ರಾಯಚೂರು: ಕೃಷ್ಣಾ ನದಿಗೆ ಬಿದ್ದ ಪತಿಯ ರಕ್ಷಣೆ – ಪತ್ನಿಯಿಂದಲೇ ತಳ್ಳಲ್ಪಟ್ಟ ಆರೋಪ!

ರಾಯಚೂರು: ತಾಲೂಕಿನ ಗುರ್ಜಾಪುರ ಬಳಿಯ ಸೇತುವೆಯಿಂದ ಕೃಷ್ಣಾ ನದಿಗೆ ಬಿದ್ದ ವ್ಯಕ್ತಿಯನ್ನು ಸಾರ್ವಜನಿಕರು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಪತ್ನಿಯೇ ನನ್ನನ್ನು ನದಿಗೆ ನೂಕಿದ್ದಾಳೆ ಎಂದು ಪತಿ ಆರೋಪಿಸಿದ್ದು, ಘಟನೆ ಬಗ್ಗೆ ಇನ್ನೂ ವಿವರಣೆ ಸಿಕ್ಕಿಲ್ಲ. ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿದ್ದು, ತುಂಬಿ ಹರಿಯುತ್ತಿದೆ.
ಈ ವೇಳೆ ಸೇತುವೆ ಮಾರ್ಗದಿಂದ ತೆರಳಿದ್ದ ನವದಂಪತಿ ಫೋಟೊ ತೆಗೆಸಿಕೊಳ್ಳಲು ನಿಂತಿದ್ದಾರೆ. ಮೊದಲು ಪತ್ನಿಯ ಫೊಟೊ ತೆಗೆದ ಪತಿ ಬಳಿಕ ತನ್ನ ಫೋಟೊ ತೆಗೆಯಲು ಪತ್ನಿಗೆ ಹೇಳಿದ್ದಾನೆ. ಸೇತುವೆ ತುದಿಗೆ ನಿಲ್ಲಿಸಿದ ಪತ್ನಿ ಫೊಟೊ ತೆಗೆಯುವ ನೆಪದಲ್ಲಿ ನದಿಗೆ ನೂಕಿದ್ದಾಳೆ ಎಂದು ಪತಿ ಆರೋಪಿಸಿದ್ದಾನೆ. ನದಿಯಲ್ಲಿ ಈಜಿಕೊಂಡು ಹೋಗಿ ಕಲ್ಲು ಬಂಡೆಯಲ್ಲಿ ಕುಳಿತುಕೊಂಡ ಪತಿ ರಕ್ಷಣೆಗಾಗಿ ಜೋರಾಗಿ ಕೂಗುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಹಗ್ಗದ ನೆರವಿನೊಂದಿಗೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಈ ದಂಪತಿ ಎಲ್ಲಿಯವರು, ಘಟನೆಗೆ ನಿಖರ ಕಾರಣ ಏನೆಂದು ತಿಳಿದು ಬಂದಿಲ್ಲ.
