ಐಟಿ ಇಲಾಖೆಯಿಂದ ಮಂಚು ವಿಷ್ಣುಗೆ ಶಾಕ್: ‘ಕಣ್ಣಪ್ಪ’ ಚಿತ್ರದ ₹100 ಕೋಟಿ ಬಜೆಟ್ ಬಗ್ಗೆ ತನಿಖೆ – ಬಿಡುಗಡೆಗೂ ಮುನ್ನವೇ ಸಂಕಷ್ಟ!

ಸಿನಿಮಾ ಮಂದಿಗೆ ಐಟಿ ಇಲಾಖೆ ಪದೇ ಪದೆ ಶಾಕ್ ಕೊಡ್ತಿದೆ. ನಿನ್ನೆ(ಜೂನ್ 25) ತೆಲುಗು ನಟ ಮಂಚು ವಿಷ್ಣು ಕಛೇರಿಯಲ್ಲಿ ಕೇಂದ್ರ ಆದಾಯ ಇಲಾಖೆ ಹಾಗೂ ಜಿಎಸ್ಟಿ ಇಲಾಖೆ ಜಂಟಿಯಾಗಿ ತಪಾಸಣೆ ನಡೆಸಿದೆ. ಭಾರೀ ಬಜೆಟ್ನಲ್ಲಿ ‘ಕಣ್ಣಪ್ಪ’ ಸಿನಿಮಾ ನಿರ್ಮಾಣ ಮಾಡಿರುವುದಾಗಿ ನಟ ವಿಷ್ಣು ಹೇಳಿದ್ದರು.
ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿ ಐಟಿ ಶಾಕ್ ಕೊಟ್ಟಿದೆ.
‘ಕಣ್ಣಪ್ಪ’ ಸಿನಿಮಾ ಬಜೆಟ್ 100 ಕೋಟಿ ರೂ.ಗೂ ಅಧಿಕ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾತನಾಡಿಲ್ಲ. ಇಡೀ ಸಿನಿಮಾ ನ್ಯೂಜಿಲೆಂಡ್ನಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ಮಂಚು ವಿಷ್ಣು ತಂದೆ ಮೋಹನ್ ಬಾಬು ನ್ಯೂಜಿಲೆಂಡ್ನಲ್ಲಿ 7000 ಎಕರೆ ಭೂಮಿ ಖರೀದಿಸಿದ್ದೀನಿ ಎಂದು ಫನ್ನಿ ವೀಡಿಯೋ ಮಾಡಿದ್ದರು. ಆಗ ಕೂಡ ಕಪ್ಪು ಹಣ ನನ್ನ ಬಳಿ ಇಲ್ಲ ಎಂದಿದ್ದರು.
ಸಂದರ್ಶನವೊಂದರಲ್ಲಿ ‘ಕಣ್ಣಪ್ಪ’ ಸಿನಿಮಾ ಬಜೆಟ್ ಎಷ್ಟು ಎನ್ನುವ ಪ್ರಶ್ನೆಗೆ ಮಂಚು ವಿಷ್ಣು ಪ್ರತಿಕ್ರಿಯಿಸಿ “ಆ ಲೆಕ್ಕ ಈಗ ಯಾಕೆ? ಹೇಳಿದ್ರೆ ಐಟಿ ಇಲಾಖೆಯವರು ನಮ್ಮ ಮನೆಗೆ ಬರ್ತಾರೆ” ಎಂದು ತಮಾಷೆ ಮಾಡಿದ್ದರು. ಅವರು ಹೇಳಿದಂತೆಯೇ ಈಗ ಐಟಿ ಇಲಾಖೆ ದಾಳಿ ನಡೆಸಿದೆ. ಹೈದರಾಬಾದ್ನ ಮಾಧಾಪುರದಲ್ಲಿರುವ ನಟ ಮಂಚು ವಿಷ್ಣು ಅವರ ಕಚೇರಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಮತ್ತು ಜಿಎಸ್ಟಿ ಇಲಾಖೆಗಳು ಜಂಟಿಯಾಗಿ ದಾಳಿ ನಡೆಸಿವೆ ಎಂದು ವರದಿಯಾಗಿದೆ.
‘ಕಣ್ಣಪ್ಪ’ ಚಿತ್ರವನ್ನು ಮಂಚು ವಿಷ್ಣು ತಂದೆ ಮೋಹನ್ ಬಾಬು ನಿರ್ಮಾಣ ಮಾಡಿದ್ದಾರೆ. ಪ್ರಭಾಸ್, ಮೋಹನ್ ಲಾಲ್, ಅಕ್ಷಯ್ ಕುಮಾರ್ ಸಂಭಾವನೆ ಪಡೆಯದೇ ಚಿತ್ರದಲ್ಲಿ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವಿಚಾರವನ್ನು ಸ್ವತಃ ವಿಷ್ಣು ಹೇಳಿದ್ದಾರೆ. ಇನ್ನುಳಿದಂತೆ ನ್ಯೂಜಿಲೆಂಡ್ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗ್ರಾಫಿಕ್ಸ್ ಕೆಲಸಗಳಿಗೆ ಹೆಚ್ಚು ಹಣ ಹೂಡಿದ್ದಾರೆ. ವಿಷ್ಣು ಹೀರೊ ಆಗಿರುವುದರಿಂದ ಸಂಭಾವನೆ ಇಲ್ಲ. ಹಾಗಿದ್ದರೆ ಚಿತ್ರದ ನಿಜವಾದ ಬಜೆಟ್ ಎಷ್ಟು? ಕೊಡುತ್ತಿರುವ ಲೆಕ್ಕ ಎಷ್ಟು ಎನ್ನುವುದರ ಬಗ್ಗೆ ಐಟಿ ಅಧಿಕಾರಿಗಳು ಆಧಾರ ಕಲೆ ಹಾಕಿದ್ದಾರೆ.
ಐಟಿ ದಾಳಿ ಬಗ್ಗೆ ನಟ ಮಂಚು ವಿಷ್ಣು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. “ದಾಳಿ ಬಗ್ಗೆ ನನಗೂ ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ನೋಡಿ ನಾವು ವಿಷಯ ತಿಳಿದುಕೊಂಡೆ. ಅಷ್ಟಕ್ಕೂ ಮುಚ್ಚಿಡುವುದು ಏನಿದೆ? ಎಲ್ಲೆಲ್ಲಿ ಎಷ್ಟು ಸಾಲ ಮಾಡಿದ್ದೀವಿ ಎನ್ನುವುದು ಗೊತ್ತಾಗುತ್ತದೆ ಬಿಡಿ” ಎಂದು ಹೇಳಿದ್ದಾರೆ.
‘ಕಣ್ಣಪ್ಪ’ ಸಿನಿಮಾ ಬಗ್ಗೆ ಕೇಳಿದ ಪ್ರಶ್ನೆಗೆ ವಿಷ್ಣು ಪ್ರತಿಕ್ರಿಯಿಸಿ “ಸಿನಿಮಾ ಬಹಳ ಚೆನ್ನಾಗಿ ಬಂದಿದೆ. ಬಹಳ ಭರವಸೆ ಇದೆ. ಹಿಂದಿ ಫೈನಲ್ ಕಾಪಿ ನೋಡಿದೆ. ಕ್ಲೈಮ್ಯಾಕ್ಸ್ ಮೈ ರೋಮಾಂಚನಗೊಳಿಸುವಂತಿದೆ ಎಂದು ಅಲ್ಲಿನ ಕೆಲ ಪ್ರಮುಖರು ಹೇಳಿದ್ದಾರೆ. ಪ್ರೇಕ್ಷಕರು ಇದೇ ಮಾತನ್ನು ಹೇಳುತ್ತಾರೆ ಎಂದುಕೊಂಡಿದ್ದೇನೆ. ದೇವರು ಹಾಗೂ ಭಕ್ತನ ನಡುವೆ ನಡೆಯುವ ಕಥೆ ಇದು. ‘ಕಣ್ಣಪ್ಪ’ನ ಬಗ್ಗೆ ಈ ತಲೆಮಾರಿನವರಿಗೂ ಗೊತ್ತಾಗಬೇಕು” ಎಂದು ಹೇಳಿದ್ದಾರೆ.
ಮುಖೇಶ್ ಕುಮಾರ್ ಸಿಂಗ್ ‘ಕಣ್ಣಪ್ಪ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಬೇಡರ ದಿಣ್ಣ ಮುಂದೆ ಭಕ್ತ ಕಣ್ಣಪ್ಪನಾದ ಕಥೆ ಚಿತ್ರದಲ್ಲಿದೆ. ರುದ್ರ ಎಂಬ ಪವರ್ಫುಲ್ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದಾರೆ. ಶಿವ-ಪಾರ್ವತಿಯಾಗಿ ಅಕ್ಷಯ್ಕುಮಾರ್ ಹಾಗೂ ಕಾಜಲ್ ಅಗರ್ವಾಲ್ ಮಿಂಚಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.
ಈಗಾಗಲೇ ‘ಕಣ್ಣಪ್ಪ’ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ವಿಶ್ವದಾದ್ಯಂತ 5400 ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ ಅಡ್ವಾನ್ಸ್ ಬುಕ್ಕಿಂಗ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿವ್ಯೂ ನೋಡಿ ಪ್ರೇಕ್ಷಕರು ಸಿನಿಮಾ ನೋಡಲು ಬರುವ ಸಾಧ್ಯತೆಯಿದೆ.