ಐಎಎಸ್ಗಳಿಂದ ಹೊಸತನ ಸಾಧ್ಯವಿಲ್ಲ ಎಂಬ ಖಾನ್ ಸರ್ ವಿವಾದಾತ್ಮಕ ಹೇಳಿಕೆ

ಪಾಟ್ನಾದಿಂದ ದೇಶದಾದ್ಯಂತ ಯುವಕರ ಮನ ಗೆದ್ದಿರುವ ಖಾನ್ ಸರ್ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ ಸರಳ ಶೈಲಿ, ಮನಮುಟ್ಟುವ ಮಾತುಗಳು ಮತ್ತು ವಿದ್ಯಾರ್ಥಿಗಳ ಜೀವನದಲ್ಲಿ ಬದಲಾವಣೆ ತರುವ ಚಿಂತನೆಗಳಿಂದ ಪ್ರಸಿದ್ಧರಾಗಿರುವ ಖಾನ್ ಸರ್, ಈಗ ಐಎಎಸ್ ಅಧಿಕಾರಿಗಳ ಬಗ್ಗೆ ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಖಾನ್ ಸರ್, ಐಎಎಸ್ ಅಧಿಕಾರಿಗಳಿಂದ ದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅವರು ಉತ್ತಮ ಕಾರ್ಯನಿರ್ವಾಹಕರು. ಅವರಿಗೆ ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಆದರೆ ಅವರಿಂದ ಹೊಸತನದ ನಿರೀಕ್ಷೆ ಇಟ್ಟುಕೊಳ್ಳುವುದು ಮರುಭೂಮಿಯಲ್ಲಿ ನೀರು ಹುಡುಕಿದಂತೆ. ಅವರಿಂದ ಹೊಸ ಚಿಂತನೆಗಳು ಬರಲು ಸಾಧ್ಯವಿಲ್ಲ.

ಹೋಮಿ ಜಹಾಂಗೀರ್ ಭಾಭಾ ಐಎಎಸ್ ಅಧಿಕಾರಿಯಾಗಿರಲಿಲ್ಲ, ಆದರೆ ಅವರು ಪರಮಾಣು ಬಾಂಬ್ ತಯಾರಿಸಿದರು. ಸತೀಶ್ ಧವನ್ ಮತ್ತು ವಿಕ್ರಂ ಸಾರಾಭಾಯ್ ಅಂತರಿಕ್ಷ ಕಾರ್ಯಕ್ರಮಗಳನ್ನು ರೂಪಿಸಿದರು, ಅವರೂ ಐಎಎಸ್ ಅಧಿಕಾರಿಗಳಾಗಿರಲಿಲ್ಲ. ಎಪಿಜೆ ಅಬ್ದುಲ್ ಕಲಾಂ ಐಎಎಸ್ ಅಧಿಕಾರಿಯಾಗಿರಲಿಲ್ಲ, ಆದರೆ ಅವರು ಪರಮಾಣು ಬಾಂಬ್ ಮತ್ತು ಕ್ಷಿಪಣಿಗಳನ್ನು ತಯಾರಿಸಿದರು. ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ಐಎಎಸ್ ಅಧಿಕಾರಿಯಾಗಿರಲಿಲ್ಲ. ವರ್ಗೀಸ್ ಕುರಿಯನ್ ಕೂಡ ಐಎಎಸ್ ಅಧಿಕಾರಿಯಾಗಿರಲಿಲ್ಲ. ಯಾವುದಾದರೂ ಒಂದು ದೊಡ್ಡ ಕೆಲಸವನ್ನು ಐಎಎಸ್ ಅಧಿಕಾರಿ ಮಾಡಿರುವುದನ್ನು ಹೇಳಿ ಎಂದು ಖಾನ್ ಸರ್ ಪ್ರಶ್ನಿಸಿದ್ದಾರೆ.