ಟೀಮ್ ಇಂಡಿಯಾ ಕ್ರಿಕೆಟಿಗ ರಿಂಕು ಸಿಂಗ್ಗೆ ಬಂಪರ್ ಗಿಫ್ಟ್: ಉತ್ತರ ಪ್ರದೇಶದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿಯಾಗಿ ನೇಮಕ!

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್ ಅವರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದೊಡ್ಡ ಉಡುಗೊರೆಯೊಂದನ್ನು ನೀಡಿದ್ದಾರೆ. ರಿಂಕು ಅವರನ್ನು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿಯಾಗಿ ಉತ್ತರ ಪ್ರದೇಶ ಸರ್ಕಾರ ನೇಮಿಸಲಿದೆ. ಅಂತಾರಾಷ್ಟ್ರೀಯ ಕ್ರಿಕೆಟಿಗ ರಿಂಕು ಸಿಂಗ್ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಅಂತಾರಾಷ್ಟ್ರೀಯ ಪದಕ ವಿಜೇತ ನೇರ ನೇಮಕಾತಿ ನಿಯಮಗಳು-2022 ರ ಪ್ರಕಾರ ರಿಂಕು ಸಿಂಗ್ ಅವರನ್ನು ಜಿಲ್ಲಾ ಪ್ರಾಥಮಿಕ ಶಿಕ್ಷಣ ಅಧಿಕಾರಿ (ಬಿಎಸ್ಎ) ಹುದ್ದೆಗೆ ನೇಮಕ ಮಾಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಈ ಸಂಬಂಧ ಪ್ರಾಥಮಿಕ ಶಿಕ್ಷಣ ನಿರ್ದೇಶಕರು ಆದೇಶಗಳನ್ನು ಹೊರಡಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಖ್ಯಾತಿ ತರುವ ಆಟಗಾರರಿಗೆ ಸರ್ಕಾರಿ ಸೇವೆಗಳಲ್ಲಿ ಗೌರವಾನ್ವಿತ ಸ್ಥಾನವನ್ನು ಒದಗಿಸುವ ರಾಜ್ಯ ಸರ್ಕಾರದ ನೀತಿಯ ಪ್ರಕಾರ ರಿಂಕು ಸಿಂಗ್ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ರಿಂಕು ಸಿಂಗ್ ಅವರ ಜೀವನವು ಹೋರಾಟ ಮತ್ತು ಯಶಸ್ಸಿನ ಒಂದು ಉದಾಹರಣೆಯಾಗಿದೆ. ರಿಂಕು ಅವರು 1997, ಅಕ್ಟೋಬರ್ 12ರಂದು ಅಲಿಘರ್ನ ಸರಳ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಖಾನ್ಚಂದ್ರ ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ವಿತರಕರಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ರಿಂಕು ಕೂಡ ತಮ್ಮ ತಂದೆಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದರು. ಆದರೆ ಕ್ರಿಕೆಟ್ ಮೇಲಿನ ಅವರ ಉತ್ಸಾಹ ಅವರನ್ನು ಮೈದಾನಕ್ಕೆ ಎಳೆಯಿತು. ತಮ್ಮ ಪ್ರತಿಭೆಯಿಂದ ಎಲ್ಲರನ್ನೂ ಅಚ್ಚರಿಗೊಳಿಸಿದರು. ಡಿಪಿಎಸ್ ಶಾಲಾ ಮೈದಾನದಲ್ಲಿ ಅಂತಾರಾಷ್ಟ್ರೀಯ ಶಾಲಾ ಕ್ರಿಕೆಟ್ನಲ್ಲಿ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಅವರು ಆರಂಭಿಕ ಮನ್ನಣೆಯನ್ನು ಪಡೆದರು.

80 ಲಕ್ಷ ರೂ.ಗೆ ರಿಂಕು ಅವರನ್ನು ಕೆಕೆಆರ್ ತಂಡ ಪ್ರಪ್ರಥಮವಾಗಿ ಹರಾಜಿನಲ್ಲಿ ಖರೀದಿ ಮಾಡಿತು. ಆದರೆ, ತನ್ನ ಚೊಚ್ಚಲ ಸೀಸನ್ನಲ್ಲಿ ರಿಂಕು ಅವರು ಉತ್ತಮ ಪ್ರದರ್ಶನವನ್ನು ತೋರದಿದ್ದರೂ ಅವರ ಸಾಮರ್ಥ್ಯವನ್ನು ಪರಿಗಣಿಸಲಾಯಿತು ಮತ್ತು ಅವರನ್ನು 2019ನೇ ಸಾಲಿನ ಐಪಿಎಲ್ ಟೂರ್ನಿಗೂ ತಂಡದಲ್ಲಿ ಉಳಿಸಿಕೊಳ್ಳಲಾಯಿತು. ರಿಂಕು ಅವರು ತಮ್ಮ ಬ್ಯಾಟಿಂಗ್ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕೆಕೆಆರ್ ಅಕಾಡೆಮಿಯಲ್ಲಿ ಕೆಕೆಆರ್ ಸಹಾಯಕ ಕೋಚ್ ಅಭಿಷೇಕ್ ನಾಯರ್ ಸಲಹೆ ಪಡೆದುಕೊಂಡರು. ಅದರ ಫಲಿತಾಂಶಗಳು ಉತ್ತರ ಪ್ರದೇಶಕ್ಕಾಗಿ ಅವರ 2018-19 ರಣಜಿ ಟ್ರೋಫಿ ಆಡಿದಾಗ ಗೋಚರಿಸಿದವು. ರಣಜಿಯಲ್ಲಿ ರಿಂಕು ಉತ್ತಮ ಪ್ರದರ್ಶನ ನೀಡಿದರು. ನಾಲ್ಕು ಶತಕಗಳೊಂದಿಗೆ ಪಂದ್ಯಾವಳಿಯಲ್ಲಿ ಮೂರನೇ ಅತಿ ಹೆಚ್ಚು ರನ್ ಗಳಿಸಿದ (10 ಇನ್ನಿಂಗ್ಸ್ಗಳಲ್ಲಿ 953 ರನ್) ಆಟಗಾರ ಎನಿಸಿಕೊಂಡರು. 2017ರಲ್ಲಿ ರಿಂಕು ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ (ಈಗ ಪಂಜಾಬ್ ಕಿಂಗ್ಸ್) ಭಾಗವಾಗಿದ್ದರು. ಅನುಮತಿ ಪಡೆಯದೆ ಅಬುಧಾಬಿಯಲ್ಲಿ ರಂಜಾನ್ ಟಿ20 ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬಿಸಿಸಿಐ ಮೂರು ತಿಂಗಳು ರಿಂಕು ಅವರನ್ನು ಅಮಾನತುಗೊಳಿಸಿತ್ತು.
2023ನೇ ಸಾಲಿನ ಐಪಿಎಲ್ಗೆ ರಿಂಕು ಸಿಂಗ್ ಅವರನ್ನು 55 ಲಕ್ಷ ರೂ.ಗೆ ಕೆಕೆಆರ್ ತಂಡ ತಮ್ಮಲ್ಲೇ ಉಳಿಸಿಕೊಂಡಿತು. ಉತ್ತಮ ಪ್ರದರ್ಶನ ನೀಡಿದ್ದರಿಂದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ, ಕೆಕೆಆರ್ ಅವರನ್ನು 13 ಕೋಟಿ ರೂ.ಗಳಿಗೆ ತಮ್ಮ ತಂಡದಲ್ಲೇ ಮತ್ತೆ ಉಳಿಸಿಕೊಂಡಿತು. ಇನ್ನು ರಿಂಕು ಭಾರತಕ್ಕಾಗಿ ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇತ್ತೀಚೆಗೆ, ರಿಂಕು ಸಿಂಗ್, ಎಸ್ಪಿ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ಮದುವೆ ನವೆಂಬರ್ 18 ರಂದು ವಾರಣಾಸಿಯಲ್ಲಿ ನಡೆಯಬೇಕಿತ್ತು, ಆದರೆ ಕೆಲವು ಕಾರಣಗಳಿಂದಾಗಿ, ಇದೀಗ ಅದನ್ನು ಮುಂದೂಡಲಾಗಿದೆ.