ಕೃಷಿ ತೋಟಗಳಲ್ಲಿ ಆಫ್ರಿಕನ್ ದೈತ್ಯ ಬಸವನಹುಳುಗಳ ಆತಂಕ: ರೈತರಿಗೆ ನಿಯಂತ್ರಣ ಸವಾಲು!

ಸುಳ್ಯ: ಸುಳ್ಯ ತಾಲೂಕಿನ ಕೃಷಿ ತೋಟದಲ್ಲಿ ಆಫ್ರಿಕನ್ ದೈತ್ಯ ಬಸವನಹುಳುಗಳು ಕಂಡು ಬಂದಿದ್ದು, ಕೃಷಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ನಿಯಂತ್ರಣ ಕೃಷಿಕರಿಗೆ ಸವಾಲಾಗಿದೆ.

ಆಫ್ರಿಕಾದ ದೈತ್ಯ ಬಸವನ ಹುಳು ವಿಶ್ವದ ಅತೀದೊಡ್ಡ ಹಾಗೂ ಅತ್ಯಂತ ಹಾನಿಕಾರಕ ಬಸವನ ಕೀಟಗಳಲ್ಲಿ ಒಂದು.
ಇವು ಗ್ಯಾಸ್ಟ್ರೊಪೊಡಾ ವರ್ಗದ ಮೊಲಸ್ಕಾ ಜಾತಿಗೆ ಸೇರಿದ ದ್ವಿಲಿಂಗ ಜೀವಿಗಳು. ಪೂರ್ವ ಆಫ್ರಿಕಾ ದೇಶ ಇವುಗಳ ತವರೂರು. ಇದು ಶಂಕದ ಆಕಾರದ ಚಿಪ್ಪಿನಲ್ಲಿ ಇರುವಂತಹ ಹಾಗೂ 2ರಿಂದ 12 ವರ್ಷದವರೆಗೂ ಬದುಕುತ್ತದೆ. ತನ್ನ ಜೀವಿತಾವ ಧಿಯಲ್ಲಿ ಸುಮಾರು 1200ರಷ್ಟು ಮೊಟ್ಟೆಗಳನ್ನು ಹಂತ ಹಂತವಾಗಿ ಇಡುತ್ತದೆ. ಇವು 50ಕ್ಕಿಂತ ಹೆಚ್ಚು ಸಸ್ಯ ಪ್ರಭೇದಗಳನ್ನು ತಿನ್ನುತ್ತವೆ.
ಸುಳ್ಯ ತಾಲೂಕಿನ ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲ ಪ್ರದೇಶದ 7-8 ಕೃಷಿಕರ ತೋಟದಲ್ಲಿ ಆಫ್ರಿಕನ್ ಬಸವನಹುಳುಗಳು ಕಂಡುಬಂದಿದೆ.ಹಗಲಿನಲ್ಲಿ ನೆಲದ ಮೇಲಿದ್ದು, ಗಿಡಗಳ ಬುಡದಲ್ಲಿ, ಪೊದೆಗಳಲ್ಲಿ ಅವಿತು, ಸಂಜೆ ಬಳಿಕ ಕೃಷಿ ಗಿಡಗಳನ್ನು ಹತ್ತಿ, ಕೃಷಿಯನ್ನು ನಾಶಪಡಿಸುತ್ತವೆ. ತೆಂಗಿನ ಮರ, ಅಡಿಕೆ ಮರ, ಬಾಳೆ ಗಿಡಗಳಿಗೆ ಈ ಬಸವನಹುಳುಗಳು ಹತ್ತುತ್ತದೆ.
ಹುಳುಗಳ ಹತೋಟಿಗೆ ಕ್ರಮಗಳು
ಆಫ್ರಿಕನ್ ಬಸವನಹುಳುಗಳ ಇವುಗಳು ಹೆಚ್ಚಾಗಿ ಸೆಗಣಿ, ಅನಾನಸ್, ಪಪ್ಪಾಯ, ಕೊಳೆತ ತರಕಾರಿಗಳಿಗೆ ಆಕರ್ಷಿಕವಾಗುತ್ತದೆ. ತೋಟಗಳನ್ನು ಸ್ವತ್ಛವಾಗಿಡುವುದು, ಇಂತಹ ಹುಳುಗಳನ್ನು ಆಕರ್ಷಿತ ಪದಾರ್ಥಗಳಿಗೆ ಆಕರ್ಷಿಸಿ ಸಂಗ್ರಹಿಸಿ ಆಯ್ದು ನಾಶಪಡಿಸಬೇಕು. ಅವುಗಳ ಸಂತಾನ ತಾಣಗಳನ್ನು ನಾಶಪಡಿಸಬೇಕು. ತೀವ್ರತೆ ಹೆಚ್ಚಾಗಿರುವ ತೋಟದ ಮರಗಳ ಸುತ್ತಲೂ ಸೂಪರ್ ಫಾಸ್ಫೋಟ್ ಅಥವಾ ಬೂದಿ ಅಥವಾ ಸುಣ್ಣ ಅಥವಾ ಕಾಸ್ಟಿಕ್ ಸೋಡಾಗಳನ್ನು ಉಪಯೋಗಿಸಿ ಇವುಗಳ ಹಾವಳಿ ತಡೆಗಟ್ಟಬಹುದು. ತೋಟದಲ್ಲಿ ಸೆಗಣಿ ದ್ರಾವಣದಿಂದ ಒದ್ದೆ ಮಾಡಿದ ಹಸಿ ಗೋಣಿ ಚೀಲಗಳನ್ನು ಅಲ್ಲಲ್ಲಿ ಇಟ್ಟು, ಅವುಗಳನ್ನು ಸಂಗ್ರಹಿಸಿ ನಾಶಪಡಿಸಬೇಕು ಎಂದು ತೋಟಗಾರಿಕ ಇಲಾಖೆ ಮಾಹಿತಿ ನೀಡಿದೆ.
ಉಬರಡ್ಕದ ಪಾನತ್ತಿನ ಭಾಗದಲ್ಲಿ ಈ ಹುಳುಗಳು ಕಂಡು ಬಂದ ತೋಟಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ತೋಟಗಾರಿಕೆ ಇಲಾಖೆ, ಕೆವಿಕೆ ಮಂಗಳೂರು ತಂಡದ ವತಿಯಿಂದ ಹತೋಟಿಗೆ ಕ್ರಮಗಳ ಬಗ್ಗೆ ರೈತರಿಗೆ ಸಲಹೆ, ಮಾಹಿತಿಯನ್ನು ನೀಡಿದ್ದೇವೆ. ಇದು 4-5 ವರ್ಷಗಳ ಹಿಂದೆ ಮಡಿಕೇರಿ, ಬೆಳ್ತಂಗಡಿ ಭಾಗದಲ್ಲಿ ಕಂಡುಬಂದಿದೆ. ರೈತರು ಈಗಲೇ ಇದನ್ನು ಹತೋಟಿ ಮಾಡಿದರೆ, ಉಲ್ಬಣಗೊಳ್ಳುವುದನ್ನು ತಡೆಯಬಹುದು. ರೈತರು ಮೊದಲು ಮೆಕ್ಯಾನಿಕಲ್ ಹಂತದಲ್ಲಿ, ಇತರ ಕ್ರಮದ ಮೂಲಕ ಹತೋಟಿಗೆ ತರಬಹುದು.
