ಆತ್ಮಹತ್ಯೆಗೆ ಯತ್ನಿಸಿ ತುಂಗಭದ್ರಾ ನದಿಗೆ ಹಾರಿದ ಮಹಿಳೆ: ಇಡೀ ರಾತ್ರಿ ಗಿಡ ಹಿಡಿದು ಬಚಾವ್!

ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ತುಂಗಭದ್ರಾ ನದಿಗೆ ಹಾರಿದ ಮಹಿಳೆಯೊಬ್ಬಳು ಇಡೀ ರಾತ್ರಿ ನದಿಯಲ್ಲಿನ ಗಿಡ ಹಿಡಿದು ಜೀವ ಉಳಿಸಿಕೊಂಡ ಘಟನೆ ತಾಲೂಕಿನ ಕೋಟಿಹಾಳ-ನಿಟಪಳ್ಳಿ ಗ್ರಾಮದ ಬಳಿ ನಡೆದಿದೆ.

ರಟ್ಟಿಹಳ್ಳಿಯ ರೂಪಾ ಎಂಬ ಮಹಿಳೆ ಉಕ್ಕಡಗಾತ್ರಿ ಬಳಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಬುಧವಾರ ಸಂಜೆ ನದಿಗೆ ಹಾರಿದ್ದಾಳೆ.
ಆದರೆ, ಆಕೆಗೆ ಈಜು ಬರುತ್ತಿದ್ದ ಕಾರಣ ಸುಮಾರು ಕಿ.ಮೀ.ನಷ್ಟು ದೂರ ಈಜುತ್ತ ಬಂದು ಕೋಟಿಹಾಳ-ನಿಟಪಳ್ಳಿ ಗ್ರಾಮದ ಬಳಿ ನದಿ ಮಧ್ಯೆ ದೊರೆತ ಗಿಡ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದಾಳೆ.
ರಾತ್ರಿ ಇಡೀ ಅಲ್ಲಿಯ ಇದ್ದು ನಸುಕಿನ ಜಾವ ಕೂಗಾಟ ಶುರು ಮಾಡಿದ್ದಾಳೆ. ಮಹಿಳೆಯ ಧ್ವನಿ ಕೇಳಿದ ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ ತೆರಳಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಸದ್ಯ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮಹಿಳೆ ಏತಕ್ಕಾಗಿ ಆತ್ಮಹತ್ಯೆಗೆ ಮುಂದಾಗಿದ್ದಳು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದು ಬರಬೇಕಿದೆ.