ನಾಯಿಗಳೊಂದಿಗೆ ಬೆಳೆದು ಅವುಗಳಂತೆ ಬೊಗಳುತ್ತಿರುವ ಬಾಲಕ: ಥೈಲ್ಯಾಂಡ್ನಲ್ಲಿ ಆಘಾತಕಾರಿ ಘಟನೆ!

ಬಾಲ್ಯದಲ್ಲಿ ಮಕ್ಕಳಿಗೆ ಏನು ಕಲಿಸುತ್ತೇವೆ, ಯಾರ ಜತೆ ಬೆಳೆಯಲು ಬಿಡುತ್ತೇವೆ ಅದನ್ನೇ ಮಕ್ಕಳು ಕಲಿಯುತ್ತಾರೆ. ಅದಕ್ಕೆ ಒಳ್ಳೆಯ ಉದಾಹರಣೆ ಈ ಸ್ಟೋರಿ ನೋಡಿ. ಥೈಲ್ಯಾಂಡ್ನಲ್ಲಿ ಇಂತಹದೇ ಒಂದು ಘಟನೆ ನಡೆದಿದೆ. ಆದರೆ ಇದು ತುಂಬಾ ವಿಚಿತ್ರವಾದ ಘಟನೆ. ಥೈಲ್ಯಾಂಡ್ನ (Thailand) ಮಾದಕ ವ್ಯಸನದ ಅಡ್ಡದಿಂದ ಎಂಟು ವರ್ಷದ ಬಾಲಕನ್ನು ರಕ್ಷಣೆ ಮಾಡಲಾಗಿತ್ತು.

ಈ ಪುಟ್ಟ ಹುಡುಗ ಸಾಮಾನ್ಯ ಮಕ್ಕಳಂತೆ ಮಾತನಾಡುತ್ತಿಲ್ಲ, ನಾಯಿಯಂತೆ ಬೊಗಳುತ್ತಾನೆ, ಅವುಗಳಂತೆ ವರ್ತನೆ ಮಾಡುತ್ತಾನೆ. ಇದು ಅಚ್ಚರಿಯಾದರು, ನಿಜ. ನಾಯಿಗಳ ಜತೆಗೆ ಆಟವಾಡಿಕೊಂಡ, ಅವುಗಳ ಜತೆಗೆ ಬೆಳೆದಿದ್ದಾನೆ. ಈಗ ಆತನಿಗೆ ಪದಗಳನ್ನು ಬಳಸಲು ಅಥವಾ ಸಾಮಾನ್ಯ ಮನುಷ್ಯರಂತೆ ಮಾತನಾಡಲು ಆಗುತ್ತಿಲ್ಲ. ಬದಲಿಗೆ ನಾಯಿಗಳಂತೆ ಬೊಗಳುತ್ತಿದ್ದಾನೆ. ಆತನ ಸಂವಹನವು ನಾಯಿಗಳಂತೆ ಆಗಿದೆ. ಈ ಬಾಲಕನನ್ನು ಆತನ ಅಮ್ಮ ಮತ್ತು ಅಣ್ಣ ಮಾದಕ ವ್ಯಸನ ಮಾಡುವ ಅಡ್ಡದಲ್ಲಿ ಬಂದು ಬಿಟ್ಟಿದ್ದರು. ಅಲ್ಲಿಂದ ಆತನನ್ನು ರಕ್ಷಣೆ ಮಾಡಲಾಗಿತ್ತು. ಎರಡು ವರ್ಷಗಳಿಂದ ಶಾಲೆಗೆ ಹೋಗಿರಲಿಲ್ಲ. ಮಾನವ ಸಂಪರ್ಕ ಮತ್ತು ಸ್ನೇಹಿತರ ಕೊರತೆಯಿಂದ ನಾಯಿಗಳ ಜತೆಗೆ ಬೆಳೆದು, ಈಗ ಅದರಂತೆ ಬೊಗಳುತ್ತಿದ್ದಾನೆ. ಇದೀಗ ಈ ಸುದ್ದಿ ಭಾರೀ ವೈರಲ್ ಆಗಿದೆ.
ಜೂನ್ 30ರಂದು ಥೈಲ್ಯಾಂಡ್ನ ಉತ್ತರಾದಿತ್ ಪ್ರಾಂತ್ಯದ ಲ್ಯಾಪ್ಲೇ ಜಿಲ್ಲೆಯಲ್ಲಿ ಮಾದಕ ವ್ಯಸನಗಳ ಅಡ್ಡದಿಂದ ಈ ಬಾಲಕನನ್ನು ರಕ್ಷಣೆ ಮಾಡಲಾಗಿತ್ತು. ಶಾಲೆಯ ಪ್ರಾಂಶುಪಾಲರು ಮತ್ತು ಸ್ಥಳೀಯ ಕಾರ್ಯಕರ್ತರು ನೀಡಿದ ದೂರಿನ ನಂತರ ಪೊಲೀಸರು ಆ ಮಾದಕ ವ್ಯಸನ ಅಡ್ಡದ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿಂದ ಈ ಹುಡುಗನನ್ನು ರಕ್ಷಣೆ ಮಾಡಿದ್ದಾರೆ. ಇದೀಗ ಆ ಹುಡುಗ ನಮ್ಮ ವಶದಲ್ಲಿದ್ದಾನೆ ಎಂದು ಮಕ್ಕಳು ಮತ್ತು ಮಹಿಳೆಯರ ಪವಿನಾ ಹಾಂಗ್ಸಾಕುಲ್ ಪ್ರತಿಷ್ಠಾನದ ಅಧ್ಯಕ್ಷೆ ಪವಿನಾ ಹಾಂಗ್ಸಾಕುಲ್ ಹೇಳಿದ್ದಾರೆ.

ಇನ್ನು ಅಕ್ಕ-ಪಕ್ಕದ ಮನೆಯವರು ಹೇಳುವ ಪ್ರಕಾರ, ಆ ಹುಡುಗನ ತಾಯಿ ಆರು ನಾಯಿಗಳೊಂದಿಗೆ ಅವನನ್ನು ಒಂಟಿಯಾಗಿ ಬಿಟ್ಟು ಬೇರೆ ಕಡೆ ಹೋಗುತ್ತಿದ್ದಳು ಎಂದು ಹೇಳಿದ್ದಾರೆ. ಇನ್ನು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಹುಡುಗನ ಹೆಸರು ಇಲ್ಲಿ ತಿಳಿಸಿಲ್ಲ. ಏಕೆಂದರೆ ಕಾನೂನು ಪ್ರಕಾರ ಆತನ ನಿಜ ಹೆಸರನ್ನು ತಿಳಿಸಬಾರದು. ಅದಕ್ಕಾಗಿ ಆತನಿಗೆ “ಬಾಯ್ ಎ” ಎಂದು ಹೆಸರಿಸಲಾಗಿದೆ. ಆತ ಸುಮಾರು ವರ್ಷಗಳಿಂದ ಒಂದೇ ಅಂತಸ್ತಿನ ಮರದ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡುತ್ತಿದ್ದಾನೆ. ಈ ಹುಡುಗನ ತಾಯಿ ಹಾಗೂ ಸಹೋದರ ಆತನನ್ನು ಮಾದಕ ವಸ್ತುಗಳ ಅಡ್ಡಗೆ ಸೇರಿಸಿದ್ದಾರೆ ಎಂದು ತಿಳಿದು ಬಂದಿದೆ. ಆತನ ತಾಯಿ ಅವನ ಶಿಕ್ಷಣಕ್ಕಾಗಿ ಸರ್ಕಾರದಿಂದ ಹಣ ಕೂಡ ಪಡೆದಿದ್ದಾರೆ. ಆದರೆ ಅದನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿದ್ದಾರೆ.
ಆತನ ಶಿಕ್ಷಣಕ್ಕೆಂದು ಸರ್ಕಾರದಿಂದ ಹಣ ಪಡೆದು ಶಾಲೆಗೆ ಕಳುಹಿಸದೆ, ಮನೆಯಲ್ಲೇ ಇರಿಸಿಕೊಂಡಿದ್ದಾಳೆ. ಇನ್ನು ತಾಯಿಯ ವರ್ತನೆಯನ್ನು ಕಂಡು ಅಕ್ಕಪಕ್ಕದವರು ಕೂಡ ಆತನನ್ನು ತಮ್ಮ ಮಕ್ಕಳ ಜತೆಗೆ ಸೇರಲು ಬಿಡುತ್ತಿರಲಿಲ್ಲ. ಯಾರೊಂದಿಗೂ ಬೆರೆಯುವ ಅವಕಾಶ ಈ ಹುಡಗನಿಗೆ ಸಿಕ್ಕಿಲ್ಲ. ಹಾಗಾಗಿ ಆತನಿಗೆ ಯಾರ ಜತೆಗೂ ಮಾತನಾಡಲು ಆಗುತ್ತಿರಲಿಲ್ಲ. ಆದರೆ ಆತ ಬಿದಿ ನಾಯಿಗಳ ಜತೆಗೆ ಗೆಳೆತನ ಬೆಳಸಿಕೊಂಡ, ಅವುಗಳ ನಡವಳಿಕೆಯನ್ನು ಅನುಕರಿಸಲು ಪ್ರಾರಂಭಿಸಿದ, ಆ ಹುಡುಗನಿಗೆ ಆಟವಾಡಲು ನಾಯಿಗಳನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಎಂದು ಸ್ಥಳೀಯ ಶಿಕ್ಷಕರು ಹೇಳಿದ್ದಾರೆ. ಇದೀಗ ಆತನನ್ನು ಆಶ್ರಮಕ್ಕೆ ಸೇರಿಸಲಾಗಿದೆ. ಹುಡುಗನಿಗೆ ಉತ್ತಮ ಜೀವನ ನಡೆಸುವ ಅವಕಾಶ ನೀಡಲಾಗುವುದು. ಅವನಿಗೆ ಅಗತ್ಯವಿರುವ ಎಲ್ಲವನ್ನೂ ನೀಡಲಾಗುವುದು ಎಂದು ಪವಿನಾ ಹಾಂಗ್ಸಾಕುಲ್ ಹೇಳಿದ್ದಾರೆ.
