ಚನ್ನಪಟ್ಟಣ ಕರಕುಶಲದಿಂದ ಜಾಗತಿಕ ಪೇಟೆಂಟ್ ಪಡೆದ ‘ಒಲವು’ ಗಡಿಯಾರ

ಬೆಂಗಳೂರು: ಚನ್ನಪಟ್ಟಣ (Channapattana) ಕರಕುಶಲತೆಯಿಂದ ಪ್ರಭಾವಿತರಾದ ಪಶ್ಚಿಮ ಬಂಗಾಳದ (West Bengal) ಯುವಕ ಪೃಥ್ವಿರಾಜ್ ಚೌಧರಿ ಅವರು ಮರದ ತುಂಡುಗಳು ಮತ್ತು ಆಟೋಮೊಬೈಲ್ ತ್ಯಾಜ್ಯದಲ್ಲಿನ ಮರುಬಳಕೆಯ ಅಲ್ಯೂಮಿನಿಯಂನಿಂದ ಕೈಗಡಿಯಾರವನ್ನು (Watch ) ತಯಾರಿಸಿ, ಜಾಗತಿಕವಾಗಿ ಪೇಟೆಂಟ್ ಪಡೆದಿದ್ದಾರೆ.

ಈ ಕೈಗಡಿಯಾರಕ್ಕೆ ಪೃಥ್ವಿರಾಜ್ ಅವರು ‘ಒಲವು’ ಎಂದು ಹೆಸರಿಟ್ಟಿದ್ದಾರೆ. ಸ್ಮಾರ್ಟ್ವಾಚ್ ಯುಗದಲ್ಲಿ ಪೃಥ್ವಿರಾಜ್ ಚೌಧರಿ ಅವರು ತಯಾರಿಸಿದ ಕೈಗಡಿಯಾರಿಕೆಗೆ ಭಾರಿ ಬೇಡಿಕೆ ಬಂದಿದೆ.
ಪಶ್ಚಿಮ ಬಂಗಾಳ ರಾಜ್ಯದ ಕೋಲ್ಕತ್ತಾದ ಹೊರವಲಯದಲ್ಲಿರುವ ಸಿಂಗೂರ್ ಎಂಬ ಪಟ್ಟಣದ ಪೃಥ್ವಿರಾಜ್ ಚೌಧರಿ (21 ವರ್ಷ) ಬೆಂಗಳೂರಿನ ಎನ್ಐಎಫ್ಟಿ ಕಾಲೇಜಿನಲ್ಲಿ ಫ್ಯಾಷನ್ ಮತ್ತು ಲೈಫ್ಸ್ಟೈಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಪೃಥ್ವಿರಾಜ್ ತಂದೆ ಬಂಗಾಳಿ ಸಾಹಿತ್ಯ ಪ್ರಾಧ್ಯಾಪಕ ಮತ್ತು ಜಾನಪದ ಸಂಶೋಧಕರಾಗಿದ್ದಾರೆ. ಪೃಥ್ವಿರಾಜ್ ತಂದೆಯಿಂದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಕಥೆಗಳನ್ನು ಕೇಳುತ್ತಾ ಬೆಳೆದರು.
ಪೃಥ್ವಿರಾಜ್ ತಮ್ಮ ತರಗತಿಯ ಪ್ರಾಜೆಕ್ಟ್ ವರ್ಕ್ಗಾಗಿ ಕರ್ನಾಟಕದ ಪ್ರಾಚೀನ ಸಂಪ್ರದಾಯವಾದ ಚನ್ನಪಟ್ಟಣ ಕರಕುಶಲ ವಸ್ತುಗಳನ್ನು ಆಯ್ಕೆ ಮಾಡಿಕೊಂಡರು. ಈ ಕರಕುಶಲತೆಯ ಬಗ್ಗೆ ಅಧ್ಯಯನ ಮಾಡಲು ಪೃಥ್ವಿರಾಜ್ ಅವರು ಚನ್ನಪಟ್ಟಣಕ್ಕೆ ತೆರಳಿ, ಅಲ್ಲಿ ಕುಶಲಕರ್ಮಿಗಳಿಂದ ಗೊಂಬೆ, ಆಟಿಕೆ ಸಾಮಾನುಗಳನ್ನು ತಯಾರಿಸುವುದನ್ನು ಕಲಿತರು. ಈ ಸಂದರ್ಭದಲ್ಲಿ ಪೃಥ್ವಿರಾಜ್ ಅವರು ಚನ್ನಪಟ್ಟಣದ ಕರಕುಶಲತೆಯಿಂದ ಸಾಕಷ್ಟು ಪ್ರಭಾವಿತರಾದರು. ಈ ಪ್ರಭಾವದಿಂದಲೇ ಒಲವು ಗಡಿಯಾರ ತಯಾರಿಸಿದ್ದಾರೆ.
‘ಚನ್ನಪಟ್ಟಣದ ಪ್ರಾಚೀನ ಕರಕುಶಲತೆಯಿಂದ ಪ್ರಭಾವಿತರಾಗಿ ಗಡಿಯಾರ ವಿನ್ಯಾಸಗೊಳಿಸಿ, ಜಾಗತಿಕವಾಗಿ ಪೇಟೆಂಟ್ ಪಡೆದ NIFT ಬೆಂಗಳೂರಿನ ಪ್ರತಿಭಾನ್ವಿತ ವಿದ್ಯಾರ್ಥಿ ಪೃಥ್ವಿರಾಜ್ ಚೌಧ ಅವರಿಗೆ ಅಭಿನಂದನೆಗಳು. ಕೋಲ್ಕತ್ತಾದವರಾಗಿದ್ದರೂ, ಕರ್ನಾಟಕದ ಪರಂಪರೆ, ಕಲೆ ಮತ್ತು ಸಂಸ್ಕೃತಿಯ ಬಗ್ಗೆ ನಿಮ್ಮ ಆಳವಾದ ಗೌರವ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ’ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಶ್ಲಾಘಿಸಿದರು.