ವಿಮಾನ ನಿಲ್ದಾಣದಲ್ಲಿ ತನ್ನ ಕಳ್ಳತನ ಮುಚ್ಚಿ ಹಾಕಲು ಅನ್ಯರ ಬ್ಯಾಗ್ ಗೆ ಚಿನ್ನ ಹಾಕಿದ ಸ್ಮಗ್ಲರ್

ಬೆಂಗಳೂರು: ಬೆಂಗಳೂರು ಗ್ರಾಮಾಂತರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bengaluru Airport) ಹೊರಗೆ ಬರುತ್ತಿದ್ದ ಪ್ರಯಾಣಿಕನ ಟ್ರಾಲಿಯಲ್ಲಿ ಕೆಜಿ ಕೆಜಿ ಚಿನ್ನ (Gold) ಪತ್ತೆಯಾಗಿರುವ ಘಟನೆ ನಡೆದಿದೆ. ವ್ಯಕ್ತಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದಾಗ ಮತ್ತೊಬ್ಬರ ಬ್ಯಾಗ್ನಲ್ಲಿ ಚಿನ್ನ ಬಿಟ್ಟು ಹೋಗಿರುವುದಾಗಿ ವರದಿಯಾಗಿದೆ.
ವರದಿಗಳ ಪ್ರಕಾರ ದುಬೈ ನಿಂದ ಬಂದಿದ್ದ ವ್ಯಕ್ತಿ ಸಹ ಪ್ರಯಾಣಿಕರ ಲಗೇಜ್ ಟ್ರಾಲಿ ಒಂದಕ್ಕೆ ಚಿನ್ನದ ಬ್ಯಾಗ್ ಹಾಕಿ ಎಸ್ಕೇಪ್ ಆಗಿದ್ದಾನೆ. ಗೋಲ್ಡ್ ಸ್ಮಗ್ಲರ್ ಬರೋಬ್ಬರಿ 3.5 ಕೆಜಿ ಚಿನ್ನ ಬಿಸ್ಕೆಟ್ಗಳಿದ್ದ ಬ್ಯಾಗ್ ಬಿಟ್ಟು ಓಡಿ ಹೋಗಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಸಿಕ್ಕಿಬೀಳುವ ಭಯದಿಂದ ಆತ ಬೇರೆಯವರ ಟ್ರಾಲಿಗೆ ಚಿನ್ನ ಹಾಕಿದ ಓಡಿ ಹೋಗಿದ್ದಾನೆ.
ವ್ಯಕ್ತಿ ಟ್ರಾಲಿ ತಳ್ಳಿಕೊಂಡು ಚೆಕಿಂಗ್ ಕಡೆ ಬರುತ್ತಿದ್ದಾಗ ಟ್ರಾಲಿ ಬ್ಯಾಗ್ ನಿಂದ ಚಿನ್ನ ಹೊರಗಡೆ ಬಿದ್ದಿದೆ. ಇದನ್ನು ಕಂಡು ತಬ್ಬಿಬ್ಬಾದ ಪ್ರಯಾಣಿಕ ಕೂಡಲೆ ಚಿನ್ನದ ಬ್ಯಾಗ್ ಸಮೇತ ಏರ್ಪೋಟ್ ಭದ್ರತಾ ಪಡೆಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಕೋಟಿ ಕೋಟಿ ಬೆಲೆ ಬಾಳುವ 3.5 ಕೆಜಿ ಚಿನ್ನ ಪತ್ತೆಯಾಗಿದೆ.

ಇದೀಗ ಪ್ರಯಾಣಿಕನಿಂದ ಮಾಹಿತಿ ಪಡೆದ ಅಧಿಕಾರಿಗಳು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದ್ದು, ಯಾರು ಚಿನ್ನದ ಬ್ಯಾಗ್ ಇಟ್ಟಿದ್ದು, ಯಾವ ಪ್ರಯಾಣಿಕ ಈ ಕೃತ್ಯ ನಡೆಸಿದ್ದು ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಮೆಲ್ನೋಟಕ್ಕೆ ದುಬೈ ನಿಂದ ಬಂದಿದ್ದ ವ್ಯಕ್ತಿಯೇ ಚಿನ್ನ ಬಿಟ್ಟು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳು 3.5 ಕೆಜಿ ಚಿನ್ನವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ದುಬೈನಿಂದ ಚಿನ್ನ ಕಳ್ಳಸಾಗಣೆಯ ಪ್ರಕರಣದಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರನ್ಯಾ ರಾವ್ಗೆ ಸೇರಿದ ₹34.12 ಕೋಟಿ ಮೌಲ್ಯದ ಆಸ್ತಿಯನ್ನು ಇ.ಡಿ ಜಪ್ತಿ ಮಾಡಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಅರೆಸ್ಟ್ ಆಗಿರೋ ರನ್ಯಾಗೆ ಸೇರಿದ ಬೆಂಗಳೂರಿನ ವಿಕ್ಟೋರಿಯಾ ಲೇಔಟ್ನಲ್ಲಿ ಮನೆ, ಅರ್ಕಾವತಿ ಬಡಾವಣೆಯಲ್ಲಿ ನಿವೇಶನ, ತುಮಕೂರಿನಲ್ಲಿ ಕೈಗಾರಿಕಾ ನಿವೇಶನ, ಆನೇಕಲ್ ತಾಲ್ಲೂಕಿನಲ್ಲಿ ಕೃಷಿ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ದಾಖಲಾಗಿರುವ ದೂರಿನಡಿ ಸಿಬಿಐ ಮತ್ತು ಡಿಆರ್ಐ ಒಪ್ಪಿಗೆ ಮೇರೆಗೆ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿಕೊಂಡಿದೆ.
ರನ್ಯಾ ರಾವ್ರನ್ನು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾರ್ಚ್ 3ರಂದು ದುಬೈನಿಂದ ಹಿಂದಿರುಗುವಾಗ ಬಂಧಿಸಲಾಗಿತ್ತು. ಕಸ್ಟಮ್ಸ್ ಅಧಿಕಾರಿಗಳು ರನ್ಯಾರನ್ನು ತಪಾಸಣೆ ನಡೆಸಿದಾಗ ₹12.56 ಕೋಟಿ ಮೌಲ್ಯದ 14.2 ಕೆ.ಜಿ ಚಿನ್ನವನ್ನು ಅವರಿಂದ ವಶಕ್ಕೆ ಪಡೆಯಲಾಗಿತ್ತು.
ಚಿನ್ನ ಸಾಗಣೆ ಹಾಗೂ ಮಾರಾಟಕ್ಕೆ ನೆರವು ನೀಡಿದ್ದ ಆರೋಪದ ಮೇರೆಗೆ ರಾಜು ಹಾಗೂ ಸಾಹಿಲ್ ಜೈನ್ ಅವರನ್ನು ಬಂಧಿಸಲಾಗಿತ್ತು. ಸದ್ಯ ಮೂವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
