ಬೆಂಗಳೂರಿಗೆ ನಾಳೆ ಕಾವೇರಿ ನೀರು ಬಂದ್: 24 ಗಂಟೆ ಸ್ಥಗಿತ, ಮುಂಗಡವಾಗಿ ನೀರು ಸಂಗ್ರಹಿಸಿಟ್ಟುಕೊಳ್ಳಲು BWSSB ಮನವಿ

.
ಬೆಂಗಳೂರು :ನಾಳೆ (ಗುರುವಾರ) ಬೆಳಗ್ಗೆ 6 ಗಂಟೆಯಿಂದ ಮುಂದಿನ ದಿನದ ಬೆಳಗ್ಗೆ 6 ಗಂಟೆಯವರೆಗೆ ನಗರದಲ್ಲಿ ಕಾವೇರಿ ನೀರು ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ. ಬೆಂಗಳೂರು ಜಲಮಂಡಳ (BWSSB) ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
ನಾಳೆ ಕಾವೇರಿ ನೀರು ತಾತ್ಕಾಲಿಕ ಸ್ಥಗಿತದ ಹಿಂದೆ ಇರುವ ಮುಖ್ಯ ಕಾರಣವೆಂದರೆ, ಕಾವೇರಿ 5ನೇ ಹಂತದ ಕೊಳವೆ ಮಾರ್ಗವನ್ನು ಜೋಡಿಸುವ ತುರ್ತು ನಿರ್ವಹಣಾ ಕಾಮಗಾರಿಗಳು ನಡೆಯಲಿದೆ. ಈ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದರೊಂದಿಗೆ, ಮುಂದಿನ ದಿನಗಳಲ್ಲಿ ನಗರಕ್ಕೆ ಉತ್ತಮ ಪ್ರಮಾಣದಲ್ಲಿ ಮತ್ತು ಸ್ಥಿರವಾಗಿ ನೀರು ಸರಬರಾಜು ಮಾಡುವ ಉದ್ದೇಶವಿದೆ.
ಹೀಗಾಗಿ ನಾಳೆ ಸಂಪೂರ್ಣ ದಿನ ನಗರದ ಬಹುತೇಕ ಪ್ರದೇಶಗಳಿಗೆ ನೀರು ಪೂರೈಕೆ ಸ್ಥಗಿತವಾಗಲಿದ್ದು, ಸಾರ್ವಜನಿಕರು ಅಗತ್ಯವಿರುವ ನೀರನ್ನು ಮುಂಗಡವಾಗಿ ಸಂಗ್ರಹಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಜೋಡಣಾ ಕಾರ್ಯ ಮತ್ತು ನಿರ್ವಹಣೆ
ಬೆಂಗಳೂರು ನಗರದ ವ್ಯಾಪಕ ಜನಸಂಖ್ಯೆ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು, ಹಲವು ಹಂತಗಳಲ್ಲಿ ನೀರಿನ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಈ ಭಾಗದಲ್ಲಿ ನಡೆಯುತ್ತಿರುವ ಕೊಳವೆ ಮಾರ್ಗ ಜೋಡಣಾ ಕಾರ್ಯವು ಮಹತ್ವಪೂರ್ಣ ಹಂತವಾಗಿದೆ. ಇನ್ನುಮುಂದೆ ಹೆಚ್ಚು ಪ್ರಮಾಣದಲ್ಲಿ ಕಾವೇರಿ ನೀರನ್ನು ನಗರಕ್ಕೆ ತಲುಪಿಸಲು ಈ ಮಾರ್ಗ ಸಹಕಾರಿಯಾಗಲಿದೆ.
ಯಾವ್ಯಾವ ಪ್ರದೇಶಗಳಿಗೆ ಪರಿಣಾಮ?
ಈ ತಾತ್ಕಾಲಿಕ ಸ್ಥಗಿತದಿಂದ ಬಾಗಲೂರು, ಹೆಬ್ಬಾಳ, ಜಯನಗರ, ಮಲ್ಲೇಶ್ವರಂ, ರಾಜಾಜಿನಗರ, ಬನಶಂಕರಿ, ಕೆಂಗೇರಿ ಸೇರಿದಂತೆ ಬೆಂಗಳೂರು ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ ಭಾಗಗಳ ಹೆಚ್ಚಿನ ಪ್ರದೇಶಗಳಿಗೆ ನೀರಿನ ಕೊರತೆ ಕಾಣಿಸಬಹುದು. ಹೀಗಾಗಿ ಜನರಿಗೆ ನಾಳೆ ಪೂರ್ತಿ ಕಾವೇರಿ ನೀರು ಸರಬರಾಜು ಸಂಪೂರ್ಣ ಸ್ಥಗಿತವಾಗಲಿದ್ದು, ಮುಂಗಡವಾಗಿ ಅಗತ್ಯವಿರುವಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳಲು ಸೂಚನೆ ನೀಡಲಾಗಿದೆ.
ಜಲಮಂಡಳಿ ಸೂಚನೆಗಳು ಏನು?
ಬಡಾವಣೆ, ಅಪಾರ್ಟ್ಮೆಂಟ್ಗಳು, ಕಚೇರಿ ಮತ್ತು ಸರ್ಕಾರಿ ಸಂಸ್ಥೆಗಳು ತಮ್ಮ ಅಗತ್ಯಕ್ಕೆ ತಕ್ಕಷ್ಟು ನೀರನ್ನು ಮುಂಚಿತವಾಗಿ ಸಂಗ್ರಹಿಸಿಕೊಳ್ಳಬೇಕು. ನೀರನ್ನು ಅರ್ಥಪೂರ್ಣವಾಗಿ ಬಳಸುವ ಹಾಗೂ ವ್ಯರ್ಥಗೊಳ್ಳದಂತೆ ನೋಡಿಕೊಳ್ಳುವ ಸಲಹೆಯನ್ನು BWSSB ನೀಡಿದೆ.
ಸದ್ಯ 24 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತವಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಸಹಕರಿಸಬೇಕು ಎಂದು ಬಿಡಬ್ಲ್ಯೂಎಸ್ಎಸ್ಬಿ ಮನವಿ ಮಾಡಿದೆ. ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ನಗರವಾಸಿಗಳಿಗೆ ಉತ್ತಮ ಹಾಗೂ ನಿರಂತರ ನೀರು ಪೂರೈಕೆ ಸಾಧ್ಯವಾಗಲಿದೆ. ಹೀಗಾಗಿ ಕಾಮಗಾರಿಗೆ ಯಾವುದೇ ತೊಂದರೆಯಾಗದಂತೆ ಜನರು ಸಂದರ್ಭ ಅರ್ಥ ಮಾಡಿಕೊಂಡು ಎಲ್ಲಾ ಅಗತ್ಯ ಕ್ರಮಕಯಗೊಳ್ಳಬೇಕೆಂದು ಒಂದು ದಿನದ ಮುಂಚೆಯೇ ತಿಳಿಸಲಾಗಿದೆ.