ಭಾರತದ ಕಾಫಿ ಭವಿಷ್ಯ: ಹೆಚ್ಚಿದ ಬೇಡಿಕೆಗೆ ತಕ್ಕಂತೆ ಪೂರೈಸಲು ಕಾಫಿ ಮಂಡಳಿಯಿಂದ ಮಹತ್ವಾಕಾಂಕ್ಷಿ ಯೋಜನೆ!

ಕೊಡಗು : ಜಾಗತಿಕ ಮತ್ತು ದೇಶೀಯ ಮಟ್ಟದಲ್ಲಿ ಭಾರತದ ಕಾಫಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂತರಿಕ ಬೇಡಿಕೆ ಮತ್ತು ರಫ್ತಿನಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಭಾರತೀಯ ಕಾಫಿ ಮಂಡಳಿ ತನ್ನ ಕಾರ್ಯ ತಂತ್ರವನ್ನು ಮರು ಪರಿಶೀಲಿಸಲು ಸಿದ್ಧತೆ ನಡೆಸಿದೆ.
ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಉತ್ಪನ್ನ ಪೂರೈಸಲು ಕಾಫಿಯ ಗುಣಮಟ್ಟ ಸುಧಾರಣೆ, ಅಂಗಾಂಶ ಕೃಷಿ ಮೂಲಕ ಹೊಸ ತಳಿಯ ಅನ್ವೇಷಣೆ ಮತ್ತು ಕ್ಷೇತ್ರ ವಿಸ್ತರಣೆಗೆ ಮುಂದಾಗಿದೆ.
ಕೆಲ ವರ್ಷಗಳಿಂದ ಜಾಗತಿಕ ಬೇಡಿಕೆಯಿಂದ ಭಾರತದ ಕಾಫಿ ರಫ್ತಿನಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದೆ. ಜೊತೆಗೆ ಏರುತ್ತಿರುವ ಬೆಲೆಗಳು ಮತ್ತು ಪಾನೀಯಗಳ ಸ್ಪರ್ಧೆಯಿಂದಾಗಿ ಕಾಫಿ ದೇಶೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸಿತ್ತು. 2024-25ನೇ ಹಣಕಾಸು ವರ್ಷದಲ್ಲಿ ರಫ್ತು ದಾಖಲೆಯ 15 ಸಾವಿರ ಕೋಟಿ ರು. ತಲುಪಿತ್ತು. ಭಾರತದಲ್ಲೂ ಕೆಫೆ ಸಂಸ್ಕೃತಿಯಿಂದಾಗಿ ಕಾಫಿ ಬೇಡಿಕೆ ಏರುತ್ತಲೇ ಇದೆ.
ಕಾಫಿ ಮಂಡಳಿ ಪ್ರಕಾರ ಭಾರತದ ಕಾಫಿಯಲ್ಲಿ ಶೇ.70ರಷ್ಟು ರಫ್ತಾಗುತ್ತದೆ. ಅಮೆರಿಕ, ಯುರೋಪಿಯನ್ ಒಕ್ಕೂಟ, ರಷ್ಯಾ ಸೇರಿ ಇತರೆ ದೇಶಗಳು ನಮ್ಮ ಕಾಫಿಯ ಪ್ರಮುಖ ಮಾರುಕಟ್ಟೆಗಳಾಗಿವೆ. ನಮ್ಮ ಗುಣಮಟ್ಟದ ಉತ್ಕೃಷ್ಟ ಕಾಫಿಯು ಪಶ್ಚಿಮ ಏಷ್ಯಾ, ಜಪಾನ್, ಕೊರಿಯಾದಲ್ಲೂ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ. ಆದರೂ ಸ್ಥಳೀಯವಾಗಿಯೂ ಕಾಫಿಗೆ ಹೆಚ್ಚು ಬೇಡಿಕೆ ಇರುವುದರಿಂದ ರಫ್ತು ಮತ್ತು ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ಬೇಡಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಮಂಡಳಿಯು ರಫ್ತುದಾರರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದೆ.
ಸಮಗ್ರ ಸಹಕಾರಿ ಅಭಿವೃದ್ಧಿ ಯೋಜನೆ(ಐಸಿಡಿಪಿ) ಅಡಿ ಕಾಫಿ ಬೆಳೆಯುವ ಸಾಂಪ್ರದಾಯಿಕ ಪ್ರದೇಶಗಳಲ್ಲಿ ಉತ್ಪಾದಕತೆಯ ಸುಧಾರಣೆ ಮತ್ತು ಸಾಂಪ್ರದಾಯಿಕವಲ್ಲದ ಮತ್ತು ಪ್ರಾದೇಶಿಕೇತರ ಪ್ರದೇಶದಲ್ಲಿ ಕಾಫಿ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದ ಬೇಡಿಕೆಗೆ ತಕ್ಕಂತೆ ಕಾಫಿ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದರು.

ಹೊಸ ತಳಿಗಳ ಅಭಿವೃದ್ಧಿ:
ಅರೇಬಿಕಾ, ರೊಬಸ್ಟಾ ಸೇರಿ ಇತರೆ ಕಾಫಿ ತಳಿಗಳನ್ನು ಬೆಳೆಸಿ ಗುಣಮಟ್ಟದ ಕಾಫಿಯನ್ನು ಯುಕೆ ಮತ್ತು ಯುಎಸ್ಗೆ ರಫ್ತು ಮಾಡುತ್ತಿರುವ ಸೌತ್ ಇಂಡಿಯಾ ಕಾಫಿ ಕಂಪನಿಯು ಅರೇಬಿಕಾಗೆ ಪರ್ಯಾಯವಾಗಿ ಇತರೆ ತಳಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಒಂದೆರಡು ವರ್ಷದಲ್ಲಿ ಫಸಲು ಬರುವ ನಿರೀಕ್ಷೆಯಿದ್ದು ಅವುಗಳ ಗುಣಮಟ್ಟ ಪರೀಕ್ಷಿಸಲು ಉತ್ಸುಕರಾಗಿದ್ದೇವೆ ಎನ್ನುತ್ತಾರೆ ಸೌತ್ ಇಂಡಿಯಾ ಕಂಪನಿಯ ಸಹ ಸಂಸ್ಥಾಪಕ ಕೋಮಲ್ ಸೇಬಲ್. ಕೋಟ್…
ಜಾಗತಿಕ ಮಟ್ಟದಲ್ಲಿ ಕಾಫಿ ಮಾರುಕಟ್ಟೆ ವಿಸ್ತರಣೆಯೊಂದಿಗೆ ಸುಸ್ಥಿರತೆ ಕಾಯ್ದುಕೊಳ್ಳುವುದು ಮತ್ತು ದೇಶೀಯ ಬೇಡಿಕೆಗೆ ತಕ್ಕಂತೆ ಪೂರೈಸುವಂತ ಸವಾಲಿನ ಕೆಲಸವನ್ನು ಕಾಫಿ ಮಂಡಳಿ ನಿರ್ವಹಿಸಲಿದೆ. ತಂತ್ರಜ್ಞಾನ ಬಳಸಿಕೊಂಡು ಕಾಫಿಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾಫಿ ಮಂಡಳಿ ಕಾರ್ಯತಂತ್ರ ರೂಪಿಸಲು ಯೋಜಿಸುತ್ತಿದೆ.
- ಕೂರ್ಮ ರಾವ್, ಕಾಫಿ ಮಂಡಳಿ ಬೆಂಗಳೂರು ಸಿಇಒ ಮತ್ತು ಕಾರ್ಯದರ್ಶಿ.