ರೂಪೇಶ್ ರಾಜಣ್ಣ – ಸರ್ಫರಾಜ್ ಖಾನ್ ಭೇಟಿ: ವೈಯಕ್ತಿಕ ದ್ವೇಷಕ್ಕೆ ತೆರೆ, ಕನ್ನಡಪರ ಹೋರಾಟಗಾರನಿಗೆ ಕ್ಷಮೆ ಯಾಚಿಸಿದ ಸಚಿವರ ಆಪ್ತ ಕಾರ್ಯದರ್ಶಿ!

ಬೆಂಗಳೂರು: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ( rupesh rajanna ) ವಿರುದ್ಧ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಅವರ ಹೋಂ ಸ್ಟೇ ಕುರಿತಂತೆ ಮಾತನಾಡಿ ಗಂಭೀರ ಆರೋಪವನ್ನು ಹೊರಿಸಿದ್ದರು.
ತಾನು ಹೋಂ ಸ್ಟೇಯನ್ನು ಅಕ್ರಮವಾಗಿ ನಿರ್ಮಿಸಿಲ್ಲ, ಎಲ್ಲ ಪರವಾನಗಿ, ಅನುಮತಿ ಪಡೆದ ನಂತರವೇ ಹೋಂಸ್ಟೇ ನಿರ್ಮಿಸಿದ್ದೇನೆ ಎಂದಿದ್ದರು.
ಆದರೆ ರೂಪೇಶ್ ರಾಜಣ್ಣ ಪಿತೂರಿ ನಡೆಸಿ ಅಕ್ರಮ ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದರು. ಈ ಭರದಲ್ಲಿ ರೂಪೇಶ್ ರಾಜಣ್ಣ ದುಡ್ಡು ತೆಗೆದುಕೊಂಡು ಕನ್ನಡಪರ ಹೋರಾಟ ಮಾಡುತ್ತಾರೆ ಎಂದೂ ಸಹ ಹೇಳಿದ್ದರು.
ಈ ಹೇಳಿಕೆ ರೂಪೇಶ್ ರಾಜಣ್ಣ ಅವರನ್ನು ಕೆರಳಿಸಿದ್ದು, ಆರೋಪ ಕೇಳಿಬಂದ ದಿನವೇ ಇದರಲ್ಲಿ ತನ್ನ ಪಾತ್ರವಿಲ್ಲ, ಇದನ್ನು ಇತ್ಯರ್ಥ ಮಾಡದೇ ಬಿಡುವುದಿಲ್ಲ, ನೇರವಾಗಿ ಭೇಟಿಯಾಗೋಣ ಎಂದು ಸರ್ಫರಾಜ್ ಖಾನ್ಗೆ ಸಂದೇಶ ರವಾನಿಸಿದ್ದರು.

ಅದರಂತೆ ರೂಪೇಶ್ ರಾಜಣ್ಣ ಸರ್ಫರಾಜ್ ಖಾನ್ ಭೇಟಿಯಾಗಿದ್ದು, ಈ ವೇಳೆ ಸರ್ಫರಾಜ್ ಖಾನ್ ಮನಃಪರಿವರ್ತನೆಯಾಗಿದೆ. ಇದರಲ್ಲಿ ರೂಪೇಶ್ ರಾಜಣ್ಣ ಅವರದ್ದು ಯಾವುದೇ ಪಾತ್ರವಿಲ್ಲ ತಾನು ತಪ್ಪಾಗಿ ಅರ್ಥ ಮಾಡಿಕೊಂಡುಬಿಟ್ಟೆ ಎಂದು ಹೇಳಿಕೊಂಡಿದ್ದಾರೆ.
ರೂಪೇಶ್ ರಾಜಣ್ಣ ಅವರ ಕುರಿತು ಬೇರೆಡೆಯಿಂದ ತಪ್ಪಾದ ಮಾಹಿತಿ ಬಂದಿತ್ತು, ಇದೀಗ ಅವರು ಭೇಟಿ ಮಾಡಿ ಅಕ್ರಮ ಎಂದು ಯಾವತ್ತೂ ಹೇಳಿಲ್ಲ ಎಂದು ಮಾತನಾಡಿದ್ದಾರೆ, ನಿಮ್ಮ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದ್ದಾರೆ. ಅವರನ್ನು ಭೇಟಿ ಮಾಡಿ ತುಂಬಾ ಖುಷಿಯಾಯಿತು. ಅವರ ಮಾತು ಕೇಳಿ ಅವರು ತುಂಬಾ ದೊಡ್ಡ ವ್ಯಕ್ತಿ ಎನಿಸುತ್ತಿದೆ, ನಾನೇ ಜಾಸ್ತಿ ಮಾತನಾಡಿಬಿಟ್ಟೆ ಎನಿಸುತ್ತಿದೆ ಎಂದರು.
ಅಲ್ಲದೇ ರೂಪೇಶ್ ರಾಜಣ್ಣ ಪರಿಚಯವಿರಲಿಲ್ಲ, ಈಗ ಅವರ ಬಗ್ಗೆ ತಿಳಿಯಿತು, ಇವರು ನನ್ನ ತಮ್ಮ, ಇನ್ನುಮುಂದೆ ಎಲ್ಲ ಕನ್ನಡಪರ ಸಂಘಟನೆಗಳ ಜತೆ ಕೈ ಜೋಡಿಸಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಕೊನೆಗೆ ತಾನು ಹೇಳಿದ್ದ ಎಲ್ಲ ಹೇಳಿಕೆಗಳನ್ನೂ ವಾಪಸ್ ತೆಗೆದುಕೊಳ್ಳುತ್ತಿದ್ದೇನೆ ಎಂದೂ ಸಹ ಸರ್ಫರಾಜ್ ಖಾನ್ ತಿಳಿಸಿದ್ದಾರೆ.