ಇಂಧನ ಸಮಸ್ಯೆಯನ್ನು ನಿರ್ಲಕ್ಷಿಸಿದ ವಿಪಕ್ಷಗಳ ವಿರುದ್ಧ ಡಿಜಿಟಲ್ ಮಾರ್ಕೆಟರ್ ಮಿಲನ್ ಬರ್ಸೋಪಿಯಾ ಆಕ್ರೋಶ

ಹೊಸದಿಲ್ಲಿ: ಸದ್ಯ ಭಾರತದಲ್ಲಿ ಬೃಹತ್ ಸಮಸ್ಯೆಯಾಗಿರುವ ಪೆಟ್ರೋಲ್ ನೊಂದಿಗೆ ಎಥನಾಲ್ ಮಿಶ್ರಣವನ್ನು ವಿಪಕ್ಷಗಳು ನಿರ್ಲಕ್ಷಿಸಿವೆ ಎಂದು ಜನಪ್ರಿಯ ಬ್ರ್ಯಾಂಡ್ ಮ್ಯಾನೇಜರ್ ಮತ್ತು ಡಿಜಿಟಲ್ ಮಾರ್ಕೆಟರ್ ಮಿಲನ್ ಬರ್ಸೋಪಿಯಾ ಆರೋಪಿಸಿದ್ದಾರೆ. ಮಿಲನ್ ಬರ್ಸೋಪಿಯಾ ದಿ ರೈಟ್ ಬ್ರೈನ್ ಸಂಸ್ಥೆಯ ಸಂಸ್ಥಾಪಕ ಹಾಗೂ ಜಿಯೊ ಮತ್ತು ದಿ ವೈರಲ್ ಫೀವರ್ ಸಂಸ್ಥೆಗಳ ಮಾಜಿ ಬ್ರಾಂಡ್ ಮ್ಯಾನೇಜರ್ ಕೂಡಾ ಆಗಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮಿಲನ್ ಬರ್ಸೋಪಿಯಾ, ಜನರು ಮೈಲೇಜ್ ಕುಂಠಿತ, ಎಂಜಿನ್ ಗೆ ಹಾನಿ ಹಾಗೂ ಎಥನಾಲ್ ಮಿಶ್ರಣದಿಂದ ಪೆಟ್ರೋಲ್ ಬೆಲೆ ಏರಿಕೆಯಾಗಿರುವುದರ ಕುರಿತು ಆರೋಪಿಸುತ್ತಿರುವಾಗ, ವಿಪಕ್ಷಗಳು ಬೇರೆ ವಿಷಯಗಳಲ್ಲಿ ಮಗ್ನವಾಗಿವೆ. ಪೆಟ್ರೋಲ್ ದರಗಳು ಹಾಗೂ ಅದರ ಗುಣಮಟ್ಟವು ಜಾತಿ, ಧರ್ಮ ಅಥವಾ ರಾಜಕೀಯ ಪಕ್ಷಗಳೊಂದಿಗಿನ ಗುರುತಿಸಿಕೊಳ್ಳುವಿಕೆಯನ್ನೂ ಮೀರಿ ಜನರನ್ನು ಬಾಧಿಸುತ್ತವೆ ಎಂಬುದರತ್ತ ಅವರು ಬೆಟ್ಟು ಮಾಡಿದ್ದಾರೆ.
“ಜನರ ಜೇಬುಗಳು ಖಾಲಿಯಾಗುತ್ತಿವೆ. ಪೆಟ್ರೋಲ್ ಎಲ್ಲರ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ. ಆದರೆ, ಚುನಾವಣೆ ಎಂಬುದು ಅಕ್ರಮಗಳ ಆಟ ಎಂದು ಜನರು ಭಾವಿಸಿರುವ ದೇಶದಲ್ಲಿ, ರಾಹುಲ್ ಗಾಂಧಿ ಚುನಾವಣಾ ಆಯೋಗ ಮತ್ತು ಮತಗಳ್ಳತನವನ್ನು ಬಯಲು ಮಾಡುವುದರಲ್ಲಿ ವ್ಯಸ್ತರಾಗಿದ್ದಾರೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಮರ್ಥನೆಯಾಗಿ ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಪ್ರದರ್ಶಿಸುತ್ತಿದ್ದ ಧೋರಣೆ ಹಾಗೂ ಹಾಲಿ ವಿಪಕ್ಷಗಳ ಧೋರಣೆಯನ್ನು ಅವರು ಹೋಲಿಕೆ ಮಾಡಿದ್ದಾರೆ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಅದು ಅನಿಲ ಸಿಲಿಂಡರ್ ಬೆಲೆ ಏರಿಕೆ, ಪೆಟ್ರೋಲ್ ದರಗಳು, ಹಣದುಬ್ಬರನ್ನು ಗುರಿಯಾಗಿಸಿಕೊಂಡಿತ್ತು. ಅದಕ್ಕೆ ಜನರಿಂದಲೂ ಪ್ರತಿಸ್ಪಂದನೆ ವ್ಯಕ್ತವಾಗಿತ್ತು. “ಜಾಗೃತರಾಗಿ ರಾಹುಲ್ ಮತ್ತು ವಿರೋಧ ಪಕ್ಷಗಳೆ. ದೇಶ ಜಾಗೃತಗೊಳ್ಳುತ್ತಿದೆ. ಪ್ರಕಾಶಿಸುವುದೀಗ ನಿಮ್ಮ ಸರದಿ” ಎಂದು ಅವರು ಕರೆ ನೀಡಿದ್ದಾರೆ.
ಮತಗಳ್ಳತನವನ್ನು ನಿರ್ಲಕ್ಷಿಸಿರುವ ಅವರ ಧೋರಣೆಯ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಿಗೇ, “ಮತಗಳ್ಳತನ ನೇರವಾಗಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸುವುದರಿಂದ, ಇದೆಲ್ಲಕ್ಕಿಂತ ದೊಡ್ಡ ಸಮಸ್ಯೆ ಎಂಬುದು ಸತ್ಯ” ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಮಾಧ್ಯಮಗಳು ಹಾಗೂ ಸಾರ್ವಜನಿಕರು ಈ ವಿಷಯವನ್ನು ಆದ್ಯತೆಯನ್ನಾಗಿ ಪರಿಗಣಿಸುವುದು ತೀರಾ ಅಪರೂಪ. ಮಾರಾಟಗೊಂಡಿರುವ ಮಾಧ್ಯಮಗಳು ಈ ವಿಷಯವನ್ನು ಮುಟ್ಟುವುದಿಲ್ಲ ಹಾಗೂ ರಾಹುಲ್ ಗಾಂಧಿಯನ್ನೇ ದೂಷಿಸಲಿವೆ. ಅಲ್ಲದೆ, ಅರ್ಧದಷ್ಟು ದೇಶದಲ್ಲಿ ರಾಜಕಾರಣ ನಡೆಯುವುದೇ ಹಾಗೆ ಎಂಬ ಭಾವನೆ ಮನೆ ಮಾಡಿದೆ” ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.
► ಸದ್ಯ ಎಥನಾಲ್ ಮಿಶ್ರಣವೇಕೆ ಬೃಹತ್ ಸಂಗತಿ?
ಕಳೆದ 11 ವರ್ಷಗಳಲ್ಲಿ ಕೇಂದ್ರ ಸರಕಾರವು ಎಥನಾಲ್ ಮಿಶ್ರಣವನ್ನು 13 ಪಟ್ಟು ಏರಿಕೆ ಮಾಡಿದೆ. ಈ ನಡೆಗೆ ವಾಹನ ಮಾಲಕರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಇದರಿಂದಾಗಿ ನಮ್ಮ ಕಾರುಗಳ ಸಾಮರ್ಥ್ಯದ ಮೇಲೆ ದುಷ್ಪರಿಣಾಮವುಂಟಾಗಿದೆ ಎಂದು ಹಲವು ಮಾಲಕರು ಕಳವಳ ವ್ಯಕ್ತಪಡಿಸಿದ್ದಾರೆ. ಎಥನಾಲ್ ಉತ್ಪಾದನಾ ವೆಚ್ಚ ಕೂಡಾ ಪ್ರಮುಖ ವಿಷಯವಾಗಿದ್ದು, ಪೆಟ್ರೋಲ್ ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ, ಎಥನಾಲ್ ಉತ್ಪಾದನಾ ವೆಚ್ಚ ಅಗ್ಗವಾಗಿದೆ. ಹೀಗಿದ್ದೂ, ಪೆಟ್ರೋಲ್ ದರದಲ್ಲಿ ಯಾವುದೇ ಇಳಿಕೆ ಮಾಡಿಲ್ಲ ಎಂದು ಹಲವು ವಾಹನ ಮಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
► ಎಥನಾಲ್ ಮಿಶ್ರಣದಿಂದಾಗುತ್ತಿರುವ ಪ್ರಮುಖ ಸಮಸ್ಯೆಗಳು
ಪೆಟ್ರೋಲ್ನೊಂದಿಗೆ ಎಥನಾಲ್ ಮಿಶ್ರಣ ಮಾಡುತ್ತಿರುವುದರಿಂದ, ಮೈಲೇಜ್ ನಲ್ಲಿ ಇಳಿಕೆಯಾಗಿದೆ. ಇದರಿಂದ ವಾಹನ ಮಾಲಕರ ಜೇಬಿಗೆ ಹೊರೆಯಾಗಿದೆ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ.
ಎಂಜಿನ್ ಗೆ ಹಾನಿಯಾಗುತ್ತಿದೆ ಎಂಬುದು ಮತ್ತೊಂದು ಗಂಭೀರ ಆರೋಪವಾಗಿದೆ. ಕೆಲವು ಹಳೆಯ ವಾಹನಗಳ ಎಂಜಿನ್ ಗಳನ್ನು ಅಧಿಕ ಪ್ರಮಾಣದ ಎಥನಾಲ್ ಮಿಶ್ರಣಕ್ಕೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿಲ್ಲ. ಇದರಿಂದ ಇಂಧನ ವ್ಯವಸ್ಥೆ ಹಾಗೂ ಎಂಜಿನ್ ಗೆ ಗಂಭೀರ ಹಾನಿಯುಂಟಾಗುತ್ತಿದೆ ಎಂಬುದು ತಜ್ಞರ ಆರೋಪವಾಗಿದೆ.
ಎಥನಾಲ್ ಉತ್ಪಾದನಾ ವೆಚ್ಚ ಅಗ್ಗವಾಗಿದ್ದರೂ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡದಿರುವುದರಿಂದ, ಸಾರ್ವಜನಿಕರು ಮತ್ತಷ್ಟು ಹತಾಶರಾಗಿದ್ದಾರೆ.
ಪೆಟ್ರೋಲ್ ಬೆಲೆಗಳು ಈಗಾಗಲೇ ರಾಜಕೀಯ ಸೂಕ್ಷ್ಮ ವಿಷಯಗಳಾಗಿದ್ದರೂ, ವಿಪಕ್ಷಗಳು ಅದರ ಮೇಲೆ ಬೆಳಕು ಚೆಲ್ಲುವಲ್ಲಿ ವಿಫಲವಾಗಿವೆ. ಎಥನಾಲ್ ಮಿಶ್ರಣದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಬೆಳೆಯುತ್ತಿದ್ದರೂ, ಅದರಿಂದ ಎದುರಿಸಬೇಕಾದ ಆರ್ಥಿಕ ಹಾಗೂ ತಾಂತ್ರಿಕ ಸಮಸ್ಯೆಗಳನ್ನು ಜನರೆದುರು ಬಿಚ್ಚಿಡುವಲ್ಲಿಯೂ ವಿರೋಧ ಪಕ್ಷಗಳು ವಿಫಲಗೊಂಡಿವೆ ಎಂಬುದು ಮಿಲನ್ ಬರ್ಸೋಪಿಯಾ ಅವರ ಗಂಭೀರ ಆರೋಪವಾಗಿದೆ.
