೆಯ ಬಗ್ಗೆಯೂ ಉಡಾಫೆಯ ಮಾತುಗಳನ್ನ ಆಡಿದ್ದರು. ಸೆಪ್ಟೆಂಬರ್ನಲ್ಲಿ ಏನೋ ಕ್ರಾಂತಿಯಾಗುತ್ತದೆ ಎಂದು ಪದೇಪದೆ ಹೇಳುತ್ತಿದ್ದರು. ಅದಕ್ಕೂ ಮೊದಲು ಆಗಸ್ಟ್ನಲ್ಲಿಯೇ ಕಾಂಗ್ರೆಸ್ ವಲಯದಲ್ಲಿ ಒಂದು ಕ್ರಾಂತಿ ಆಗಿಬಿಟ್ಟಿದೆ.. ಇನ್ನು ರಾಜಣ್ಣ ವಜಾ ಮಾಡಿದ್ದನ್ನ ಪ್ರತಿಪಕ್ಷವಾದ ಬಿಜೆಪಿ ತೀವ್ರವಾಗಿ ಟೀಕಿಸುತ್ತಿದೆ. ನಿನ್ನೆಯಿಂದ ಮುಂಗಾರು ಅಧಿವೇಶನ ಶುರುವಾಗಿದೆ. ಬಿಜೆಪಿಗರಿಗೆ ರಾಜಣ್ಣ ವಜಾ ವಿಚಾರವೂ ಅಸ್ತ್ರವಾಗಿದೆ. ʼಮತಗಳ್ಳತನ ವಿಷಯದಲ್ಲಿ ರಾಜಣ್ಣ ಸತ್ಯವನ್ನೇ ಹೇಳಿದ್ದಾರೆ. ಆದರೂ ಅವರನ್ನ ಕಾಂಗ್ರೆಸ್ ಹೈಕಮಾಂಡ್ ವಜಾ ಮಾಡಿದ್ದೆʼ ಎಂದು ಟೀಕಿಸುತ್ತಿದ್ದಾರೆ.