ಕೋರ್ಟ್ ಹೊರಗಡೆ ವಿಚಾರಣೆ ನಡೆಸಿ ಮಹಿಳೆಗೆ ನ್ಯಾಯ ನೀಡಿದ ನ್ಯಾಯಾಧೀಶರು

ರಾಮನಗರ:ವಿಚಾರಣೆಗೆ ಹಾಜರಾಗಲು ಇಲ್ಲಿಯ ನ್ಯಾಯಾಲಯಕ್ಕೆ ಬಂದಿದ್ದ ಯಶೋಧಮ್ಮ ಎಂಬ ಮಹಿಳೆಯ ಕಾಲಿಗೆ ಅಪಘಾತವೊಂದರಲ್ಲಿ ಪೆಟ್ಟು ಬಿದ್ದಿದ್ದರಿಂದ ಕೋರ್ಟ್ ಮೆಟ್ಟಿಲು ಹತ್ತಲಾಗದೆ ಹೊರಗೆ ಕುಳಿತಿದ್ದರು. ಇದನ್ನು ತಿಳಿದ ನ್ಯಾಯಾಧೀಶರು ಮಹಿಳೆ ಇದ್ದ ಸ್ಥಳಕ್ಕೆ ಹೋಗಿ ವಿಚಾರಣೆ ನಡೆಸಿದ್ದಾರೆ.

ರಾಮನಗರದ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ
ಎಚ್. ಅವಿನಾಶ್ ಚಿಂದು ಅವರು ಮಹಿಳೆಯ ಸ್ಥಿತಿ ಅರಿತು, ಮಹಿಳೆ ಕುಳಿತಿದ್ದ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದ ದಾಖಲಾತಿ ಪರಿಶೀಲಿಸಿದರು. ಯಶೋಧಮ್ಮ ಅವರಿಗೆ ಪರಿಹಾರ ಹಣ ಬಿಡುಗಡೆಗೆ ಆದೇಶ ನೀಡಿದರು.

ಏನಿದು ಪ್ರಕರಣ?: ಚಲುವಯ್ಯ ಎಂಬುವರು ಅಪಘಾತದಲ್ಲಿ ಮೃತಪಟ್ಟಿದ್ದರು. ಆರೋಪಿ ಸಂಜಯ್ ಕಲಾರೊ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್, ಚಲುವಯ್ಯ ಅವರ ಹತ್ತು ಮಕ್ಕಳಿಗೆ ತಲಾ ₹1 ಲಕ್ಷದಂತೆ ₹10 ಲಕ್ಷ ಪರಿಹಾರ ನೀಡುವಂತೆ ಆರೋಪಿಗೆ ಆದೇಶಿಸಿತ್ತು.
ಬೆಂಗಳೂರು ದಕ್ಷಿಣ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಪರಿಹಾರದ ಹಣವನ್ನು ರಾಮನಗರದ ನ್ಯಾಯಾಲಯದಲ್ಲಿ ಠೇವಣಿ ಇರಿಸಿತ್ತು.

ಚಲುವಯ್ಯ ಅವರ ಹತ್ತು ಮಕ್ಕಳ ಪರ ವಕಾಲತ್ತು ವಹಿಸಿದ್ದ ವಕೀಲ ಬಿ.ಪಿ. ರವಿ, ವಿಚಾರಣೆ ಸಂದರ್ಭದಲ್ಲಿ ವೋಚರ್, ಬ್ಯಾಂಕ್ ಪಾಸ್ಬುಕ್ ಹಾಗೂ ಆಧಾರ್ ಕಾರ್ಡ್ ಸಲ್ಲಿಸಿದ್ದರು. ಎಲ್ಲಾ ದಾಖಲೆ ಪರಿಶೀಲಿಸಿದ ನ್ಯಾಯಾಧೀಶರು, ಮೃತರ ವಾರಸುದಾರರಿಗೆ ತಲಾ ₹1 ಲಕ್ಷ ಪರಿಹಾರವಾಗಿ ನೀಡಲು ಆದೇಶಿಸಿದರು.
ವಾರಸುದಾರರ ಪೈಕಿ ಚಲುವಯ್ಯ ಅವರ ಪುತ್ರಿ ಯಶೋಧಮ್ಮ ಅವರಿಗೆ ಅಪಘಾತದಲ್ಲಿ ಕಾಲಿಗೆ ಪೆಟ್ಟು ಬಿದ್ದಿತ್ತು. ವಿಚಾರಣೆಗೆ ಬಂದಿದ್ದ ಅವರಿಗೆ ಮೆಟ್ಟಿಲು ಹತ್ತಿ ಕೋರ್ಟ್ ಒಳಗೆ ಹೋಗಲು ಸಾಧ್ಯವಾಗದೆ ಹೊರಗಡೆ ನೋಟರಿ ಬಳಿ ಕುಳಿತಿದ್ದರು.