ಡಿ.ಕೆ. ಶಿವಕುಮಾರ್ ಸಂಚರಿಸಿದ ಸ್ಕೂಟರ್ಗೆ ₹18,500 ದಂಡ ಬಾಕಿ; ನಿಯಮ ಉಲ್ಲಂಘನೆಗಾಗಿ ಸಚಿವರ ವಿರುದ್ಧ ಟೀಕೆ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರದ ಹೆಬ್ಬಾಳ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ ಸಚಿವ ಬೈರತಿ ಸುರೇಶ್ ಅವರೊಂದಿಗೆ ಸ್ಕೂಟರ್ ಏರಿ ಸಂಚರಿಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ, ಅವರು ಓಡಿಸಿದ ಸ್ಕೂಟರ್ ಮೇಲೆಯೇ ಬರೋಬ್ಬರಿ 18,500 ರೂಪಾಯಿ ದಂಡ ಬಾಕಿ ಇರುವುದು ಇದೀಗ ಬಹಿರಂಗವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೆಬ್ಬಾಳ ಮೇಲ್ಸೇತುವೆ ಪರಿಶೀಲನೆ ವೇಳೆ, ಸಂಚಾರ ದಟ್ಟಣೆಯನ್ನು ತಪ್ಪಿಸಲು ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಚಿವ ಬೈರತಿ ಸುರೇಶ್ ಅವರು ಸ್ಕೂಟರ್ನಲ್ಲಿ ಪ್ರಯಾಣಿಸಿದ್ದರು. ಆದರೆ, ಅವರು ಚಲಾಯಿಸಿದ ಸ್ಕೂಟರ್ ಈ ಹಿಂದೆ ಬರೋಬ್ಬರಿ 34 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಹೆಲ್ಮೆಟ್ ರಹಿತ ಚಾಲನೆ, ಸಿಗ್ನಲ್ ಜಂಪ್ ಸೇರಿದಂತೆ ಹಲವು ಪ್ರಕರಣಗಳು ಈ ವಾಹನದ ಮೇಲೆ ದಾಖಲಾಗಿದ್ದು, ಒಟ್ಟು ₹18,500 ದಂಡ ಪಾವತಿಸುವುದು ಬಾಕಿ ಇದೆ ಎಂದು ಸಂಚಾರ ಪೊಲೀಸ್ ಇಲಾಖೆಯ ದತ್ತಾಂಶಗಳಿಂದ ತಿಳಿದುಬಂದಿದೆ.
ಸಚಿವರಿಂದಲೂ ನಿಯಮ ಉಲ್ಲಂಘನೆ
ಬೆಂಗಳೂರು ನಗರದಾದ್ಯಂತ ನಡೆಯುತ್ತಿದ್ದ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡುವುದಕ್ಕೆ ಹೊರಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಬೈರತಿ ಸುರೇಶ್ ಅವರು ನಿನ್ನೆ ಐಎಸ್ಐ ಮಾರ್ಕ್ ಇಲ್ಲದ, ಗುಣಮಟ್ಟವಲ್ಲದ ಹೆಲ್ಮೆಟ್ ಧರಿಸಿ ನಿಯಮ ಉಲ್ಲಂಘಿಸಿದ್ದಾರೆ. ಅಷ್ಟೇ ಅಲ್ಲ, ಅವರ ಹಿಂದೆಯೇ ಮತ್ತೊಂದು ಸ್ಕೂಟರ್ನಲ್ಲಿ ಬರುತ್ತಿದ್ದ ಶಾಸಕ ಎನ್.ಎ. ಹ್ಯಾರೀಸ್ ಅವರು ಹೆಲ್ಮೆಟ್ ಧರಿಸದೆಯೇ ಸವಾರಿ ಮಾಡಿರುವುದು ವಿಡಿಯೋಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ.
ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳೇ ಈ ರೀತಿ ನಿಯಮಗಳನ್ನು ಗಾಳಿಗೆ ತೂರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ‘ಸಾರಥಿ’ ಸ್ಥಾನದಲ್ಲಿದ್ದವರೇ ನಿಯಮ ಪಾಲಿಸದಿದ್ದರೆ ಹೇಗೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ಈ ಹಿಂದೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ್ದ ಡಿಕೆಶಿ:
ಇನ್ನು ಕಳೆದ ವರ್ಷ ಆಗಸ್ಟ್ನಲ್ಲಿ ಕಾಂಗ್ರೆಸ್ನಿಂದ ಆಯೋಜನೆ ಮಾಡಲಾಗಿದ್ದ ಜನಾಂದೋಲನಾ ಯಾತ್ರೆಗೂ ಮುನ್ನ ಬೈಕ್ ರ್ಯಾಲಿಯಲ್ಲಿ ಆಯೋಜನೆ ಮಾಡಲಾಗಿತ್ತು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಬೈಕ್ ರ್ಯಾಲಿಯಲ್ಲಿ ಹೋಗುವಾಗ ಹೆಲ್ಮೆಟ್ ಧರಿಸದೇ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದರು. ಜೊತೆಗೆ, ಎಲ್ಲ ಕಾರ್ಯಕರ್ತರೂ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದರು. ಜೊತೆಗೆ, ಬೈಕ್ ರೈಡ್ ಮಾಡುವಾಗ ಕೆಲವರು ಮೊಬೈಲ್ ಕಿವಿಗೆ ಇಟ್ಟುಕೊಂಡು ಮಾತನಾಡುತ್ತಾ ಬೈಕ್ ರೈಡ್ ಮಾಡುತ್ತಿದ್ದರು. ಈ ವೇಳೆ ಸರ್ಕಾರ ನಡೆಸುವಂತಹ ಜನಪ್ರತಿನಿಧಿಗಳೇ ನಿಯಮ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು.
