‘ದುನಿಯಾ ಚಾಹಿಯೇ’ ಎನ್ನುವ ಡೈಲಾಗ್ ಹುಚ್ಚು: ಕೆಜಿಎಫ್ ಪ್ರೇರಣೆ, ಹಣ ಸಂಪಾದಿಸಲು ಮನೆಬಿಟ್ಟ ಬಾಲಕ ಒಟಿಪಿಗಾಗಿ ಮತ್ತೆ ಕುಟುಂಬ ಸೇರಿಕೊಂಡ

ಕಲಬುರಗಿ: ಕೆಜಿಎಫ್ ಸಿನೆಮಾದಲ್ಲಿ “ಕ್ಯಾ ಚಾಹಿಯೇ’ಎಂದಾಗ “ದುನಿಯಾ ಚಾಹಿಯೇ’ ಎನ್ನುವ ಡೈಲಾಗ್ಗೆ ಆಕರ್ಷಿತನಾಗಿದ್ದ ಬಾಲಕನೊಬ್ಬ ಮನೆ ಬಿಟ್ಟು ಹೋಗಿದ್ದ. ಕೊನೆಗೆ ತನ್ನ ವ್ಯವಹಾರಕ್ಕೆ ಆಧಾರ್ ಕಾರ್ಡ್ ಅಗತ್ಯವಾಗಿದ್ದರಿಂದ ಅದನ್ನು ಪಡೆಯಲು ಹೋದಾಗ ಒಟಿಪಿ ಪಡೆಯಲು ಪುನಃ ಮನೆಗೆ ತಂದು ನಿಲ್ಲಿಸಿದೆ

ಇದು ಸಿನೆಮಾ ಕಥೆಯಲ್ಲ. ಕಲಬುರಗಿಯಲ್ಲಿ ನಡೆದಿರುವ ನೈಜ ಘಟನೆ. ಹಣ ಮಾಡಬೇಕು, ಶ್ರೀಮಂತನಾಗಬೇಕು. ಕೆಜಿಎಫ್ ಸಿನೆಮಾದಲ್ಲಿ ಯಶ್ನಂತೆ ತಾನೂ ಸೂಪರ್ ಹೀರೋ ಆಗಬೇಕೆಂದುಕೊಂಡು 16 ತಿಂಗಳ ಹಿಂದೆ ಕಲಬುರಗಿಯಿಂದ ಮನೆ ಬಿಟ್ಟು ಹೋಗಿದ್ದ ವಿನಾಯಕ (17) ಪುನಃ ಕುಟುಂಬ ಸೇರಿಕೊಂಡಿದ್ದಾನೆ.
ಕಲಬುರಗಿಯ ಕಾವೇರಿ ನಗರದ ಮಸಾಲೆ ವ್ಯಾಪಾರಿ ಫಿನಿಕ್ಸ್ ಪತ್ನಿ ತೀರಿ ಹೋಗಿದ್ದು, ಒಬ್ಬನೇ ಮಗನನ್ನು ಪ್ರೀತಿಯಿಂದ ಬೆಳೆಸಿದ್ದರು. 2023ರ ಡಿಸೆಂಬರ್ನಲ್ಲಿ ಮನೆಯಿಂದ ಆಟವಾಡಲು ಹೋದವ ನಾಪತ್ತೆಯಾಗಿದ್ದ.
ಹಣ ಮಾಡಲು ಮುಂಬಯಿಗೆ ಹೋಗಿದ್ದ
ಬಾಲಕ ವಿನಾಯಕ ಬಡತನದಿಂದ ಹೊರ ಬರಲು ಕೆಜಿಎಫ್ ಹೀರೋ ಯಶ್ನಂತೆ ಹಣ ಮಾಡಬೇಕೆಂದು ಮನೆ ಬಿಟ್ಟು, ಮುಂಬಯಿಗೆ ಹೋಗಿ ಕನ್ನಡಿಗರೊಬ್ಬರನ್ನು ಪರಿಚಯಿಸಿಕೊಂಡು ಹೊಟೇಲ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.
ಆಧಾರ್ಗೆ ಒಟಿಪಿ ಕೇಳಿ ಸಿಕ್ಕಿ ಬಿದ್ದ
ಮುಂಬಯಿಯಲ್ಲಿ ಮಾಸಿಕ 12 ಸಾ.ರೂ. ವೇತನಕ್ಕೆ ಕೆಲಸ ಮಾಡುತ್ತಿದ್ದ. ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡ್ ಬೇಕಾಗಿತ್ತು. ಅದನ್ನು ಪಡೆಯಲು ತಾನು ಕಲಿತಿದ್ದ ಬೆಂಗಳೂರಿನ ಶಾಲೆಗೆ ಬಂದು ಆಧಾರ್ ಝೆರಾಕ್ಸ್ ಪಡೆದಿದ್ದ. ಅದರಲ್ಲಿದ್ದ ತಂದೆಯ ಫೋನ್ ನಂಬರ್ ಬದಲಾಯಿಸಲು ಅರ್ಜಿ ಸಲ್ಲಿಸುವ ವೇಳೆ ಹಳೆ ನಂಬರ್ಗೆ (ತಂದೆಯದ್ದು) ಒಟಿಪಿ ಹೋಗಿತ್ತು. ತಂದೆಗೆ ಕರೆ ಮಾಡಿ “ಪಪ್ಪಾ ನಾನು ವಿನಾಯಕ, ಒಟಿಪಿ ಹೇಳು’ ಎಂದಾಗ ತಂದೆ ನಿಟ್ಟುಸಿರು ಬಿಟ್ಟಿದ್ದು, ಬಳಿಕ ಬೆಂಗಳೂರಿನಲ್ಲಿದ್ದ ಕೆಲವರ ಸಹಾಯದಿಂದ ಮಗನನ್ನು ಮನೆಗೆ ಕರೆಸಿಕೊಂಡಿದ್ದಾನೆ.