ಕನ್ನಡ-ತುಳು ಭಾಷಾ ವಿವಾದ: ಸರ್ಕಾರದ ಆದೇಶವೇ ಆಕ್ರೋಶಕ್ಕೆ ಕಾರಣ

ಕರ್ನಾಟಕದಲ್ಲಿ ಭಾಷಾ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ಭಾಷಾ ವಿವಾದ ಅಂತ್ಯವಾಗುತ್ತಿದ್ದಂತೆಯೇ ಮತ್ತೊಂದು ಸೃಷ್ಟಿಯಾಗುತ್ತಿದೆ. ಕಳೆದ ಎರಡರಿಂದ ಮೂರು ವರ್ಷದ ಅವಧಿಯಲ್ಲಿ ಹಲವು ಭಾಷಾ ವಿವಾದಗಳು ಕರುನಾಡಿನಲ್ಲಿ ಸಂಭವಿಸಿವೆ. ಹಲವು ಭಾಷಾ ವಿವಾದಗಳು ನೆರೆಯ ರಾಜ್ಯಗಳಿಂದಲೇ ಆಗಿವೆ.
ಮೊದಲನೆಯದಾಗಿ ಹಿಂದಿ, ಮರಾಠಿ ಹಾಗೂ ಈಚೆಗೆ ತಮಿಳು ಭಾಷಾ ವಿವಾದಗಳು ಸೃಷ್ಟಿಯಾಗಿದ್ದವು. ಇದರ ನಡುವೆ ಕೆಲವು ಸೋಷಿಯಲ್ ಮೀಡಿಯಾ Influencer ಗಳಿಂದಾಗಿ ಕನ್ನಡ vs ತುಳು ಭಾಷಾ ವಿವಾದ ಸೃಷ್ಟಿಯಾಗಿತ್ತು. ತುಳು, ಕೊಡವ ಎಲ್ಲವೂ ಕನ್ನಡದ ಸಹೋದರ ಭಾಷೆಗಳು. ಇವು ನಮ್ಮ ನಾಡಿನ ಭಾಷೆಗಳು. ಈ ಭಾಷೆಗಳೊಂದಿಗೆ ಎಲ್ಲರೂ ಒಂದಾಗಿ ಸಾಗಬೇಕು ಎನ್ನುವ ಕೂಗುಗಳ ನಡುವೆ ಇದೀಗ ಸರ್ಕಾರವೇ ಎಡವಟ್ಟೊಂದನ್ನು ಮಾಡಿಕೊಂಡಿದೆ.
ಭಾಷಾ ವಿವಾದಗಳ ಸೂಕ್ಷ್ಮತೆಯ ನಡುವೆಯೇ ಇದೀಗ ಕನ್ನಡ ಮತ್ತು ತುಳು ಭಾಷಿಕರ ನಡುವೆ ವಾದ – ವಿವಾದ ನಡೆಯುವುದಕ್ಕೆ ರಾಜ್ಯ ಸರ್ಕಾರವೇ ವೇದಿಕೆಯೊಂದನ್ನು ಕಲ್ಪಿಸಿದೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಹಲವು ದಶಕಗಳಿಂದ ಚರ್ಚೆ ನಡೆದಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಭಾರತದ 22 ಭಾಷೆಗಳನ್ನು ಸೇರಿಸಲಾಗಿದೆ. ಆದರೆ ತುಳು ಭಾಷೆಯನ್ನು ಇನ್ನೂ ಸೇರಿಸಲಾಗಿಲ್ಲ. ತುಳುವನ್ನು ಪರಿಚ್ಛೇದಕ್ಕೆ ಸೇರಿಸಲು ಅನೇಕ ಸಂಘಟನೆಗಳು ಹಾಗೂ ತುಳು ಭಾಷಿಕರು ಒತ್ತಾಯಿಸುತ್ತಿದ್ದಾರೆ. ಇದರ ನಡುವೆ ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ತುಳು ಸೇರಿಸುವ ಬಗ್ಗೆಯೂ ಕರ್ನಾಟಕದಲ್ಲಿ ಚರ್ಚೆ ನಡೆದಿತ್ತು. ಆದರೆ, ಇದೀಗ ತುಳು ಭಾಷೆ ಬಳಕೆ ಮಾಡಬಾರದು ಎನ್ನುವ ಸರ್ಕಾರಿ ಆದೇಶವು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕನ್ನಡ ಭಾಷೆಗೆ ಪ್ರಾಮುಖ್ಯತೆ ನೀಡುವ ಬಗ್ಗೆ ಆದೇಶವೊಂದನ್ನು ಹೊರಡಿಸಲಾಗಿದೆ. ಇದರಲ್ಲಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರ್ಚಿಸುವಾಗ ತುಳು ಭಾಷೆ ಬಳಕ ಮಾಡದಂತೆ ಮತ್ತು ಕನ್ನಡ ಭಾಷೆಗೆ ಪ್ರಾಮುಖ್ಯತ ನೀಡುವಂತೆ ಪಂಚಾಯತ್ ಅಭಿವೃದ್ಧಿ, ಅಧಿಕಾರಿಯವರಿಗೆ ನಿರ್ದೇಶನ ನೀಡಲು ಉಲ್ಲೇಖ (1)ರಂತೆ ಹಾಗೂ ಮುರಳೀಧರ, ಸಂಚಾಲಕರು – ಯಶಸ್ವಿ ನಾಗರಿಕ ಸೇವಾ ಸಂಘ ವಾಸುದೇವ ನಗರ ಕಾರ್ಕಳ ಅವರು ಮನವಿ ಸಲ್ಲಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಮನವಿಯ ಕುರಿತು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ನಿಂದ ಆದೇಶ ಮಾಡಲಾಗಿದೆ. ಈ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸದಾನಂದ ಗೌಡ ಆಕ್ರೋಶ: ಇನ್ನು ಈ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸದಾನಂದ ಗೌಡ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಟ್ವೀಟ್ ಮಾಡಿ ಈ ಸಂದೇಶವನ್ನು ಹಂಚಿಕೊಂಡಿರುವ ಅವರು, ತುಳು ಭಾಷೆ – ಕನ್ನಡ ನಾಡಿನ ಮಣ್ಣಿನ ಭಾಷೆ. ನಮ್ಮ ಕರ್ನಾಟಕದಲ್ಲಿ ತುಳು ಮಾತನಾಡಬಾರದು ಎನ್ನುವ ಸರ್ಕಾರದ ಆದೇಶ! ಹಾಗಾದರೆ, ಉರ್ದು ಭಾಷೆಯ ಬಳಕೆ ಸರಕಾರೀ ಕಡತದಲ್ಲಿ ಮಾಡಬಹುದೇ ? ಮಿಸ್ಟರ್ ಟ್ರೊಲ್ ಮಿನಿಸ್ಟರ್ ಎಲ್ಲಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.