ಪಾಕ್ ಪರ ಬೇಹುಗಾರಿಕೆ ಆರೋಪ – ನೌಕಾ ಸಿಬ್ಬಂದಿ ವಿಶಾಲ್ ಯಾದವ್ ಬಂಧನ

ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ ಗುಪ್ತಚರ ವಿಭಾಗ ಬಂಧಿಸಿದೆ.

ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ ವಿಶಾಲ್ ಯಾದವ್ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಈತನನ್ನು 1923 ರ ಅಧಿಕೃತ ರಹಸ್ಯ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.ಯಾದವ್ ಡಾಕ್ಯಾರ್ಡ್ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ ಈತ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಶರ್ಮಾ ಎಂಬಾಕೆಯ ಜೊತೆ ಸಂಪರ್ಕದಲ್ಲಿದ್ದ. ನೌಕಾ ಕಾರ್ಯಾಚರಣೆಯ ನಿರ್ಣಾಯಕ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಪಡೆಯಲು ಆಕೆ ವಿಶಾಲ್ ಯಾದವ್ಗೆ ಹಣದ ಆಮಿಷ ಒಡ್ಡಿದ್ದಳು.

ಯಾದವ್ ಆನ್ಲೈನ್ ಗೇಮಿಂಗ್ ವ್ಯಸನಿಯಾಗಿದ್ದ ಈತ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಆತ ಸೂಕ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ. ಈತನಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣವನ್ನು ಪಾವತಿಸಲಾಗುತ್ತಿತ್ತು. ವಿಶಾಲ್ ಫೋನ್ ಚಾಟ್ ವಿವರ ಸೇರಿದಂತೆ ಹಲವು ದಾಖಲೆಗಳಿಂದ ಈತ ಮಾಹಿತಿ ಸೋರಿಕೆ ಮಾಡಿದ್ದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಈತ ದೀರ್ಘಕಾಲದಿಂದ ಬೇಹುಗಾರಿಕೆ ಮಾಡುತ್ತಿದ್ದು, ಅದರಲ್ಲೂ ಆಪರೇಷನ್ ಸಿಂಧೂರ್ ಸಮಯದಲ್ಲಿ ನೌಕಾ ಸೇನೆಯ ರಹಸ್ಯ ವಿವರ ಸೋರಿಕೆ ಮಾಡಿದ್ದ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.