ಜಮೀನು ಹರಾಜಿನಿಂದ ದಿಕ್ಕುತೋಚದ ವೃದ್ಧ ದಂಪತಿ – ರಾಷ್ಟ್ರಪತಿಗೆ ದಯಾಮರಣ ಕೋರಿ ಮನವಿ!

ಚಿಕ್ಕಮಗಳೂರು: ತಮ್ಮ ಜೀವನಕ್ಕೆ ಆಸರೆಯಾಗಿದ್ದ ಜಮೀನನ್ನೇ ಬ್ಯಾಂಕ್ನವರು ಸರ್ಫೇಸಿ ಕಾಯ್ದೆಯಡಿ ಹರಾಜು ಹಾಕಿಕೊಂಡಿದ್ದು ಇದೀಗ ಜಮೀನು ಕಳೆದುಕೊಂಡಿರುವ ವೃದ್ಧ ದಂಪತಿ ದಿಕ್ಕು ತೋಚದೆ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವ ಘಟನೆಯೊಂದು ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ.

ಏನಿದು ಪ್ರಕರಣ:
ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ನಿವಾಸಿಯಾಗಿರುವ ಡಿ.ಆರ್.ವಿಜಯ ಹಾಗೂ ಪತ್ನಿ ಎಚ್.ಎನ್.ಪಾರ್ವತಿ ಅವರು ತಮ್ಮ ಹೆಸರಿನಲ್ಲಿ ಒಟ್ಟು ಏಳು ಎಕರೆ ಜಮೀನು ಹೊಂದಿದ್ದು ಇದರ ದಾಖಲೆಗಳ ಆಧಾರದ ಮೇಲೆ ಮೂಡಿಗೆರೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಿಂದ ದಂಪತಿಗಳು ಅಂದಾಜು 30 ಲಕ್ಷದಷ್ಟು ಸಾಲ ಪಡೆದಿದ್ದರು ಆದರೆ ಕೊರೋನಾ, ಕಾಡು ಪ್ರಾಣಿಗಳ ಉಪಟಳದಿಂದ ಬೆಳೆಗಳು ನಾಶ ಹೊಂದಿದ್ದು ಸರಿಯಾದ ಸಮಯಕ್ಕೆ ಸಾಲ ತುಂಬಲು ದಂಪತಿಗಳಿಗೆ ಸಾಧ್ಯವಾಗಲಿಲ್ಲ ಇದರ ನಡುವೆ 2024ರಲ್ಲಿ 5.30 ಲಕ್ಷ ಹಣವನ್ನು ದಂಪತಿ ಬ್ಯಾಂಕಿಗೆ ಪಾವತಿ ಮಾಡಿದ್ದರು ಉಳಿದ ಹಣ ಪಾವತಿ ಮಾಡಲು ಸಮಯಾವಕಾಶ ನೀಡುವುದಾಗಿ ಬ್ಯಾಂಕಿನವರು ತಿಳಿಸಿದ್ದರು.

ಇತ್ತ ದಂಪತಿಗಳ ಗಮನಕ್ಕೆ ಬಾರದೇ ಬ್ಯಾಂಕಿನವರು ಸರ್ಫೇಸಿ ಕಾಯ್ದೆಯಡಿ ಜಮೀನನ್ನು ಮಾರಾಟ ಮಾಡಿದ್ದಾರೆ ಈ ವಿಚಾರ ವೃದ್ಧ ದಂಪತಿಗಳ ಗಮನಕ್ಕೆ ಬಂದಿದ್ದು ತಮ್ಮ ಜಮೀನನ್ನು ಕಳೆದುಕೊಂಡ ದಂಪತಿ ಮುಂದಿನ ಜೀವನದ ಹಾದಿ ಕಾಣದೆ ದಯಾರಣಕ್ಕೆ ಅರ್ಜಿ ಸಲ್ಲಿಸಲು ಮುಂದಾಗಿದ್ದು ಅದರಂತೆ ಶುಕ್ರವಾರ ತಹಶೀಲ್ದಾರ್ ರಾಜಶೇಖರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿದ ವಿಜಯ ಅವರು ನಮಗೆ ಮಾಹಿತಿ ನೀಡದೆಯೇ ಬ್ಯಾಂಕಿನವರು ನಮ್ಮ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಇದರಿಂದ ನಮಗೆ ದಿಕ್ಕು ತೋಚದಂತಾಗಿದೆ. ನಮಗೆ ಈ ಜಮೀನು ಬಿಟ್ಟರೆ ಬೇರೆ ಯಾವ ಮಾರ್ಗವಿಲ್ಲ. ನಾವು ಈಗಾಗಲೇ ಹಿರಿಯ ನಾಗರಿಕರಾಗಿದ್ದು, ದುಡಿಮೆಗೆ ಬೇರೆ ದಾರಿ ಇಲ್ಲದಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.