ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ–ವ್ಯವಸ್ಥೆ ಕೊರತೆಯಿಂದ ಭಕ್ತರ ಆಕ್ರೋಶ

ಮೈಸೂರು: ಇಂದು ( ಜೂನ್ 27 ) ಮೊದಲ ಆಷಾಢ ಶುಕ್ರವಾರ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆದಿವೆ. ಅದರಲ್ಲಿಯೂ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಅದ್ದೂರಿಯಾಗಿ ಪೂಜೆ, ಪುನಸ್ಕಾರಗಳು ನೆರವೇರಿವೆ.
ಮೊದಲ ಶುಕ್ರವಾರದಂದು ದೇವರ ವಿಗ್ರಹಕ್ಕೆ ಮಾಡುವ ಅಲಂಕಾರ ಕಣ್ತುಂಬಿಕೊಂಡು ದರ್ಶನ ಮಾಡುವ ಸಲುವಾಗಿ ಭಕ್ತರ ದಂಡೇ ಚಾಮುಂಡಿ ಬೆಟ್ಟಕ್ಕೆ ಹರಿದುಬರಲಿದ್ದು, ಮೈಸೂರು ನಗರ ಪೊಲೀಸರು ಯಾವುದೇ ಅವ್ಯವಸ್ಥೆ ನಡೆಯದ ಹಾಗೆ ಯೋಜನೆ ಮಾಡಿಕೊಳ್ಳಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಆದರೆ ಮೊದಲ ದಿನವೇ ಮೆಟ್ಟಿಲುಗಳ ಮೂಲಕ ಬೆಟ್ಕಕ್ಕೆ ಆಗಮಿಸುವ ಭಕ್ತರ ಪ್ರವೇಶಿಸುವ ಜಾಗದಲ್ಲಿ ನೂಕು ನುಗ್ಗಲು ಉಂಟಾಗಿದ್ದು, ನಿಯಂತ್ರಿಸಲು ಯಾವುದೇ ಪೊಲೀಸರೂ ಇಲ್ಲ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ಆರೋಪ ಮಾಡಿದ್ದಾರೆ. ಬೆಳಗಿನ ಜಾವ 4.15ರ ಸಮಯಕ್ಕೆ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದು, 4.50ಕ್ಕೆ ವಿಡಿಯೊ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೊದಲ್ಲಿ ಭಕ್ತರು ತಡೆಗೋಡೆಗಳ ಮೇಲೇರಿ ದೇವಾಲಯ ಪ್ರವೇಶಕ್ಕೆ ಮುಂದಾಗಿದ್ದು, ಇಂತಹ ಕಿಡಿಗೇಡಿ ಕೃತ್ಯ ಎಸಗುವುದನ್ನು ನಿಲ್ಲಿಸಬೇಕಿದೆ. ಸ್ಥಳದಲ್ಲಿ ಪೊಲೀಸರು ಇದ್ದಿದ್ದರೆ ಪರಿಸ್ಥಿತಿ ಸುಧಾರಿಸುತ್ತದೆ, ಇಲ್ಲದಿದ್ದರೆ ಇಂತಹ ಘಟನೆಗಳು ಇನ್ನೂ ಹೆಚ್ಚಿನ ಅವಘಡಗಳಿಗೆ ಎಡೆ ಮಾಡಿಕೊಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.