ಆರ್ಜೆಡಿ ನಾಯಕ ತೇಜಸ್ವಿ ಯಾದವ್ ನಿವಾಸದ ಬಳಿಯಲ್ಲಿ ಗುಂಡಿನ ದಾಳಿ

ಪಾಟ್ನಾ, ಜೂನ್ 19: ಆರ್ಜೆಡಿ ನಾಯಕ ತೇಜಸ್ವಿ ಯಾದವ್ನಿ ವಾಸದೆದುರು ಗುಂಡಿನ ದಾಳಿ ನಡೆದಿದೆ. ಸಚಿವ ಅಶೋಕ್ ಚೌಧರಿ ಹಾಗೂ ತೇಜಸ್ವಿ ಯಾದವ್ ಮನೆ ಅಕ್ಕಪಕ್ಕದಲ್ಲೇ ಇದೆ. ಗೇಟ್ ಬಳಿ ಯುವಕನ ಮೇಲೆ ಗುಂಡು ಹಾರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದುಷ್ಕರ್ಮಿಗಳು ರಾಹುಲ್ ಎಂಬಾತನ ಮೇಲೆ ಗುಂಡು ಹಾರಿಸಿದ್ದಾರೆ, ದಾಳಿಕೋರರಿಬ್ಬರು ಬೈಕ್ನಲ್ಲಿ ಬಂದಿದ್ದರು.

ದಾಳಿಯ ಬಳಿಕ ರಾಹುಲ್ ಬಳಿ ಇದ್ದ 400 ರೂ. ಕೂಡ ಕಸಿದುಕೊಂಡು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಕೇವಲ ಈ ಇಬ್ಬರ ಮನೆ ಮಾತ್ರವಲ್ಲದೆ ಅಲ್ಲೇ ಆಸುಪಾಸಿನಲ್ಲಿ ಹಲವು ಅಧಿಕಾರಿಗಳು ಹಾಗೂ ನ್ಯಾಯಮೂರ್ತಿಗಳ ಮನೆಗಳು ಕೂಡ ಇವೆ.

ಅಪಾಚೆ ಬೈಕ್ನಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಅವನನ್ನು ತಳ್ಳಿ, ಬೀಳುವಂತೆ ಮಾಡಿದ್ದರು. ಗಲಾಟೆಯ ಸಮಯದಲ್ಲಿ, ಗುಂಡು ಹಾರಿಸಲಾಗಿತ್ತು. ಇಂದು ಪಾಟ್ನಾದಲ್ಲಿ ಹೊಸ ಎಸ್ಎಸ್ಪಿ ಕಾರ್ತಿಕೇಯ ಶರ್ಮಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಈ ಹೊತ್ತಲ್ಲೇ ಇಂತಹ ಘಟನೆ ನಡೆದಿದೆ. ಕೆಲ ದಿನಗ ಹಿಂದೆ ಅಲಮ್ಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.ಮಹಿಳೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದರು.
ಈ ಘಟನೆ ನಗರದ ಅರ್ಫಾಬಾದ್ ಕಾಲುವೆಯ ಬಳಿ ನಡೆದಿದೆ. ಅಪರಾಧ ಎಸಗಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಲ್ಲದೆ, ಜೂನ್ 13 ರಂದು, ಪಾಟ್ನಾ ಪಕ್ಕದ ದಾನಾಪುರದಲ್ಲಿ ಹಗಲಿನಲ್ಲೇ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದರು. ನ್ಯೂ ಗೋಸಾಯಿ ಟೋಲಾ ಗೋಲಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಯುವಕ ಶ್ರವಣ್ ಕುಮಾರ್ ತನ್ನ ಮನೆಯ ಬಳಿ ನಿಂತಿದ್ದ.

ಅಷ್ಟರಲ್ಲಿ, ದಾಳಿಕೋರರು ಅಲ್ಲಿಗೆ ಬಂದು ಅವನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು. ಗುಂಡೇಟಿನಿಂದ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಹತ್ತಿರದ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಿದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದರು.