ಬಸ್ಸಿನಲ್ಲಿ ಸಿಕ್ಕ ಚಿನ್ನದ ಸರ ಹಿಂದಿರುಗಿಸಿದ ನಿರ್ವಾಹಕ: ಶಶಾಂಕ್ ಪ್ರಾಮಾಣಿಕತೆಗೆ ಎಲ್ಲೆಡೆ ಮೆಚ್ಚುಗೆ

ಸುಳ್ಯ: ಸುಳ್ಯದಿಂದ ಕಾಸರಗೋಡಿನ ಅಡೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿನಲ್ಲಿ ಸಿಕ್ಕಿದ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಬಸ್ಸಿನ ನಿರ್ವಾಹಕ ಶಶಾಂಕ್ ಪ್ರಾಮಾಣಿಕತೆ ಮೆರೆದಿದ್ದಾರೆ.

ಮಂಡೆಕೋಲು ಮಾರ್ಗವಾಗಿ ಅಡೂರು ಕಡೆಗೆ ಈ ಬಸ್ಸು ತೆರಳುತ್ತಿತ್ತು. ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ಸುಮಾರು 2 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕೆಳಗೆಬಿದ್ದು, ಬಸ್ ನಿರ್ವಾಹಕನ ಕೈಗೆ ಸಿಕ್ಕಿದೆ. ಆ ಸರವನ್ನು ಬಸ್ ನಿರ್ವಾಹಕರು ತಮ್ಮ ಮಾಲಕ ಮೋಹನ್ ಗುರೂಜಿ ಅವರಿಗೆ ಒಪ್ಪಿಸಿದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ನೀಡಿದಾಗ ಸರದ ವಾರಸುದಾರ ಅಡೂರು ಮೂಲದ ಸಿರಾಜುದ್ದೀನ್ ಎಂಬವರು ಸುಳ್ಯಕ್ಕೆ ಬಂದು ಬಸ್ ಚಾಲಕ ಮತ್ತು ನಿರ್ವಾಹಕರಿಂದ ಗುರುತು ಹೇಳಿ ಸರವನ್ನು ಪಡೆದುಕೊಂಡರು. ನಿರ್ವಾಹಕನ ಪ್ರಾಮಾಣಿಕತೆಗೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
