ಧರ್ಮಸ್ಥಳ ಶವ ಹೂತುಹಾಕಿದ ಪ್ರಕರಣ: ಉತ್ಖನನದಲ್ಲಿ ಅಸ್ಥಿಪಂಜರ ಪತ್ತೆ; ಪ್ರಕರಣಕ್ಕೆ ಹೊಸ ತಿರುವು

ದಕ್ಷಿಣ ಕನ್ನಡ: ಧರ್ಮಸ್ಥಳ (Dharmasthala) ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT) ಇಂದೂ ಸಹ ಶೋಧಕಾರ್ಯ ಮಾಡಿದ್ದು, ಬಂಗ್ಲ ಗುಡ್ಡದಲ್ಲಿ ಉತ್ಖನನ ಮಾಡುತ್ತಿರುವ ಸಮಯದಲ್ಲಿ ಇಡೀ ದೇಹದ ಅಸ್ಥಿ ಪಂಜರ (Skeletons) ಪತ್ತೆಯಾಗಿದೆ ಎನ್ನಲಾಗುತ್ತಿದೆ.

4 ಬಾಕ್ಸ್ಗಳಲ್ಲಿ ಮೂಳೆಯ ಅವಶೇಷ
ಸದ್ಯದ ಮಾಹಿತಿಗಳ ಪ್ರಕಾರ, ಇಂದಿನ ಶೋಧಕಾರ್ಯದಲ್ಲಿ ಇಡೀ ದೇಹದ ಅಸ್ಥಿಪಂಜರದ ಅವಶೇಷಗಳು ಲಭಿಸಿದು, ಅವುಗಳನ್ನ ಹೊರಗೆ ತೆಗಿಯಲಾಗಿದೆ ಎನ್ನಲಾಗಿದೆ. ಈ ಅಸ್ಥಿ ಪಂಜರಗಳನ್ನ ಕಾರ್ಮಿಕರು ಸುಮಾರು 4 ಬಾಕ್ಸ್ಗಳಲ್ಲಿ ಹೊರಗೆ ತಂದಿದ್ದು, ಈ ಬಗ್ಗೆ ತನಿಖೆ ಆಗಬೇಕಿದೆ. ಬಂಗ್ಲ ಗುಡ್ಡದಲ್ಲಿ ಉತ್ಖನನವನ್ನ ಇಂದು ಮಾಡಲಾಗಿದೆ. ಅದರಲ್ಲಿ ಭೂಮಿಯ ಮೇಲ್ಮೈನಲ್ಲೇ ಅಸ್ಥಿಪಂಜರ ಪತ್ತೆಯಾಗಿದೆ. ಇದರ ಜೊತೆಗೆ ಗಂಡಸಿನ ಉಡುಪು, ಹಗ್ಗ ಕೂಡ ಲಭಿಸಿದ್ದು, ಹೆಚ್ಚಂದರೆ ಈ ಕಳೇಬರ ಒಂದೂವರೆ ವರ್ಷ ಹಿಂದಿನದ್ದು ಎಂದು ಅಂದಾಜು ಮಾಡಲಾಗುತ್ತಿದೆ. ಅದಲ್ಲದೇ, ಹಗ್ಗ ಸಹ ಇರುವುದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಸಹ ಇದೆ ಎಂದು ಊಹಿಸಲಾಗುತ್ತಿದೆ.
ಅನುಮಾನ ಹುಟ್ಟಿಸಿದ ಅನಾಮಿಕ ವ್ಯಕ್ತಿ
ಇನ್ನು ಈ ಕಳೆಬರಹ ಪತ್ತೆಯಾದ ಜಾಗವನ್ನ ಮೊದಲು ಅನಾಮಿಕ ವ್ಯಕ್ತಿ ತೋರಿಸಿರಲಿಲ್ಲ. ಆದರೆ ಆತ ತೋರಿಸಿದ್ದ ಜಾಗ ಬಿಟ್ಟು ಇಂದು ಮತ್ತೊಂದು ಜಾಗ ತೋರಿಸಿದ್ದು, ಅಲ್ಲಿ ಈ ದೇಹದ ಅಸ್ಥಿ ಪಂಜರ ಪತ್ತೆಯಾಗಿದೆ. ಆತನೇ ತನ್ನ ದೂರಿನಲ್ಲಿ ಹೇಳಿರುವ ಪ್ರಕಾರ, ಕಳೆದ ಕೆಲ ವರ್ಷಗಳಿಂದ ಅನಾಮಿಕ ವ್ಯಕ್ತಿ ಧರ್ಮಸ್ಥಳದಲ್ಲಿ ವಾಸವಿಲ್ಲ. ಆದರೂ ಸಹ ಕಳೆದ ಒಂದೂವರೆ ವರ್ಷದ ಕಳೇಬರ ಇರುವುದು ಹೇಗೆ ಗೊತ್ತಾಗಿದೆ. ಅದರಲ್ಲೂ ಮೊದಲು ಈ ಜಾಗ ತೋರಿಸದೇ ಏಕಾಏಕಿ ಇದನ್ನ ತೋರಿಸಿದ್ದು ಏಕೆ ಎನ್ನುವ ಪ್ರಶ್ನೆಗಳು ಇದೀಗ ಹುಟ್ಟಿಕೊಂಡಿದೆ.
ಅಲ್ಲದೆ, ಉಳಿದಿರುವ ಮೂರು ಪಾಯಿಂಟ್ ಗಳು ದೊಡ್ಡ ದೊಡ್ಡ ಮರದ ಪಕ್ಕದಲ್ಲಿದೆ ಎಂದು ತೋರಿಸಿದ್ದು, ಕಾರ್ಯಾಚರಣೆಗೆ ಅಡ್ಡಿ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ 11, 12, ಹಾಗೂ 13 ನೇ ಸ್ಥಳಕ್ಕೆ ಯಾರು ತೆರಳದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸದ್ಯ ಸ್ಥಳದಲ್ಲಿ ಪೊಲೀಸರು ಹಾಗೂ ನಕ್ಸಲ್ ನಿಗ್ರಹ ಪಡೆ ಕಾವಲು ಕಾಯುತ್ತಿದೆ. ಸದ್ಯ ಇಂದಿನ 13 ಪಾಯಿಂಟ್ ಕಾರ್ಯಾಚರಣೆಯ ಬಳಿಕ ನಾಳೆಯಿಂದ ಹೊಸ ಪ್ರದೇಶದ ಮಹಜರು ಕಾರ್ಯ ನಡೆಯಲಿದೆ. ಒಂದು ವೇಳೆ ಅಲ್ಲಿ ಕೂಡ ಯಾವುದೇ ಅವಶೇಷಗಳು ಸಿಗದಿದ್ದರೆ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ.
ಪ್ರಕರಣಕ್ಕೆ ಟ್ವಿಸ್ಟ್
ನೂರಾರು ಶವಗಳ ಹೂತ ಪ್ರಕರಣಕ್ಕೆ ಶನಿವಾರ ಟ್ವಿಸ್ಟ್ ಸಿಕ್ಕಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಇಚಿಲಂಪಾಡಿ ನಿವಾಸಿ ಜಯನ್ ಎಂಬವರು ಶನಿವಾರ ಸಂಜೆ ಬೆಳ್ತಂಗಡಿಯ ಎಸ್ಐಟಿ ಅಧಿಕಾರಿಗಳ ಕಚೇರಿಗೆ ಆಗಮಿಸಿ, ಧರ್ಮಸ್ಥಳದಲ್ಲಿ 15 ವರ್ಷದ ಬಾಲಕಿಯನ್ನು ಹೂತುಹಾಕಿರುವ ಸ್ಥಳ ನನಗೆ ಗೊತ್ತಿದೆ. ನಾನೇ ಅದಕ್ಕೆ ಪ್ರತ್ಯಕ್ಷದರ್ಶಿ ಎಂದು ಹೇಳಿಕೆ ಕೊಟ್ಟಿದ್ದರು. ಅದರಂತೆ ಅವರನ್ನು ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ತಿಳಿಸಿದ್ದರು.
ಎಸ್ಐಟಿ ಕಚೇರಿಗೆ ಆಗಮಿಸಿ ಹದಿನೈದು ವರ್ಷದ ಹಿಂದೆ ಅನುಮಾನಾಸ್ಪದವಾಗಿ ಸಾವಪ್ಪಿದ ಬಾಲಕಿಯನ್ನು ಹೂತು ಹಾಕುವುದನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ಇದಕ್ಕೆ ನಾನೇ ಸಾಕ್ಷಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಶವ ಎಲ್ಲಿ ಹೂತು ಹಾಕಿದ್ದಾನೆ ಎಂದು ನನಗೆ ಗೊತ್ತಿದೆ. ಯಾವುದೇ ಪ್ರಕರಣ ದಾಖಲು ಮಾಡದೇ ಹೂತು ಹಾಕಲಾಗಿದೆ. ನಾನು ಆ ಜಾಗವನ್ನು ತೋರಿಸುತ್ತೇನೆ ಎಂದು ಹೇಳಿದ್ದರು.