ಮಂಗಳೂರು ಪಾಲಿಕೆಗೆ ಹಗರಣದಲ್ಲಿ ನಡೆದಿದ್ಯಾ ಕೋಟ್ಯಂತರ ರೂ.ಗಳ ದೋಖಾ?

ಮಂಗಳೂರು: ನಗರ ಪಾಲಿಕೆಗೆ ಕೋಟ್ಯಂತರ ರೂ. ವಂಚನೆಯಾಗಿದ್ದು, ಬರೋಬ್ಬರಿ 4,500 ಉದ್ದಿಮೆ ಪರವಾನಗಿ ನಕಲಿ ಸರ್ಟಿಫಿಕೇಟ್ಗಳನ್ನು ಸೃಷ್ಟಿಸಲಾಗಿದೆ ಎಂದು ಅನುಮಾನ ಮೂಡಿದೆ.

ಹೌದು, ನಗರದಲ್ಲಿ ಆಸ್ತಿ ತೆರಿಗೆ ನೋಂದಣಿ ಹಾಗೂ ಉದ್ದಿಮೆ ಪರವಾನಗಿಯ ನಕಲಿ ಸರ್ಟಿಫಿಕೇಟ್ಗಳನ್ನು ಸೃಷ್ಟಿ ಮಾಡುವ ಜಾಲ ಹುಟ್ಟಿಕೊಂಡಿದೆ. ಮಧ್ಯವರ್ತಿಗಳು, ಏಜೆಂಟರುಗಳು ಕೋಟಿ ಕೋಟಿ ಹಣ ಪಡೆದು ನಕಲಿ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ಈ ಮೂಲಕ ವಂಚನೆ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ.

ಮಂಗಳೂರಿನ ದೇವಂಗ್ ಪಾಟೀಲ್ ಹಾಗೂ ಬಾಲಕೃಷ್ಣ ಎಂಬುವವರು ಪ್ರಥ್ವಿರಾಜ್ ಶೆಟ್ಟಿ ಎಂಬ ಏಜೆಂಟ್ ಬಳಿ ಸಾವಿರಾರು ರೂ. ಕೊಟ್ಟು ಟ್ರೇಡ್ ಲೈಸೆನ್ಸ್ ಹಾಗೂ ಆಸ್ತಿ ತೆರಿಗೆ ಸರ್ಟಿಫಿಕೇಟ್ ಮಾಡಿಸಿದ್ದಾರೆ. ಕಳೆದ 15 ವರ್ಷಗಳ ತೆರಿಗೆ ದಾಖಲೆಗಾಗಿ ಮಂಗಳೂರು ಪಾಲಿಕೆಗೆ ಬಂದಾಗ ಸರ್ಟಿಫಿಕೇಟ್ ನಕಲಿ ಎನ್ನುವುದು ಬಯಲಾಗಿದೆ. ಪಾಲಿಕೆಯ ಸರ್ಟಿಫಿಕೇಟ್ ಮಾದರಿಯಲ್ಲೇ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ನಕಲಿ ಸರ್ಟಿಫಿಕೇಟ್ ಸೃಷ್ಟಿಸಿರುವುದು ಗೊತ್ತಾಗಿದೆ.
ಸದ್ಯ ವಂಚನೆಗೆ ಒಳಗಾದವರು ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಹಾಗೂ ಬರ್ಕೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಮಂಗಳೂರು ಮಹಾನಗರ ಪಾಲಿಕೆಯಲ್ಲಿ 4,500 ಉದ್ದಿಮೆ ಪರವಾನಗಿ ನವೀಕರಣ ಬಾಕಿಯಿದ್ದು, ನಕಲಿ ಸರ್ಟಿಫಿಕೇಟ್ ಕೈವಾಡ ಇರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಕಮಿಷನರ್ ಎಲ್ಲ ಉದ್ದಿಮೆಗಳ ಪರವಾನಗಿಯನ್ನು ಪರಿಶೀಲಿಸಲು ಮುಂದಾಗಿದ್ದಾರೆ.
