100 ವರ್ಷದ ವೃದ್ಧ ತಾಯಿಯನ್ನು ಮನೆಯಿಂದ ಹೊರಹಾಕಿದ 4 ಗಂಡು ಮಕ್ಕಳು: ಕೊರಟಗೆರೆಯಲ್ಲಿ ಮನಕಲಕುವ ಘಟನೆ!

ಕೊರಟಗೆರೆ: ಮಾತೃದೇವೋಭವ- ಪಿತೃದೇವೋಭವ ಎಂಬ ನಾಣ್ಣುಡಿಗೆ ವಿರುದ್ಧ ಎಂಬಂತೆ ಶತಾಯುಷಿ (100 ವರ್ಷ) ವೃದ್ದೆಯನ್ನು ಆಕೆಯ 4 ಗಂಡು ಮಕ್ಕಳು ಹೊರಹಾಕಿದ್ದು, ಅಜ್ಜಿ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ದಾಸೋಹದಲ್ಲಿ ಊಟ, ದೇವಸ್ಥಾನದ ಮೂಲೆಯಲ್ಲಿ ವಾಸ ಎಂಬ ಪರಿಸ್ಥಿತಿ ನಿರ್ಮಾಣವಾಗಿ ನಾಗರೀಕ ಸಮಾಜ ತಲೆತಗ್ಗಿಸುವ ವಾತಾವರಣ ಸೃಷ್ಟಿಯಾಗಿದೆ

ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಸಮೀಪದ ನರಸಯ್ಯನಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಿ. ಮುದ್ದಯ್ಯನ ಮಡದಿ ರಾಮಕ್ಕ ಎಂಬ ಶತಾಯುಷಿ ತಾಯಿಯನ್ನು 4 ಜನ ಗಂಡು ಮಕ್ಕಳು ಮನೆಯಿಂದ ಹೊರ ಹಾಕಲಾಗಿದ್ದು, ತಾಯಿ ಮಕ್ಕಳ ವಿರುದ್ಧ ಪೋಲಿಸ್ ಮೆಟ್ಟಿಲೇರಿದ್ದಾರೆ.
ವೃದ್ಧೆ ತಾಯಿ ರಾಮಕ್ಕನಿಗೆ 4 ಗಂಡು ಮಕ್ಕಳಿದ್ದು, ಕೊನೆಯ ಮಗ ನಾಗರಾಜು ಎಂಬವರ ಮನೆಯಲ್ಲಿ ಕಳೆದ 30 ವರ್ಷಗಳಿಂದ ವಾಸವಿದ್ದು, ಈಗ ಆ ಮಗನ ಮನೆಯಿಂದಲೂ ಬೇಸರಗೊಂಡು ಮನೆಯಿಂದ ಹೊರಬಂದು ಗೊರವನಹಳ್ಳಿ ಮಹಾಲಕ್ಷ್ಮಿ ದೇವಸ್ಥಾನದ ಹೊರಭಾಗದ ಮೂಲೆಯಲ್ಲಿ ವಾಸ ಮಾಡುವಂತ ದುಸ್ಥಿತಿ ಇದ್ದು, ಸ್ಥಳೀಯ ಸಾರ್ವಜನಿಕರು 4 ಗಂಡು ಮಕ್ಕಳಿದ್ದರೂ ತಾಯಿಗೆ ಈ ಸ್ಥಿತಿ ಬರಬಾರದು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಾಮಕ್ಕನಿಗೆ ಹನುಮಂತರಾಯಪ್ಪ, ರಮೇಶ್, ರಾಮಚಂದ್ರ ಹಾಗೂ ನಾಗರಾಜು ಎಂಬ ನಾಲ್ಕು ಜನ ಗಂಡು ಮಕ್ಕಳಿದ್ದು, ಕೊನೆಯ ಮಗ ನಾಗರಾಜು ಅವರ ಮನೆಯಲ್ಲಿ ಹೆಚ್ಚು ಕಾಲ ಕಳೆದರೂ ಸ್ವಾಭಿಮಾನಿ ತಾಯಿಗೆ ಅಲ್ಲಿದ್ದು ಬೇಸರವಾಗಿ ಬೇರೆ ಇತರೆ 3 ಜನ ಗಂಡು ಮಕ್ಕಳ ಬಳಿಯೂ ಹೋಗಲಾಗದೆ ಊಟಕ್ಕಾಗಿ ಸಂಬಂಧಿಕರ ಮನೆಗೆ ಹೋಗಲು ಮನಸ್ಸು ಇಚ್ಚಿಸದೆ ನೇರವಾಗಿ ಕಳೆದ 10 ದಿನಗಳಿಂದ ದೇವಸ್ಥಾನದ ದಾಸೋಹದಲ್ಲಿ ಊಟಕ್ಕೆ ಮೂರೆ ಹೋಗಿ ದೇವಸ್ಥಾನದ ಮೂಲೆಯೊಂದರಲ್ಲಿ ಚಳಿ-ಗಾಳಿ ಎನ್ನದೇ ಜೀವನ ಸಾಗಿಸುತ್ತಿರುವುದು ನಾಗರೀಕ ಸಮಾಜವನ್ನು ಅಣಗಿಸುವಂತಿದೆ ಎಂದು ಕೆಲ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಅವಿಭಕ್ತ ಕುಟುಂಬಗಳಿಂದಾಗಿ ಮನೆಯ ಹಿರಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಬಹುತೇಕ ಮನೆಗಳಲ್ಲಿ ಮಕ್ಕಳು ಬಲವಂತವಾಗಿ ಆಸ್ತಿ ಕಸಿದುಕೊಂಡು ತಂದೆ-ತಾಯಿಯನ್ನು ಮನೆಯಿಂದ ಹೊರಹಾಕುವ ನಿದರ್ಶನಗಳು ಹೆಚ್ಚಾಗುತ್ತಿದ್ದು, ತಮ್ಮ ಮಕ್ಕಳನ್ನು ಬಾಲ್ಯದಲ್ಲಿ ಸಾಕಿ ಸಲಹಿದ ಹಿರಿ ವಯಸ್ಸಿನ ತಂದೆ-ತಾಯಿಗಳಿಗೆ ಇತ್ತೀಚಿಗಿನ ದಿನಗಳ ಮಕ್ಕಳು ಪಾಲನೆ-ಪೋಷಣೆ ಮಾಡದಿರುವುದು ದುರಾದೃಷ್ಟಕರ ಸಂಗತಿಯಾಗಿದೆ.
ಮಡದಿ, ಮಕ್ಕಳನ್ನು ಪೋಷಿಸಲು ಶಕ್ತಿ ಇರುವ ಮಗನಿಗೆ ತಂದೆ ತಾಯಿಯನ್ನು ಸಲಹುವ ಶಕ್ತಿ ಇರುವುದಿಲ್ಲವೇ. ಮಕ್ಕಳಲ್ಲಿ ಇಚ್ಛಾಶಕ್ತಿ ಕೊರತೆ ಸಮಾಜವನ್ನು ಅಧೋಗತಿಗೆ ಕೊಂಡೊಯ್ಯುತ್ತಿದೆ ಎಂದು ಕೆಲ ನಾಗರಿಕರು ಮಕ್ಕಳ ವಿರುದ್ಧವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಂತಿಮವಾಗಿ ವೃದ್ಧೆ ರಾಮಕ್ಕ ತನ್ನಲ್ಲಿದ್ದ 4 ಎಕರೆ ಜಮೀನನ್ನು ಮಕ್ಕಳು ಕಸಿದುಕೊಂಡಿದ್ದು, ತನಗೆ ಅನ್ನ-ನೀರು ಕೊಡದೆ ಹೊರಹಾಕಿರುವುದರ ವಿರುದ್ಧ ಕೊರಟಗೆರೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಮಕ್ಕಳಿಗೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಠಾಣೆಯ ದಾಟಿಯಲ್ಲಿ ಉತ್ತರ ನೀಡಿ ತಾಯಿಗೆ ನ್ಯಾಯ ದೊರಕಿಸಿಕೊಡಬೇಕು. ತಾಯಿಗೆ 100 ವರ್ಷ ದಾಟಿರುವುದರಿಂದ ಪ್ರೀತಿಯಿಂದ ಸಾಕುವ ಮಗನಿಗೆ ಹೆಚ್ಚು ಪಾಲ್ದಾರಿಕೆ ನೀಡಿ ಅಜ್ಜಿಗೆ ನೆಲೆ ಕಲ್ಪಿಸಿ ಕೊಡಬೇಕು ಎಂದು ಕೆಲ ನಾಗರಿಕರು ಮನವಿ ಮಾಡಿಕೊಂಡಿದ್ದಾರೆ.
