‘ಅತ್ತಿಗೆ ಜೊತೆ ಸಲುಗೆ’ ಆರೋಪ – ಸ್ನೇಹಿತನ ಕೊಲೆ; ಇಬ್ಬರು ಬಂಧನ, ಪ್ರಮುಖ ಆರೋಪಿ ಪರಾರಿ!

ಬೆಂಗಳೂರು: ಅತ್ತಿಗೆ ಜತೆಗೆ ಸಲುಗೆ ಹೊಂದಿರುವುದಾಗಿ ಎಲ್ಲೆಡೆ ಹೇಳಿಕೊಂಡು ಓಡಾಡುತ್ತಿದ್ದ ಸ್ನೇಹಿತನನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದ ಪ್ರಕರಣದಲ್ಲಿ ಇಬ್ಬರನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ನಿವಾಸಿ ಶೈಲೇಶ್ ಯಾದವ್(30) ಕೊಲೆಯಾದ ವ್ಯಕ್ತಿ.
ಈ ಕೃತ್ಯ ಎಸಗಿದ ಆರೋಪದಡಿ ಕೊಲೆಯಾದ ವ್ಯಕ್ತಿಯ ಸ್ನೇಹಿತರಾದ ಸತೀಶ್ ಯಾದವ್ ಹಾಗೂ ಅರುಣ್ ಯಾದವ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಬೀರೇಂದ್ರ ಯಾದವ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಕೂಡ ಉತ್ತರ ಪ್ರದೇಶದವರು. ಬಂಡೇಪಾಳ್ಯ ಬಳಿಯ ಅಂಬೇಡ್ಕರ್ ನಗರದಲ್ಲಿ ಪ್ರತ್ಯೇಕ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದರು. ನಾಲ್ವರೂ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ಅತ್ತಿಗೆಯ ಜತೆಗೆ ಬೀರೇಂದ್ರ ಯಾದವ್ ಸಲುಗೆ ಹೊಂದಿದ್ದಾನೆ ಎಂದು ಶೈಲೇಶ್ ಯಾದವ್ ಎಲ್ಲರ ಬಳಿ ಹೇಳಿಕೊಂಡು ಓಡಾಡುತ್ತಿದ್ದ ಎನ್ನಲಾಗಿದೆ. ಅದರಿಂದ ಕೋಪಗೊಂಡ ಬೀರೇಂದ್ರ, ಜೂನ್ 18ರಂದು ಸ್ನೇಹಿತ ಶೈಲೇಶ್ನನ್ನು ಆರೋಪಿ ಸತೀಶ್ ಯಾದವ್ನ ಮನೆಗೆ ಕರೆಸಿಕೊಂಡಿದ್ದ. ಮದ್ಯದ ಅಮಲಿನಲ್ಲಿ ಮೂವರೂ ಸೇರಿ ಜಗಳ ತೆಗೆದು, ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು ಎಂದು ಪೊಲೀಸರು ಹೇಳಿದರು.

‘ಮದ್ಯದ ನಶೆಯಲ್ಲಿದ್ದ ಆರೋಪಿಗಳು ಅಂದು ರಾತ್ರಿಯಿಡೀ ಮೃತದೇಹದ ಬಳಿಯೇ ಮಲಗಿದ್ದರು. ಬೆಳಿಗ್ಗೆ ಎದ್ದಾಗ ಶೈಲೇಶ್ ಕೊಲೆ ಆಗಿರುವುದು ಗೊತ್ತಾಗಿತ್ತು. ಅದನ್ನು ಅರಿತ ಬೀರೇಂದ್ರ ಪರಾರಿಯಾಗಿದ್ದ. ಎರಡು ದಿನಗಳ ಬಳಿಕ ಶವ ಕೊಳೆತ ವಾಸನೆ ಬರಲಾರಂಭಿಸಿತ್ತು. ಅನುಮಾನಗೊಂಡ ಮನೆ ಮಾಲೀಕ, ಆರೋಪಿ ಸತೀಶ್ನನ್ನು ಪ್ರಶ್ನಿಸಿದ್ದರು. ಆಗ ನಿಜವಾದ ಮಾಹಿತಿ ನೀಡದೇ ಸ್ನೇಹಿತನೊಬ್ಬ ಮೃತಪಟ್ಟಿದ್ದಾನೆ ಎಂದು ಹೇಳಿದ್ದ. ಪೊಲೀಸರಿಗೆ ಮನೆಯ ಮಾಲೀಕರು ದೂರು ನೀಡಿದ್ದರು. ಪೊಲೀಸರು ಮನೆಗೆ ಬಂದು ಪರಿಶೀಲಿಸಿ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ವೇಳೆ ಕೊಲೆ ಎಂಬುದು ಗೊತ್ತಾಗಿತ್ತು. ನಂತರ ವಿವಿಧ ಸಾಕ್ಷ್ಯಾಧಾರ ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.